ಅನ್ಲಾಕ್; 3000 ಬಿಎಂಟಿಸ್ ಬಸ್ಗಳು ಮಾತ್ರ ಸಂಚಾರ
ಬೆಂಗಳೂರು, ಜೂನ್ 10; ಕರ್ನಾಟಕದಲ್ಲಿ ಅನ್ಲಾಕ್ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಸರ್ಕಾರ ಈ ಕುರಿತು ಗುರುವಾರ ಅಂತಿಮ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ. ಬಿಎಂಟಿಸಿ ಬಸ್ ಸಂಚಾರ ಆರಂಭಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಪ್ರಸ್ತುತ 130 ಬಿಎಂಟಿಸಿ ಬಸ್ಗಳು ಸಂಚಾರ ನಡೆಸುತ್ತಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಚಾರಕ್ಕಾಗಿ ಬಸ್ಗಳನ್ನು ಓಡಿಸಲಾಗುತ್ತಿದೆ. ಜೂನ್ 14ರ ತನಕ ರಾಜ್ಯದಲ್ಲಿ ಲಾಕ್ಡೌನ್ ಜಾರಿಯಲ್ಲಿರಲಿದೆ.
ಅನ್ಲಾಕ್ ಬಳಿಕ ಬಸ್ ಸಂಚಾರ ಆರಂಭಿಸಲು ಬಿಎಂಟಿಸಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಮೊದಲ ಹಂತದಲ್ಲಿ 3,000 ಬಸ್ ಸಂಚಾರ ನಡೆಸಲು ಚಿಂತನೆ ನಡೆದಿದ್ದು, ಸಿಬ್ಬಂದಿಗಳಿಗೆ ಸಹ ಸೂಚನೆ ನೀಡಲಾಗಿದೆ.

ಕಳೆದ ಎರಡು ತಿಂಗಳಿನಿಂದ ರಜೆಯಲ್ಲಿರುವ ಸಿಬ್ಬಂದಿಗಳಿಗೆ ಈಗಾಗಲೇ ಕರ್ತವ್ಯಕ್ಕೆ ಹಾಜರಾಗಲು ಸೂಚನೆ ನೀಡಲಾಗಿದೆ. ಕೋವಿಡ್ ನಗೆಟಿವ್ ವರದಿಯನ್ನು ಕಡ್ಡಾಯವಾಗಿ ಸಿಬ್ಬಂದಿಗಳು ನೀಡಬೇಕು, ಕೋವಿಡ್ ಲಸಿಕೆಯನ್ನು ಪಡೆದಿರಬೇಕು.
ಎರಡು ಡೋಸ್ ಕೋವಿಡ್ ಲಸಿಕೆ ಪಡೆದ, ಕೋವಿಡ್ ವರದಿ ನಗೆಟಿವ್ ಬಂದಿರುವ ಸಿಬ್ಬಂದಿಯನ್ನು ಮಾತ್ರ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗುತ್ತದೆ. ಅನ್ಲಾಕ್ ಬಗ್ಗೆ ಸರ್ಕಾರ ಗುರುವಾರ ಅಂತಿಮ ತೀರ್ಮಾನ ಕೈಗೊಳ್ಳಲಿದ್ದು, ಬಳಿಕ ಬಸ್ ಸೇವೆ ಆರಂಭಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ.
ಅನ್ಲಾಕ್ ಘೋಷಣೆಯಾದರೂ ನಮ್ಮ ಮೆಟ್ರೋದಲ್ಲಿ ಶೇ 50ರಷ್ಟು ಮಾತ್ರ ಜನರು ಸಂಚಾರ ನಡೆಸಲು ಅವಕಾಶ ನೀಡುವ ಸಾಧ್ಯತೆ ಇದೆ. ಆದ್ದರಿಂದ ಬಿಎಂಟಿಸಿ ಬಸ್ಗಳಲ್ಲಿ ಹೆಚ್ಚಿನ ಜನರು ಸಂಚಾರ ನಡೆಸಬಹುದು ಎಂದು ನಿರೀಕ್ಷಿಸಲಾಗಿದೆ.
ಸರ್ಕಾರ ಬಸ್ ಸಂಚಾರಕ್ಕೆ ಅನುಮತಿ ನೀಡಿದರೂ ಸಹ ಕೆಲವು ಷರತ್ತುಗಳನ್ನು ವಿಧಿಸುವ ಸಾಧ್ಯತೆ ಇದೆ. ಬಸ್ಗಳಲ್ಲಿ ನಿಗದಿತ ಆಸನದಷ್ಟು ಪ್ರಯಾಣಿಕರು ಸಂಚಾರ ನಡೆಸಬೇಕು. ನಿಂತುಕೊಂಡು ಪ್ರಯಾಣ ಮಾಡುವಂತಿಲ್ಲ ಎಂದು ಸೂಚನೆ ನೀಡುವ ಸಾಧ್ಯತೆ ಇದೆ.
"ಜೂನ್ 14ರ ಬಳಿಕ ಬಸ್ಗಳ ಸಂಚಾರ ಆರಂಭವಾಗಬಹುದು. ಸಿಬ್ಬಂದಿಗಳ ಮತ್ತು ಪ್ರಯಾಣಿಕರ ಆರೋಗ್ಯದ ಹಿತದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ" ಎಂದು ಬಿಎಂಟಿಸಿ ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕ ಸರ್ಕಾರ ಬಸ್ ಚಾಲಕರು, ನಿರ್ವಾಹಕರನ್ನು ಆದ್ಯತಾ ವಲಯದಲ್ಲಿ ಸೇರ್ಪಡೆ ಮಾಡಿದ್ದು 18-44ರ ವಯೋಮಿತಿಯಲ್ಲಿದ್ದರೆ ಅವರಿಗೆ ಆದ್ಯತೆಯ ಮೇಲೆ ಕೋವಿಡ್ ಸೋಂಕಿನ ವಿರುದ್ಧದ ಲಸಿಕೆಯನ್ನು ನೀಡಲಾಗುತ್ತಿದೆ.
ಎರಡು ಹಂತದ ಕೋವಿಡ್ ಲಸಿಕೆ ಪಡೆದ, ಕೋವಿಡ್ ನೆಗೆಟಿವ್ ಪ್ರಮಾಣ ಪತ್ರವನ್ನು ಹೊಂದಿರುವ ಸಿಬ್ಬಂದಿಗಳನ್ನು ಮೊದಲು ಕರ್ತವ್ಯಕ್ಕೆ ನಿಯೋಜನೆ ಮಾಡಲು ಬಿಎಂಟಿಸಿ ಚಿಂತನೆ ನಡೆಸುತ್ತಿದೆ.
ದರ ಏರಿಕೆ ಇಲ್ಲ; ಬಿಎಂಟಿಸಿ ಬಸ್ ದರ ಏರಿಕೆಯಾಗಲಿದೆ ಎಂಬ ಸುದ್ದಿಗಳು ಹಬ್ಬಿದ್ದವು. ಸಾರಿಗೆ ಸಚಿವ ಲಕ್ಷ್ಮಣ ಸವದಿ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. "ಅಧಿಕಾರಿಗಳು ದರ ಹೆಚ್ಚಳ ಮಾಡಲು ಪ್ರಸ್ತಾವನೆ ಸಲ್ಲಿಸಿದ್ದಾರೆ. ಬಡವರು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಅವರ ಮೇಲೆ ಹೊರೆ ಹಾಕುವುದಿಲ್ಲ. ದರ ಏರಿಕೆ ಮಾಡುವುದಿಲ್ಲ" ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
"ಜೂನ್ 14ರ ಬಳಿಕ ಬಸ್ ಸಂಚಾರ ಆರಂಭವಾಗಬಹುದು. ಎರಡು ಡೋಸ್ ಲಸಿಕೆ ಪಡೆಯದ ಸಿಬ್ಬಂದಿಗಳನ್ನು ಕೆಲಸಕ್ಕೆ ಹಾಜರಾಗಿ ಎಂದು ನಾವು ಒತ್ತಾಯಿಸುವುದಿಲ್ಲ. ಎರಡು ಡೋಸ್ ಪಡೆದವರು ಕೆಲಸ ನಿರ್ವಹಣೆ ಮಾಡುವಾಗ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತದೆ" ಎಂದು ಸಚಿವರು ಹೇಳಿದ್ದಾರೆ.
ಬೆಂಗಳೂರು ನಗರದಲ್ಲಿ ಸುಮಾರು 6 ಸಾವಿರ ಬಿಎಂಟಿಸಿ ಬಸ್ಗಳಿವೆ. ಪ್ರತಿದಿನ ಸುಮಾರು 5 ಲಕ್ಷ ಜನರು ಬಸ್ಗಳಲ್ಲಿ ಸಂಚಾರ ನಡೆಸುತ್ತಾರೆ. ಲಾಕ್ಡೌನ್ ಪರಿಣಾಮ ಬಸ್ ಸಂಚಾರ ಸ್ಥಗಿತಗೊಂಡಿದ್ದು, ಮೊದಲೇ ನಷ್ಟದಲ್ಲಿದ್ದ ಬಿಎಂಟಿಸಿಗೆ ಮತ್ತಷ್ಟು ನಷ್ಟ ಉಂಟಾಗಿದೆ.












Click it and Unblock the Notifications