ಪ್ರಧಾನಿ ಮೋದಿಗೆ ಪತ್ರದ ಮೂಲಕ ಕಣ್ಣೀರಿಟ್ಟ ನಿರ್ವಾಹಕನಿಗೆ ನ್ಯಾಯ ಸಿಗುತ್ತಾ?
ಬೆಂಗಳೂರು, ಜೂ. 15: ಪ್ಯಾಕಲ್ ಇಂಡಿಯಾ ಲಿಮಿಟೆಡ್ ನಲ್ಲಿ ಹೂಡಿಕೆ ಮಾಡಿ ವಂಚನೆಗೆ ಒಳಗಾಗಿರುವ ತನ್ನ ತಾಯಿಗೆ ನ್ಯಾಯ ಕೊಡಿಸಿ ಎಂದು ಬೆಂಗಳೂರಿನ ಬಿಎಂಟಿಸಿ ನಿರ್ವಾಹಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕನ್ನಡದಲ್ಲಿ ಪತ್ರ ಬರೆದು ಮನವಿ ಮಾಡಿದ್ದಾರೆ. ಅಚ್ಚರಿ ಏನೆಂದರೆ ಪತ್ರ ಬರೆದು ನಾಲ್ಕು ವರ್ಷವಾದ್ರೂ ಯಾವುದೇ ಉತ್ತರ ಬಂದಿಲ್ಲ. ಮೋದಿ ಅವರಿಂದ ನ್ಯಾಯ ಸಿಗುವ ಭರವಸೆಯಿಂದ ನಾಲ್ಕು ವರ್ಷದಿಂದ ಶಬರಿಯಂತೆ ಕಾಯುತ್ತಿದ್ದಾರೆ.
ಬಿಎಂಟಿಸಿ ನಿರ್ವಾಹಕ ಎನ್. ಶ್ರೀನಿವಾಸ್, ಅವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಕಾಯುತ್ತಿರುವರು. 2018 ರಲ್ಲಿ ಜಾಲಹಳ್ಳಿ ನಿವಾಸಿ, ಬಿಎಂಟಿಸಿ ನಿರ್ವಾಹಕ ಶ್ರೀನಿವಾಸ್ ಮೋದಿ ಅವರಿಗೆ ಕನ್ನಡದಲ್ಲಿಯೇ ಪತ್ರ ಬರೆದು ತನ್ನ ನೋವನ್ನು ಹಂಚಿಕೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಈಗಲಾದರೂ ನನಗೆ ನ್ಯಾಯ ಸಿಗಬಹುದೇ ? ಪ್ರಧಾನಿಗಳು ನನ್ನ ಕಷ್ಟಕ್ಕೆ ಸ್ಪಂಧಿಸುವರೇ ಎಂಬ ಆಸೆ ಹೊತ್ತು ಬಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಆಗಿದ್ದೇನು?
ನಿರ್ವಾಹಕ ಶ್ರೀನಿವಾಸ್ ಅವರ ತಾಯಿ ಪಾರ್ವತಮ್ಮ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸ್ವೀಪರ್ ಅಗಿ ಕೆಲಸ ಮಾಡುತ್ತಿದ್ದರು. ಸೇವಾವಧಿಯಲ್ಲಿ ಕಂಪನಿ ನೌಕರರ ಬಲವಂತದಿಂದ ಪ್ಯಾಕಲ್ ಇಂಡಿಯಾ ಲಿ. ಕಂಪನಿಯಲ್ಲಿ ಪ್ರತಿ ತಿಂಗಳು ಒಂದು ಸಾವಿರ ರೂ. ನಂತೆ ಹೂಡಿಕೆ ಮಾಡಿದ್ದರು. 2009 ರಿಂದ 2014 ರ ವರೆಗೆ ತಿಂಗಳಿಗೆ ಒಂದು ಸಾವಿರ ರೂ. ನಂತೆ 66 ಸಾವಿರ ರೂ. ಹೂಡಿಕೆ ಮಾಡಿದ್ದರು. ಕೊನೆ ಕಂತು ಕಟ್ಟಿದ ತಿಂಗಳೇ ಕಂಪನಿ ಮುಚ್ಚಿರುವುದಾಗಿ ಘೋಷಣೆ ಮಾಡಲಾಗಿತ್ತು. ಕಂಪನಿಯಲ್ಲಿ ಹೂಡಿಕೆ ಮಾಡಿದವರಿಗೆ ಹಣ ವಾಪಸು ಕೊಡುವಂತೆ ಮೂಲ ದಾಖಲೆಗಳನ್ನು ಸಲ್ಲಿಸಲಾಗಿತ್ತು.
ಇನ್ನು ಪ್ಯಾಕಲ್ ಇಂಡಿಯಾ ಲಿ. ಅಕ್ರಮದ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಲೋಧಾ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ವಿಚಾರಣೆ ನಡೆಸುತ್ತಿದೆ. ಆದ್ರೂ ಈವರೆಗೂ ಹಣ ಮರುಪಾವತಿಯಾಗಿಲ್ಲ. ಅನಾರೋಗ್ಯಕ್ಕೆ ಒಳಗಾಗಿರುವ ತನ್ನ ತಾಯಿಯ ಆರೋಗ್ಯ ಕಾಪಾಡಲು ಈ ಹಣ ವಾಪಸು ಕೊಡಿಸುವಂತೆ ಕೋರಿ ಮೋದಿ ಅವರಿಗೆ ಕನ್ನಡದಲ್ಲಿಯೇ ಪತ್ರ ಬರೆದಿದ್ದಾರೆ.

"ನನ್ನ ತಾಯಿ ಸಂಧಿವಾತದಿಂದ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ನನ್ನ ತಾಯಿ ಇಎಸ್ಐ ಕಾರ್ಡ್ ಹೊಂದಿದ್ದರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯಲಿಲ್ಲ. ಖಾಯಿಲೆ ಗುಣಮುಖವಾಗಲಿಲ್ಲ. ಪ್ರಸ್ತುತ ಸಮರ್ಪಣ ಹೆಲ್ತ್ ಸೆಂಟರ್ ನಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದು, ಈವರೆಗೂ ಹದಿನೈದು ಸಾವಿರ ರೂ. ವೆಚ್ಚವಾಗಿದೆ. ಪ್ರತಿ ತಿಂಗಳು 1250 ರೂ. ವೆಚ್ಚವಾಗುತ್ತಿದೆ. ನನಗೆ ಬರುವ ಸಂಬಳದಲ್ಲಿ ಕುಟುಂಬ ನಿರ್ವಹಣೆಯೂ ಸಾಧ್ಯವಾಗುತ್ತಿಲ್ಲ. ನನಗೆ ಬೇರೆ ಯಾವ ಆದಾಯದ ಮೂಲಗಳು ಇಲ್ಲ. ನಾನು ಬಿಎಂಟಿಸಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ನನ್ನ ತಾಯಿಯ ವೈದ್ಯಕೀಯ ಚಿಕಿತ್ಸೆ ಮರು ಪಾವತಿಗೆ ಅರ್ಜಿ ಸಲ್ಲಿಸಿರುತ್ತೇನೆ. ವೈದ್ಯರು ಬಿಲ್ ಗಳಿಗೆ ಸಹಿ ಮಾಡಿಲ್ಲ ಎಂಬ ಕಾರಣಕ್ಕೆ ಮರು ಪಾವತಿ ಮಾಡಿಲ್ಲ. ಗುಣಮುಖವಾಗದ ಸಂಧಿವಾತ ಕಾಯಿಲೆಯಿಂದ ಬಳಲುತ್ತಿರುವ ನನ್ನ ತಾಯಿಗೆ ಪ್ರತಿ ತಿಂಗಳು ಚಿಕಿತ್ಸೆ ಕೊಡಬೇಕಾಗಿರುವುದರಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದೇನೆ. ಹೀಗಾಗಿ ಪ್ಯಾಕಲ್ ಇಂಡಿಯಾ ಕಂಪನಿ ವಂಚನೆ ಪ್ರಕರಣದಲ್ಲಿ ನನ್ನ ತಾಯಿ ಹೂಡಿಕೆ ಮಾಡಿರುವ ಹಣವನ್ನು ವಾಪಸು ಕೊಡಿಸಿ ನನಗೆ ನೆರವಾಗಬೇಕು" ಎಂದು ನಿರ್ವಾಹಕ ಶ್ರೀನಿವಾಸ್ ಮನವಿ ಮಾಡಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications