ಆಡಿಯೋ ಕ್ಲಿಪ್ ತನಿಖೆ ಬಗ್ಗೆ ಸದನದಲ್ಲಿ ಗದ್ದಲ, ಕಲಾಪ ಅರ್ಧಗಂಟೆ ಮುಂದೂಡಿಕೆ
ಬೆಂಗಳೂರು, ಫೆಬ್ರವರಿ 11: ಭೋಜನ ವಿರಾಮದ ಬಳಿಕ ಕಲಾಪ ಆರಂಭವಾದಾಗ ಆಡಳಿತ ಮತ್ತು ವಿರೋಧ ಪಕ್ಷದ ನಡುವೆ ಆಡಿಯೋ ಕ್ಲಿಪ್ ಚರ್ಚೆ ಕಾವೇರಿತು.
ಆಡಿಯೋ ಕ್ಲಿಪ್ ಬಗ್ಗೆ ವಿಶೇಷ ತಂಡದ ತನಿಖೆ ಬೇಡ, ಸದನ ಸಮಿತಿ ಅಥವಾ ಸ್ಪೀಕರ್ ಅವರಿಂದ ನಿರ್ದೇಶನದಲ್ಲಿ ನ್ಯಾಯಾಂಗ ತನಿಖೆ ಆಗಲಿ ಎಂದು ವಿರೋಧ ಪಕ್ಷದ ಸದಸ್ಯರು ಪಟ್ಟು ಹಿಡಿದರು.
ಈ ಪ್ರಕರಣದಲ್ಲಿ ಸಿಎಂ ಕುಮಾರಸ್ವಾಮಿ ಅವರು ಸಹ ಪಾರ್ಟಿ (ಸಂಬಂಧಿತ ವ್ಯಕ್ತಿ) ಆಗಿದ್ದಾರೆ ಹಾಗಾಗಿ ತನಿಖೆಯನ್ನು ಅವರ ನಿರ್ದೇಶನದಲ್ಲಿ ಮಾಡುವುದು ಬೇಡ, ನಮಗೆ ಸರ್ಕಾರದ ಮೇಲೆ ನಂಬಿಕೆ ಇಲ್ಲ ಎಂದು ವಿರೋಧ ಪಕ್ಷದ ಜಗದೀಶ್ ಶೆಟ್ಟರ್ ಮತ್ತು ಮಾಧುಸ್ವಾಮಿ ಅವರು ಹೇಳಿದರು.

ಬಿಜೆಪಿಯ ಬಸವರಾಜ ಬೊಮ್ಮಾಯಿ ಮಾತನಾಡಿ, ಸ್ಪೀಕರ್ ಅವರ ಹೆಸರಿಗೆ ಮಸಿ ಬಳಿಯುವ ಉದ್ದೇಶದಿಂದ ಕುಮಾರಸ್ವಾಮಿ ಅವರು ಆಡಿಯೋ ಕ್ಲಿಪ್ ಅನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡಿದ್ದಾರೆ ಎಂದರು.
ಆದರೆ ಇದಕ್ಕೆ ತೀವ್ರ ವಿರೋಧವನ್ನು ಕಾಂಗ್ರೆಸ್ ಸದಸ್ಯರು ವ್ಯಕ್ತಪಡಿಸಿದರು. ವ್ಯಭಿಚಾರ ಮಾಡುವುದು ಸರಿ, ಹಾಗೆ ಮಾಡುವುದು ತಪ್ಪು ಎನ್ನುವುದು ತಪ್ಪು ಎಂದು ಹೇಳುತ್ತಿದ್ದೀರಿ ಎಂದು ಕೃಷ್ಣಬೈರೇಗೌಡ ಅವರು ತೀವ್ರವಾಗಿ ಟೀಕಿಸಿದರು.
ಚರ್ಚೆಯ ನಡುವೆ ಸಿಎಂ ಕುಮಾರಸ್ವಾಮಿ ಅವರು ಸದನಕ್ಕೆ ಆಗಮಿಸಿದರು. ಕೂಡಲೇ ವಿರೋಧ ಪಕ್ಷದ ಸದಸ್ಯರು ಗದ್ದಲ ಹೆಚ್ಚು ಮಾಡಿದರು. ಸಿಎಂ ಅವರೇ ತಮ್ಮ ಪಕ್ಷದವರನ್ನು ಕಳಿಸಿ ಧ್ವನಿ ರೆಕಾರ್ಡ್ ಮಾಡಿದ್ದಾರೆ ಇದು ಅಪರಾಧ ಸಿಎಂಗೆ ನಾಚಿಕೆ ಆಗಬೇಕು ಎಂದು ಜೋರಾಗಿ ಗದ್ದಲ ಎಬ್ಬಿಸಿದರು.
ಗದ್ದಲ ಹೆಚ್ಚಾದ ಕಾರಣ ಸಭಾಧ್ಯಕ್ಷ ರಮೇಶ್ ಕುಮಾರ್ ಅವರು ಸದನವನ್ನು (4:00 ಗಂಟೆ ವೇಳೆಗೆ) ಅರ್ಧಗಂಟೆಗೆ ಮುಂದೂಡಿದರು. ಸದನ ಮತ್ತೆ ಪ್ರಾರಂಭವಾದಾಗಲೂ ಸಹ ಈ ಗದ್ದಲ ಮುಂದುವರೆಯುವ ಸಾಧ್ಯತೆ ಇದೆ.












Click it and Unblock the Notifications