Budget; ಟೆಲಿ ಮಾನಸಿಕ ಆರೋಗ್ಯ ಕಾರ್ಯಕ್ರಮಕ್ಕೆ ನಿಮ್ಹಾನ್ಸ್ ನೇತೃತ್ವ
ಬೆಂಗಳೂರು, ಫೆಬ್ರವರಿ 02; ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2022-23ರ ಬಜೆಟ್ನಲ್ಲಿ ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಕಾರ್ಯಕ್ರಮವನ್ನು ಆರಂಭಿಸುವುದಾಗಿ ಘೋಷಣೆ ಮಾಡಿದ್ದಾರೆ.
ಬೆಂಗಳೂರಿನಲ್ಲಿರುವ ನಿಮ್ಹಾನ್ಸ್ ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಕಾರ್ಯಕ್ರಮಕ್ಕೆ ನೋಡೆಲ್ ಕೇಂದ್ರವಾಗಿದೆ. ಅಲ್ಲದೇ ಬೆಂಗಳೂರಿನ ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ(ಐಐಐಟಿ-ಬಿ) ಇದಕ್ಕೆ ತಂತ್ರಜ್ಞಾನ ಒದಗಿಸಲಿದೆ.
ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಕಾರ್ಯಕ್ರಮವು 23 ಟೆಲಿ-ಮೆಂಟಲ್ ಹೆಲ್ತ್ ಸೆಂಟರ್ ಆಫ್ ಎಕ್ಸಲೆನ್ಸ್ ನೆಟ್ವರ್ಕ್ ಒಳಗೊಂಡಿರುತ್ತದೆ. ಮಾನಸಿಕ ಆರೋಗ್ಯ ಸಮಾಲೋಚನೆ ಮತ್ತು ಆರೈಕೆ ಸೇವೆಗಳ ಸುಧಾರಣೆಗೆ ಈ ಕಾರ್ಯಕ್ರಮ ಆರಂಭಿಸಲಾಗುತ್ತಿದೆ.

ತಮ್ಮ ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್, "ಸಾಂಕ್ರಾಮಿಕ ರೋಗವು ಎಲ್ಲಾ ವಯಸ್ಸಿನ ಜನರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸಿದೆ. ಆದ್ದರಿಂದ ಗುಣಮುಟ್ಟದ ಆರೋಗ್ಯ ಸಮಾಲೋಚನೆ ಮತ್ತು ಆರೈಕೆ ಸೇವೆಗಳ ಸುಧಾರಣೆಗಾಗಿ ಈ ಕಾರ್ಯಕ್ರಮ ಘೋಷಣೆ ಮಾಡಲಾಗಿದೆ" ಎಂದರು.
2020ರ ಮಾರ್ಚ್ 28 (ಮೊದಲ ಹಂತದ ಲಾಕ್ ಡೌನ್ ಘೋಷಣೆ) ಬಳಿಕ ವಾರದಲ್ಲಿ 4 ದಿನ ನಿಮ್ಹಾನ್ಸ್ ಮಾನಸಿಕ ಆರೋಗ್ಯ ಸುಧಾರಣೆಗಾಗಿ ದೂರವಾಣಿ ಮೂಲಕ ಸಲಹೆಗಳನ್ನು ನೀಡಿದೆ. ಸುಮಾರು 6 ಲಕ್ಷ ಕರೆಗಳು 080-46110007 ಸಹಾಯವಾಣಿಗೆ ಬಂದಿವೆ.
ಕೋವಿಡ್ ಲಾಕ್ಡೌನ್ ಸಮಯದಲ್ಲಿ 'ಲಾಕ್ಡೌನ್ನಿಂದ ಮಾನಸಿಕ - ಸಾಮಾಜಿಕ ಪರಿಣಾಮಗಳು ಹಾಗೂ ಅದನ್ನು ನಿಭಾಯಿಸುವುದು ಹೇಗೆ' ಎಂಬುದರ ಕುರಿತು 7 ಶೀರ್ಷಿಕೆಗಳ ಮುದ್ರಿತ ಮತ್ತು ಇ - ಆವೃತ್ತಿಗಳನ್ನು ಕೇಂದ್ರ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯ ಬಿಡುಗಡೆ ಮಾಡಿತ್ತು.
ಲಾಕ್ಡೌನ್ ಆರ್ಥಿಕ ಹಾಗೂ ಕೌಟುಂಬಿಕ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿತ್ತು. ದೈಹಿಕ ಆರೋಗ್ಯ ಮತ್ತು ಸಾಮಾಜಿಕ-ಆರ್ಥಿಕತೆಯ ಹೊಂದಾಣಿಕೆಯೊಂದಿಗೆ ಕೊರೊನಾ ನಂತರದ ಸಮಾಜ ಮೊದಲಿನಂತಾಗಲು ಈ ಪುಸ್ತಕಗಳಲ್ಲಿ ಹಲವಾರು ಸಲಹೆಗಳನ್ನು ನೀಡಲಾಗಿತ್ತು.
ಈ ಪುಸ್ತಕಗಳು ಸಾಂಕ್ರಾಮಿಕ ರೋಗ ಮತ್ತು ಲಾಕ್ಡೌನ್ನಿಂದ ಉದ್ಭವಿಸಬಹುದಾದ ಮಾನಸಿಕ ಒತ್ತಡ ಮತ್ತು ಆತಂಕವನ್ನು ನಿಭಾಯಿಸಲು ಬಹಳ ಮಹತ್ವದ ಮತ್ತು ಪ್ರಾಯೋಗಿಕ ಸಲಹೆಗಳನ್ನು ನೀಡಿವೆ.
ಇ-ಮನಸ್; ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಕಾರ್ಯಕ್ರಮವು 23 ಟೆಲಿ-ಮೆಂಟಲ್ ಹೆಲ್ತ್ ಸೆಂಟರ್ ಆಫ್ ಎಕ್ಸಲೆನ್ಸ್ ನೆಟ್ವರ್ಕ್ ಒಳಗೊಂಡಿರುತ್ತದೆ. ಇದು ಕರ್ನಾಟಕದಲ್ಲಿರುವ ಇ-ಮನಸ್ ಕಾರ್ಯಕ್ರಮಗಳನ್ನು ಸಹ ಇದರಲ್ಲಿ ಒಳಗೊಂಡಿರುತ್ತದೆ.
ಈ ಕಾರ್ಯಕ್ರಮದಡಿ ವೈದ್ಯಕೀಯ ದಾಖಲೆ ಸಂಗ್ರಹ ಮಾಡಲಾಗುತ್ತದೆ. ಕರೆ ಮಾಡಿದ ವ್ಯಕ್ತಿಗೆ ಸಲಹೆಗಳನ್ನು ನೀಡುವ ಜೊತೆಗೆ ಸದಾ ಅವರಿಗೆ ವೈದ್ಯಕೀಯ ನೆರವು ನೀಡಲು ಸಹ ವ್ಯವಸ್ಥೆ ಮಾಡಲಾಗಿದೆ.
ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಮನೋಚೈತನ್ಯ ಕಾರ್ಯಕ್ರಮ, ಸಮುದಾಯ ಮಾನಸಿಕ ಆರೋಗ್ಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಚಿಕಿತ್ಸೆಯ ಅಂತರವನ್ನು ಪರಿಹರಿಸಲು ಮತ್ತು ಪಿಎಚ್ಸಿ ಮಟ್ಟದಿಂದ ಪ್ರಾರಂಭವಾಗುವ ಎಲ್ಲಾ ಆರೋಗ್ಯ ಸಿಬ್ಬಂದಿಗೆ ಮಾನಸಿಕ ಅಸ್ವಸ್ಥರನ್ನು ಮೊದಲೇ ಗುರುತಿಸಲು ಮತ್ತು ಚಿಕಿತ್ಸೆ ನೀಡಲು ತರಬೇತಿ ನೀಡಲಾಗುತ್ತದೆ.
ಕರ್ನಾಟಕದಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮವನ್ನು ಎಲ್ಲಾ ಜಿಲ್ಲೆಗಳಲ್ಲಿ ಮತ್ತು ಬಿಬಿಎಂಪಿಯಲ್ಲಿ ಜಾರಿಗೆ ತರಲಾಗಿದೆ. ತಾಲ್ಲೂಕು ಮಾನಸಿಕ ಆರೋಗ್ಯ ಕಾರ್ಯಕ್ರಮ 10 ತಾಲ್ಲೂಕುಗಳಲ್ಲಿ ಜಾರಿಯಲ್ಲಿದೆ.
ಕರ್ನಾಟಕ ಸರ್ಕಾರದ ಒಂದು ವಿಶಿಷ್ಟ ಕಾರ್ಯಕ್ರಮ ಮನೋಚೈತನ್ಯವಾಗಿದೆ. ಈ ಕಾರ್ಯಕ್ರಮದಡಿಯಲ್ಲಿ, ಡಿಎಂಹೆಚ್ಪಿ ಮನೋವೈದ್ಯರು ಆಯ್ದ ಮಂಗಳವಾರ, ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಮಾನಸಿಕ ಅಸ್ವಸ್ಥರಿಗೆ ತಜ್ಞ ಸೇವೆಗಳನ್ನು ಒದಗಿಸುತ್ತಾರೆ. ಪ್ರಸ್ತುತ ಇದು ರಾಜ್ಯದ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ಲಭ್ಯವಿದೆ.
ಪ್ರತಿ ಜಿಲ್ಲೆಗೆ ಒಂದು ಮಾನ್ಯತೆ ಪಡೆದ ಎನ್ಜಿಒಗಳಿಂದ ಚೇತರಿಸಿಕೊಂಡ ಮಾನಸಿಕ ಸ್ವಸ್ಥರಿಗಾಗಿ ಡೇ ಕೇರ್ ಸೆಂಟರ್/ ಪುನರ್ವಸತಿ ಕೇಂದ್ರವಿದೆ. ಈ ಕೇಂದ್ರಗಳು 15 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಎಲ್ಲಾ ಜಿಲ್ಲೆಗಳಲ್ಲಿ ಈ ಕೇಂದ್ರಗಳನ್ನು ಪ್ರಾರಂಭಿಸಲು ಪ್ರಯತ್ನಗಳು ಮುಂದುವರೆದಿದೆ.












Click it and Unblock the Notifications