ರಾಜ್ಯ ಒಡೆದು ಜೆಡಿಎಸ್ ಬಲಪಡಿಸಲು ದೇವೇಗೌಡ ಹುನ್ನಾರ: ಬಿಎಸ್ವೈ
ಬೆಂಗಳೂರು, ಜು.30: ರಾಜ್ಯವನ್ನು ಒಡೆದು ಜೆಡಿಎಸ್ ಬಲಪಡಿಸಲು ಎಚ್ಡಿ ದೇವೇಗೌಡ ಅವರು ಹುನ್ನಾರ ನಡೆಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ಈ ಕುರಿತು ಹೇಳಿಕೆ ನೀಡಿರುವ ಅವರು, ಖಂಡ ಕರ್ನಾಟಕ ನಿರ್ಮಾಣವಾಗಲು ಹಿರಿಯರೆಲ್ಲ ಸೇರಿ ರಕ್ತ ಹರಿಸಿದ್ದಾರೆ, ಆದರೆ ಕುಮಾರಸ್ವಾಮಿಯವರ ಇತ್ತೀಚಿನ ಹೇಳಿಕೆಗಳನ್ನು ನೋಡಿದರೆ ಏಕೀಕೃತ ಕರ್ನಾಟಕ ಒಡೆಯಲು ಷಡ್ಯಂತರ ನಡೆಸಿರುವ ಹಾಗೆ ಗೋಚರವಾಗುತ್ತಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಜನತೆ 104 ಶಾಸಕರನ್ನು ಚುನಾಯಿಸುವ ಮೂಲಕ ಬಿಜೆಪಿಗೆ ಬೆಂಬಲ ಸೂಚಿಸಿದರೂ ಕೂಡ 37 ಶಾಸಕರನ್ನು ಒಳಗೊಂಡ ಜೆಡಿಎಸ್, 79 ಶಾಸಕರನ್ನು ಒಳಗೊಂಡ ಕಾಂಗ್ರೆಸ್ ಪಕ್ಷದವರು ಮೈತ್ರಿ ಮೂಲಕ ಸರ್ಕಾರ ರಚಿಸಿ ಜನತೆಗೆ ಮೋಸಲ ಮಾಡುತ್ತಿದ್ದಾರೆ.

ಉತ್ತರ ಕರ್ನಾಟಕದ ಜನತೆಯನ್ನು ಸವತಿ ಮಕ್ಕಳಂತೆ ಕಾಣುತ್ತಿರುವ ಕುಮಾರಸ್ವಾಮಿಯವರು, ಸಾಲ ಮನ್ನಾ ಮಾಡಲು, ನೀವೇನು ನನಗೆ ಓಟು ಹಾಕಿದ್ದೀರಾ ಎಂದು ದುರಹಂಕಾರದ ಮಾತುಗಳನ್ನು ಆಡಿದ್ದಾರೆ.
ಬೆಂಗಳೂರಿನ ಹಣವನ್ನು ಉತ್ತರ ಕರ್ನಾಟಕದ ಅಭಿವೃದ್ಧಿಗೆ ನೀಡುತ್ತೇನೆ ಎಂದು ಹೇಳುವ ಅವರು ಮನೆಯನ್ನು ಒಡೆಯುವ ಸಂಚಿಗೆ ಕೈ ಹಾಕಿದ್ದಾರೆ.
ದೇವೇಗೌಡರು ರಾಜ್ಯವನ್ನು ಪ್ರತ್ಯೇಕಿಸುವ ಮೂಲಕ ಜೆಡಿಎಸ್ ಬಲಪಡಿಸುವ ಹುನ್ನಾರವನ್ನು ರಾಜ್ಯದ ಜನತೆ ಒಪ್ಪುವುದಿಲ್ಲ, ಈ ಹಿಂದೆ ವೀರಶೈವ-ಲಿಂಗಾಯತರನ್ನು ಪ್ರತ್ಯೇಕಿಸುವ ಹುನ್ನಾರಕ್ಕೆ ಕಾಂಗ್ರೆಸ್ ಕೈ ಹಾಕಿತ್ತು. ಇದೀಗ ಜೆಡಿಎಸ್ ಕೂಡ ಇದೇ ಹಾದಿಯಲ್ಲಿದೆ. ಯಾವುದೇ ಕಾರಣಕ್ಕೂ ರಾಜ್ಯವನ್ನು ಇಬ್ಭಾಗ ಮಾಡಲು ಬಿಜೆಪಿ ಅವಕಾಶ ಕೊಡುವುದಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications