ರಾಜ್ಯ ಬಿಜೆಪಿಯಲ್ಲಿ ಹೊಗೆಯಾಡುತ್ತಲೇ ಇದೆ ಭಿನ್ನಮತೀಯ ಕಿಚ್ಚು!
ಬಿಜೆಪಿ ಕಾರ್ಯಕಾರಿಣಿಗೆ ಈಶ್ವರಪ್ಪ ಗೈರು. ಬೆಂಗಳೂರಿನಲ್ಲಿ ನಡೆದಿದ್ದ ಬಿಜೆಪಿ ಕಾರ್ಯಕಾರಣಿ ಸಭೆ.
ಬೆಂಗಳೂರು, ಆಗಸ್ಟ್ 7: ಕರ್ನಾಟಕ ವಿಧಾನಸಭೆ ಚುನಾವಣೆ ಇನ್ನೇನು ಹತ್ತಿರಕ್ಕೆ ಬರುತ್ತಿದೆ. ಆದರೆ, ಆ ಚುನಾವಣೆಯನ್ನು ಒಗ್ಗಟ್ಟಾಗಿ ಎದುರಿಸಬೇಕಿರುವ ರಾಜ್ಯ ಬಿಜೆಪಿಯಲ್ಲಿ ಮಾತ್ರ ಭಿನ್ನಮತ ಮತ್ತೆ ಮತ್ತೆ ಸ್ಫೋಟಗೊಳ್ಳುತ್ತಿರುವುದು ಆ ಪಕ್ಷದ ಕಾರ್ಯಕರ್ತರ ಮೇಲೂ ಪರಿಣಾಮ ಬೀರಲಾರಂಭಿಸಿದೆ.
ಭಾನುವಾರ (ಆಗಸ್ಟ್ 6) ನಡೆದ ಪಕ್ಷದ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಈಶ್ವರಪ್ಪ ಅವರ ಗೈರು ಹಾಜರಿ, ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮಾತ್ರವಲ್ಲ ಹೈಕಮಾಂಡ್ ಎಷ್ಟೇ ಕಾಳಜಿ ತೋರಿದರೂ, ಅದು ಯಾವುದೇ ಪರಿಣಾಮ ಬೀರಿಲ್ಲ ಎಂಬುದು ಸಾಬೀತಾಗಿದೆ.

ಭಾನುವಾರ ನಡೆದ ಕಾರ್ಯಕಾರಿಣಿ ಸಭೆಯ ಮೊದಲ ದಿನ ಹಲವಾರು ಪದಾಧಿಕಾರಿಗಳು ಬಿಎಸ್ವೈ ಮತ್ತು ಈಶ್ವರಪ್ಪ ನಡುವಿನ ವೈಮನಸ್ಸು ಪಕ್ಷದ ವರ್ಚಸ್ಸಿಗೆ ಧಕ್ಕೆಯುಂಟಾಗುತ್ತಿದೆ ಎಂದು ಬಹಿರಂಗವಾಗಿಯೇ ಹೇಳಿರುವುದು ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಮತ್ತೆ ಭುಗಿಲೇಳುವಂತೆ ಮಾಡಿದೆ.
ಸಭೆಗೆ ಹಾಜರಾಗುವಂತೆ ಪಕ್ಷದ ಇತರ ನಾಯಕರು ಈಶ್ವರಪ್ಪ ಅವರನ್ನು ಸಂಪರ್ಕಿಸಲು ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾಗಿವೆ ಎಂದು ಹೇಳಲಾಗಿದೆ. ಕೆಲವರ ದೂರವಾಗಿ ಸಂಪರ್ಕಕ್ಕೆ ಈಶ್ವರಪ್ಪ ಸಿಕ್ಕರಾದರೂ, ಸಭೆಗೆ ಆಗಮಿಸಲು ಕೆಲವಾರು ನೆಪಗಳನ್ನು ಹೇಳಿ ತಪ್ಪಿಸಿಕೊಂಡರೆಂದೂ ಹೇಳಲಾಗಿದೆ.
ಈಶ್ವರಪ್ಪ ಅವರು, ತಾವು ಸಭೆಗೆ ಬರದೇ ತಮ್ಮ ಬೆಂಬಲಿಗರನ್ನು ಮಾತ್ರ ಸಭೆಗೆ ಕಳುಹಿಸಿರುವುದು ಹಾಗೂ ಆ ಸಭೆಯಲ್ಲಿ ತಮ್ಮ ಸಮಸ್ಯೆಗಳನ್ನು ತಮ್ಮ ಬೆಂಬಲಿಗರ ಮೂಲಕ ತಿಳಿಸಲು ಯತ್ನಿಸಿರುವುದು ಹಲವಾರು ನಾಯಕರಿಗೆ ಬೇಸರ ತರಿಸಿದೆ ಎಂದು ಹೇಳಲಾಗಿದೆ.












Click it and Unblock the Notifications