ಬೆಂಗಳೂರು : ಅಪಾರ್ಟ್ಮೆಂಟ್ ನಿರ್ಮಿಸಿದ್ದ ಉದ್ಯಮಿ ಆತ್ಮಹತ್ಯೆ
ಬೆಂಗಳೂರು, ನವೆಂಬರ್ 13 : 'ಚೌರಾಸಿಯಾ ಮ್ಯಾನರ್ ಫೇಸ್-2' ಅಪಾರ್ಟ್ಮೆಂಟ್ ನಿರ್ಮಿಸಿದ್ದ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಪ್ರಕಾಶ್ ಚೌರಾಸಿಯಾ ಎಂಬುವವರು ಮನೆಯ ಶೌಚಾಲಯದಲ್ಲಿ ಗುಂಡು ಹಾರಿಸಿಕೊಂಡು ಸೋಮವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ದೊಡ್ಡನೆಕುಂದಿಯ ಫ್ರೆಂಡ್ಸ್ ಲೇಔಟ್ ನಿವಾಸಿಯಾಗಿದ್ದರು.
ಪತ್ನಿ ಮತ್ತು ಇಬ್ಬರು ಮಕ್ಕಳ ಜೊತೆಯಲ್ಲಿ ವಾಸವಿದ್ದ ಅವರು, ಶೌಚಾಲಯಕ್ಕೆ ತೆರಳಿ ತಮ್ಮ ಪಿಸ್ತೂಲ್ನಿಂದ ತಲೆಗೆ ಗುಂಡು ಹೊಡೆದುಕೊಂಡಿದ್ದಾರೆ. ಗುಂಡಿನ ಶಬ್ದ ಕೇಳಿದ ಪತ್ನಿ ಅವರನ್ನು ಸ್ಥಳೀಯರ ಸಹಕಾರದಿಂದ ವೈದೇಹಿ ಆಸ್ಪತ್ರೆಗೆ ದಾಖಲು ಮಾಡಿದ್ದರು.

ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗಲೇ ಅವರು ಮೃತಪಟ್ಟಿದ್ದರು ಎಂದು ವೈದ್ಯರು ಹೇಳಿದ್ದರು. ಎಚ್ಎಎಲ್ ಠಾಣೆ ಪೊಲೀಸರು ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.
ವ್ಯವಹಾರದಲ್ಲಿ ನಷ್ಟ : ವಿಜಯಪ್ರಕಾಶ್ ಚೌರಾಸಿಯಾ ಅವರು ಸಹೋದರನ ಜೊತೆ ಸೇರಿ ಮತ್ತೊಂದು ಅಪಾರ್ಟ್ಮೆಂಟ್ ನಿರ್ಮಿಸುತ್ತಿದ್ದರು. ಅದಕ್ಕಾಗಿ ಸಾಲ ಮಾಡಿಕೊಂಡಿದ್ದರು. ಜೊತೆಗೆ ಹಣಕಾಸು ವ್ಯವಹಾರ ನಡೆಸುತ್ತಿದ್ದ ಅವರಿಗೆ ಅಪಾರ ನಷ್ಟವಾಗಿತ್ತು. ಆದ್ದರಿಂದ, ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮುಖ್ಯಮಂತ್ರಿಗಳಿಗೆ ದೂರು : ಮಾರತ್ತಹಳ್ಳಿ ಬಳಿಯ 'ಚೌರಾಸಿಯಾ ಮ್ಯಾನರ್ ಫೇಸ್-2' ಅಪಾರ್ಟ್ಮೆಂಟ್ನಲ್ಲಿ ಫ್ಲ್ಯಾಟ್ ಕೊಡುವುದಾಗಿ ಹೇಳಿ ಮಧ್ಯಪ್ರದೇಶ ಮೂಲದ ಮಹಿಳೆಯಿಂದ ವಿಜಯಪ್ರಕಾಶ್ ಚೌರಾಸಿಯಾ ಸಹೋದರರು 60 ಲಕ್ಷ ಪಡೆದಿದ್ದರು.
ಆದರೆ, ಫ್ಲ್ಯಾಟ್ ಅನ್ನು ಮಹಿಳೆಗೆ ಹಸ್ತಾಂತರ ಮಾಡಿರಲಿಲ್ಲ. ಈ ಕುರಿತು ಮಹಿಳೆ ಮುಖ್ಯಮಂತ್ರಿಗಳಿಗೆ ಜನತಾ ದರ್ಶನದಲ್ಲಿ ದೂರು ನೀಡಿದ್ದರು. ಮುಖ್ಯಮಂತ್ರಿಗಳು ಸಮಸ್ಯೆ ಸರಿಪಡಿಸುವಂತೆ ಪೊಲೀಸರಿಗೆ ಸೂಚಿಸಿದ್ದರು.
ವೈಟ್ಫೀಲ್ಡ್ ಠಾಣೆ ಪೊಲೀಸರು ಈ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಿದ್ದರು. ಮಹಿಳೆ ಹೆಸರಿಗೆ ಫ್ಲ್ಯಾಟ್ ನೋಂದಣಿ ಮಾಡಿಕೊಡಲು ಸಹಕಾರ ನೀಡಿದ್ದರು.












Click it and Unblock the Notifications