ಬೆಂಗಳೂರಿಗೆ ಶೀಘ್ರವೇ ಬರಲಿದೆ 775 ಎಂಎಲ್ಡಿ ಹೆಚ್ಚುವರಿ ಕಾವೇರಿ ನೀರು
ಬೆಂಗಳೂರು ಜು.7: ನಿರಂತರವಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವುದೇ ದೊಡ್ಡ ಸವಾಲಾಗಿದೆ. ಇಂತಹ ಸವಾಲು ಎದುರಿಸುವ ನಿಟ್ಟಿನಲ್ಲಿ ಮತ್ತು ಭವಿಷ್ಯದಲ್ಲಿ ಬಂದೊದಗುವ ನೀರಿನ ಸಂಕಷ್ಟಗಳಿಗೆ ಪರಿಹಾರ ಎಂಬಂತೆ ಬೆಂಗಳೂರು ಜಲಮಂಡಳಿ ಮುಂದಿನ 30 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಹೆಚ್ಚುವರಿ ಕಾವೇರಿ ನೀರು ತರುವಲ್ಲಿ ಕಾರ್ಯೋನ್ಮುಖವಾಗಿದೆ.
ಕೆಲವು ವರ್ಷಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಉತ್ತಮ ಮಳೆ ಆಗಿದ್ದರಿಂದ ಕೆರೆಗಳು ಕಟ್ಟೆಗಳು ತುಂಬಿವೆ. ಅಂತರ್ಜಲ ಮಟ್ಟ ತುಸು ಸುಧಾರಿಸಿದೆ. ಹೀಗಾಗಿ ರಾಜಧಾನಿಯಲ್ಲಿ ನೀರಿನ ಹಾಹಾಕಾರ ಕಂಡು ಬಂದಿಲ್ಲ. ಇನ್ನು ನಗರದ ಸುಮಾರು 1.30 ಕೋಟಿ ಜನರಿಗೆ ನಿತ್ಯ ಸುಮಾರು 1430 ದಶಲಕ್ಷ ಲೀಟರ್ (ಎಂಎಲ್ಡಿ) ನೀರನ್ನು ಜಲಮಂಡಳಿ ಪೂರೈಸುತ್ತಿದೆ.
ಒಂದು ನಿಲ್ದಾಣ ಒಂದು ಉತ್ಪನ್ನ: ನಿಲ್ದಾಣದಲ್ಲಿ ಯಾವ ಉತ್ಪನ್ನ ಸಿಗಲಿದೆ?
ಅದರ ಮುಂದುವರಿದ ಭಾಗವಾಗಿ, 2007ರಲ್ಲಿ ಬಿಬಿಎಂಪಿ ವ್ಯಾಪ್ತಿಗೆ ಸೇರಿದ ಒಟ್ಟು 225 ಚ.ಕಿ.ಮೀ.ನ 110 ಹಳ್ಳಿಗಳ ಜನರಿಗೆ ಕುಡಿಯಲು ನೀರು ಒದಗಿಸುವ ಉದ್ದೇಶದ ಜತೆಗೆ ಭವಿಷ್ಯದಲ್ಲಿ ಹೆಚ್ಚಾಗಲಿರುವ ಜನಸಂಖ್ಯೆ ಆಧಾರದಲ್ಲಿ ಜಲಮಂಡಳಿಯು ಕಾವೇರಿ ನೀರಿನ ಐದನೇ ಹಂತ ಯೋಜನೆ ಕೈಗೆತ್ತಿಕೊಂಡಿದೆ. ಈ ಯೋಜನೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಯೋಜನೆಯಡಿ ಮುಂದಿನ 30ವರ್ಷಕ್ಕೆ ಬೇಕಾಗುವಷ್ಟು ಹೆಚ್ಚುವರಿ 775 ಎಂಎಲ್ಡಿ ನೀರು ಬೆಂಗಳೂರಿಗೆ ಲಭ್ಯವಾಗಲಿದೆ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
2022ರ ಡಿಸೆಂಬರ್ ಗೆ ಕೆಲಸ ಪೂರ್ಣ
ಜಪಾನ್ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆ (ಜೈಕಾ) ನಿಂದ ಜಲಮಂಡಳಿ ಒಟ್ಟು 5500 ಕೋಟಿ ರೂ. ಸಾಲ ಪಡೆದಿದೆ. ಇದರಲ್ಲಿ 2,940 ಕೋಟಿ ಹಣವನ್ನು ಕಾವೇರಿ ಐದನೇ ಹಂತದ ಯೋಜನೆಗೆ, ಒಳಚರಂಡಿ, ಪೈಪ್ಲೈನ್ ಕಾಮಗಾರಿಗಳಿಗೆ ಬಳಸಲು ಉದ್ದೇಶಿಸಲಾಗಿದೆ.
ಯೋಜನೆ ಪೂರ್ಣಗೊಳಿಸಲು ಜೈಕಾ ಸಂಸ್ಥೆ 2023ರ ಮಾರ್ಚ್ ಇಲ್ಲವೇ ಆಗಸ್ಟ್ ವರೆಗೆ ಗಡುವು ನೀಡಿದೆ. ಆದರೆ ಕಾಮಗಾರಿ ಕೆಲಸ ತ್ವರಿತಗತಿಯಲ್ಲಿ ಮುಗಿಸುತ್ತಿರುವ ಬೆಂಗಳೂರು ಜಲಮಂಡಳಿಯು ಇದೇ ವರ್ಷ 2022ರ ಡಿಸೆಂಬರ್ ವೇಳೆಗೆ ಯೋಜನೆಯ ಎಲ್ಲ ಕೆಲಸ ಮುಗಿಸುವ ಗುರಿ ಹೊಂದಿದೆ. ಇದರಿಂದ ಮುಂದಿನ ಆರೇ ತಿಂಗಳಲ್ಲಿ ನಗರಕ್ಕೆ 775ಎಂಎಲ್ಡಿ ನೀರು ಲಭ್ಯವಾಗಲಿದೆ.
ಬೆಂಗಳೂರಲ್ಲಿ ಗೋಧಿ, ಎಣ್ಣೆ ದುಬಾರಿ, ಬ್ರೇಡ್ ಬೆಲೆಯೂ 5 ರೂ. ಹೆಚ್ಚಳ
50ಲಕ್ಷ ಜನರಿಗೆ ನೀರು ಪೂರೈಕೆ
ನಗರಕ್ಕೆ ಸೇರ್ಪಡೆಗೊಂಡ ಹಳ್ಳಿಗಳು ಸೇರಿದಂತೆ ನಗರದಲ್ಲಿ 2049ರ ವೇಳೆಗೆ 50ಲಕ್ಷ ಜನಸಂಖ್ಯೆ ಹಚ್ಚಾಗಲಿದೆ. ಅಷ್ಟು ಜನರಿಗೆ ಲಭ್ಯವಾಗುವ ನೀರನ್ನು ಐದನೇ ಹಂತ ಯೋಜನೆಯಡಿ ಪೈಪ್ ಲೈನಗಳ ಮೂಲಕ ನೀರು ಶುದ್ಧೀಕರಣ ಘಟಕಗಳಿಗೆ ಹರಿಸಿ, ನಲಮಟ್ಟದ ನೀರು ಸಂಗ್ರಹಾಗಾರಗಳ ಮೂಲಕ ಮನೆ ಮನೆಗೆ ಪೂರೈಸಲಾಗುವುದು. ಈ ಸಂಬಂಧ ಈಗಾಗಲೇ 2686ಕಿ.ಮೀ. ಕೊಳವೆ ಜೋಡಣಾ ಕಾರ್ಯ ಹಮ್ಮಿಕೊಂಡಿತ್ತು. ಏಳು ಕಡೆಗಳಲ್ಲಿ 260 ಎಂಎಲ್ಡಿ ಸಾಮರ್ಥ್ಯದ ಜಲಸಂಗ್ರಾಹಾರಗಳನ್ನು ಸ್ಥಾಪಿಸಲಾಗಿದೆ.
ಜೋಡಣೆಗೊಂಡ ಪೈಪ್ ಲೈನ್ ಕಾಮಗಾರಿ
ಕಾವೇರಿ ನೀರು ಐದನೇ ಹಂತದ ಯೋಜನೆಗಾಗಿ ಜಲಮಂಡಳಿ ಉದ್ದೇಶಿತ ಕೊಳವೆ ಜೋಡಿಗಳಲ್ಲಿ ಬ್ಯಾಟರಾಯನಪುರ (710 ಕಿ.ಮೀ.), ಮಹದೇವಪುರ (581 ಕಿ.ಮೀ.), ದಾಸರಹಳ್ಳಿ (477 ಕಿ.ಮೀ.), ಬೊಮ್ಮನಹಳ್ಳಿ (470 ಕಿ.ಮೀ.), ರಾಜರಾಜೇಶ್ವರಿ ನಗರ (212 ಕಿ.ಮೀ.) ವಲಯಗಳ ವ್ಯಾಪ್ತಿಯಲ್ಲಿ ಕೊಳವೆ ಜೋಡಣೆ ಕಾಮಗಾರಿ ಪೂರ್ಣಗೊಂಡಿದೆ. ಅಲ್ಲದೇ ಒಳಚರಂಡಿ ವ್ಯವಸ್ಥೆ ಇಲ್ಲದೇ ಪರದಾಡುತ್ತಿದ್ದ ನಗರದ ಹೊರ ವಲಯದ ಪ್ರದೇಶಗಳಿಗೆ ನೀರು ಪೂರೈಕೆಗೆ ಮತ್ತು ಯುಜಿಡಿ ಸಂಪರ್ಕಕ್ಕಾಗಿ ಕೈಗೊಂಡಿದ್ದ ಕಾಮಗಾರಿ ಶೇ.50ರಷ್ಟು ಪೂರ್ಣಗೊಂಡಿದೆ ಎಂದು ತಿಳಿದು ಬಂದಿದೆ.
ನೀರು ಶುದ್ಧೀಕರಣ ಯಂತ್ರೋಪಕರಣ ಆಮದು ಬಾಕಿ
ಕಾವೇರಿ ಐದನೇ ಹಂತದ ಯೋಜನೆ ಬಹುತೇಕ ಪೂರ್ಣಗೊಂಡಿದ್ದು, ಕೆಲವೆಡೆ ಬಾಕಿ ಇರುವ ಕೆಲಸಗಳು ಮುಂದಿನ ಎರಡು ಮೂರು ತಿಂಗಳಲ್ಲಿ ಮುಗಿಯಲಿವೆ. ಅಷ್ಟರಲ್ಲೇ ಯೋಜನೆಗೆ ಅಗತ್ಯವಾದ ನೀರು ಶುದ್ಧೀಕರಣ ಪಂಪಿಂಗ್ ಯಂತ್ರೋಪಕರಣ, ಬೃಹತ್ 100ಮೀಟರ್ ಗಳ ವಾಲ್ಗಳನ್ನು ಜರ್ಮನಿ, ಸ್ವಿಡನ್ ಜಪಾನ್ನಿಂದ ತರಸಿಕೊಳ್ಳಲು ಉದ್ದೇಶಿಸಲಾಗಿದೆ. ಈ ಸಂಬಂಧ ನಾನು ಆಸ್ಟ್ರೀಯಾಗೆ ಹೋಗಿ ಯಂತ್ರೋಪಕರಣ ಪರಿಶೀಲಿಸಿದ್ದೇನೆ.
ಪರಿಶೀಲನೆ ಪ್ರಕ್ರಿಯೆ ಮುಗಿದ ಬಳಿಕ ಯಂತ್ರೋಪಕರಣಗಳು ತರಿಸಲಾಗುವುದು. ಈ ಎಲ್ಲ ಪ್ರಕ್ರಿಯೆಗೆ ಸುಮಾರು ನಾಲ್ಕು ತಿಂಗಳು ಹಿಡಿಯಬಹುದು. ಅಷ್ಟರಲ್ಲೇ ಬಾಕಿ ಕಾಮಗಾರಿ ಕೆಲಸ ಮುಗಿಸಲಿದ್ದೇವೆ. ಎಲ್ಲವು ಅಂದುಕೊಂಡಂತಾದರೆ ಈ ವರ್ಷಾಂತ್ಯಕ್ಕೆ ಕಾವೇರಿ ನೀರು ಬೆಂಗಳೂರಿಗೆ ಬರಬಹುದು. ಇಲ್ಲವೇ 2023ರ ಮಾರ್ಚ್ ಗೆ 775 ಎಂಎಲ್ಡಿ ನೀರು ಲಭ್ಯವಾಗಲಿದೆ ಎಂದು ಜಲಮಂಡಳಿ (ಕಾವೇರಿ ವಿಭಾಗ) ಮುಖ್ಯ ಅಭಿಯಂತರಾದ ಎಸ್. ವಿ. ರಮೇಶ್ ಹೇಳಿದರು.
Recommended Video