ದಲಿತ ಕುಟುಂಬಗಳಿಗೆ ರೇಷ್ಮೆ ಸೀರೆ,ಪಂಚೆ-ಶರ್ಟ್ ನೀಡಿದ ಬಿಎಸ್ ವೈ
ಬೆಂಗಳೂರು, ಆಗಸ್ಟ್ 28: ವಿವಿಧ ಊರುಗಳಿಗೆ ಭೇಟಿ ನೀಡಿ ದಲಿತರ ಮನೆಯಲ್ಲಿ ಊಟ ಸೇವಿಸಿ ಆತಿಥ್ಯ ಸ್ವೀಕರಿಸಿದ್ದ ಬಿ.ಎಸ್.ಯಡಿಯೂರಪ್ಪ ಇದಕ್ಕೆ ಪ್ರತಿಯಾಗಿ ಇಂದು ಆ ದಲಿತ ಕುಟುಂಬಗಳಿಗೆ ಊಟ ಹಾಕಿ ತಾವು ಸ್ವೀಕರಿಸಿದ್ದ ಆತಿಥ್ಯಕ್ಕೆ ಕೃತಜ್ಞತೆ ರೂಪದಲ್ಲಿ ಪ್ರತಿ- ಆತಿಥ್ಯ ನೀಡಿದರು.
ತಾವು ಭೇಟಿ ನೀಡಿದ್ದ ಆ ದಲಿತ ಕುಟುಂಬಗಳಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು (ಆ.28) ನಗರದ ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ದಲಿತರಿಗಾಗಿ ವಿಶೇಷ ಭೋಜನ ಕೂಟವನ್ನು ಏರ್ಪಡಿಸಿದ್ದರು.
ಬೇರೆ-ಬೇರೆ ಊರುಗಳಿಂದ ಕುಟುಂಬ ಸಮೇತರಾಗಿ ಆಗಮಿಸಿದ್ದ ದಲಿತ ಕುಟುಂಬಗಳಿಗೆ ಬಿಎಸ್ ವೈ ಊಟ ಬಡಿಸಿ ಕೃತಜ್ಞತೆಗಳನ್ನು ಸಲ್ಲಿಸಿದರು. ಬಳಿಕ ಅತಿಥಿಗಳಾಗಿ ಬಂದಿದ್ದ ಮಹಿಳೆಯರಿಗೆ ಸೀರೆ, ಹೂ, ಹಣ್ಣು ಮತ್ತು ಪುರುಷರಿಗೆ ಪಂಚೆ-ಶರ್ಟ್, ಶಲ್ಯವನ್ನು ಉಡುಗೊರೆ ನೀಡಲಾಯಿತು.
ನಂತರ ಎರಡು ಬಸ್ಗಳಲ್ಲಿ ಅವರನ್ನು ಕರೆದೊಯ್ದು ವಿಧಾನಸೌಧ, ಕಬ್ಬನ್ ಉದ್ಯಾನ, ಲಾಲ್ಬಾಗ್ ಮತ್ತು ಇಸ್ಕಾನ್ ದೇವಸ್ಥಾನ ತೋರಿಸಲಾಯಿತು.

ಊಟಕ್ಕೆ ಏನೆನು ಇತ್ತು?
ಹೋಳಿಗೆ, ಜಹಂಗೀರ್, ಪೂರಿ, ಸಾಗು, ಬದನೇಕಾಯಿ ಪಲ್ಯ, ಚಿತ್ರಾನ್ನ, ಅನ್ನ ಸಾಂಬಾರ್ ಸೇರಿ 18 ಬಗೆಯ ಖಾದ್ಯಗಳನ್ನು ಯಡಿಯೂರಪ್ಪ ಅವರ ಮನೆಯಲ್ಲಿಯೇ ಸಿದ್ಧಪಡಿಸಲಾಗಿತ್ತು

ಕೃತಜ್ಞತೆ ರೂಪದಲ್ಲಿ ದಲಿತ ಕುಟುಂಬಗಳಿಗೆ ಆತಿಥ್ಯ
ಇತ್ತೀಚೆಗೆ ರಾಜ್ಯಾದ್ಯಂತ ಯಡಿಯೂರಪ್ಪ, 'ಬಿಜೆಪಿ ನಡಿಗೆ, ದಲಿತರ ಮನೆಗೆ' ಎಂಬ ವಿಶೇಷ ಅಭಿಯಾನದಡಿ ನಾನಾ ಜಿಲ್ಲೆಗಳಲ್ಲಿ ದಲಿತರ ಮನೆಗಳಿಗೆ ಹೋಗಿದ್ದರು. ಆ ವೇಳೆ ವಿವಿಧ ಊರುಗಳಿಗೆ ಭೇಟಿ ನೀಡಿ ದಲಿತರ ಮನೆಯಲ್ಲಿ ಊಟ ಸೇವಿವಿಸಿ ಆತಿಥ್ಯ ಸ್ವೀಕರಿಸಿದ್ದರು. ಇದಕ್ಕೆ ಪ್ರತಿಯಾಗಿ ಬಿಎಸ್ ವೈ ಇಂದು ತಾವು ಭೇಟಿ ನೀಡಿದ್ದ ದಲಿತರ ಕುಟುಂಬಗಳಿಗೆ ಊಟ ಹಾಕಿ ತಾವು ಸ್ವೀಕರಿಸಿದ್ದ ಆತಿಥ್ಯಕ್ಕೆ ಕೃತಜ್ಞತೆ ರೂಪದಲ್ಲಿ ಪ್ರತಿ- ಆತಿಥ್ಯ ನೀಡಿದರು.

ಮೆಚ್ಚುಗೆ ವ್ಯಕ್ತಪಡಿಸಿದ ಮಾದಾರ ಚೆನ್ನಯ್ಯ ಸ್ವಾಮೀಜಿ
ಡಾಲರ್ಸ್ ಕಾಲೋನಿಯಲ್ಲಿ ಯಡಿಯೂರಪ್ಪ ನಿವಾಸದಲ್ಲಿ ಏರ್ಪಡಿಸಲಾಗಿದ್ದ ಭೋಜನ ಕೂಟದಲ್ಲಿ ಮಾದಾರ ಚೆನ್ನಯ್ಯ ಸ್ವಾಮೀಜಿ ಪಾಲ್ಗೊಂಡು, ದಲಿತ ಕುಟುಂಬ ಸದಸ್ಯರನ್ನು ಆಹ್ವಾನಿಸಿ ನಿವಾಸದಲ್ಲಿಯೇ ಭೋಜನಕ್ಕೆ ವ್ಯವಸ್ಥೆ ಕಲ್ಪಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸವಾಲಾಗಿ ಸ್ವೀಕರಿಸಿದ್ದ ಯಡಿಯೂರಪ್ಪ
ರಾಜ್ಯ ಪ್ರವಾಸದ ವೇಳೆ, ದಲಿತರ ಮನೆಗಳಿಗೆ ಯಡಿಯೂರಪ್ಪ ಅವರು ಭೇಟಿ ಮಾಡಿದ್ದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇತರ ರಾಜಕೀಯ ನಾಯಕರು, ''ಯಡಿಯೂರಪ್ಪನವರಿಗೆ ನೀವು ದಲಿತರ ಮನೆಗಳಿಗೆ ಹೋದಂತೆ, ದಲಿತರನ್ನೂ ನಿಮ್ಮ ಮನೆಗೆ ಕರೆಯಿಸಿ ಆತಿಥ್ಯ ನೀಡಬಲ್ಲಿರಾ?'' ಎಂದು ಸವಾಲು ಹಾಕಿದ್ದರು. ಆ ಟೀಕೆ, ಸವಾಲುಗಳಿಗೆ ಬಿಎಸ್ ವೈ ಈಗ ಉತ್ತರ ನೀಡಿದ್ದಾರೆ.

ತೋರಿಕೆಗೆ ಈ ಭೋಜನ ಕೂಟ ಏರ್ಪಡಿಸಿಲ್ಲ
ಇಂದಿನ ಈ ಕಾರ್ಯಕ್ರಮ ರಾಷ್ಟ್ರಕ್ಕೆ ಮಾದರಿ. ತೋರಿಕೆಗೆ ಬಿಎಸ್ ವೈ ಈ ಕಾರ್ಯಕ್ರಮ ಮಾಡುತ್ತಿಲ್ಲ. ದಲಿತರನ್ನು ಮನೆಗೆ ಆಹ್ವಾನಿಸಿ ಭೋಜನ ಕಾರ್ಯಕ್ರಮವನ್ನು ಬಿಎಸ್ ವೈ ಮುಂದುವರೆಸಿಕೊಂಡು ಹೋಗಲಿದ್ದಾರೆ. ಬಿಎಸ್ ವೈರನ್ನು ಮತ್ತೆ ಸಿಎಂ ಮಾಡುವ ಸಂಕಲ್ಪ ಎಲ್ಲ ದಲಿತರು ಮಾಡಬೇಕು ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಕರೆ ನೀಡಿದರು.












Click it and Unblock the Notifications