ಬಿಎಂಟಿಸಿ ಚಾಲಕನಿಂದ ಬಸ್ಸಿನಲ್ಲಿ ಅತ್ಯಾಚಾರಕ್ಕೆ ಯತ್ನ
ಬೆಂಗಳೂರು, ಮಾ.16: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಚಾಲಕನೊಬ್ಬ ಕರ್ತವ್ಯ ನಿರತನಾಗಿದ್ದ ಸಂದರ್ಭದಲ್ಲೇ ಬಸ್ಸಿನಲ್ಲಿದ್ದ ಅಸಹಾಯಕ ಯುವತಿ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿ ಚಾಲಕ ಸಿದ್ದಾರ್ಥ್ ಎಂಬಾತನನ್ನು ಬಂಧಿಸಿರುವ ಚಾಮರಾಜಪೇಟೆ ಪೊಲೀಸರು ಪ್ರಕರಣದ ವಿವರ ನೀಡಿದ್ದಾರೆ.
ಸಾರಿಗೆ ಸಚಿವರ ಪ್ರತಿಕ್ರಿಯೆ: ಬಿಎಂಟಿಸಿ ಬಸ್ಸಿನಲ್ಲಿ ಯುವತಿ ಮೇಲೆ ಚಾಲಕನಿಂದ ಅತ್ಯಾಚಾರ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಚಾಲಕನನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ. ಈ ಬಗ್ಗೆ ಇಲಾಖಾ ಮಟ್ಟದಲ್ಲಿ ತನಿಖೆ ನಡೆಯಲಿದೆ. ಸದ್ಯಕ್ಕೆ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ. ಕಾನೂನು ಕ್ರಮ ಮುಂದುವರೆಯಲಿದೆ. ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಸಂತ್ರಸ್ತ ಯುವತಿಯ ಚಿಕಿತ್ಸಾವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಕ್ಷಣದ ಪ್ರತಿಕ್ರಿಯೆ ನೀಡಿದ್ದಾರೆ.
ಚಾಮರಾಜಪೇಟೆಯಲ್ಲಿ ದುರ್ಘಟನೆಗೆ ಸಾಕ್ಷಿಯಾಗಿರುವ ಬಸ್ ನಿಂತಿದೆ. ಮಾ.13ರಂದು ಪೀಣ್ಯ ಡಿಪೋಗೆ ಸೇರಿದ ಬಸ್ ವೊಂದರಲ್ಲಿ ಪ್ರಯಾಣ ಮಾಡುತ್ತಿದ್ದ ಯುವತಿ ಮೇಲೆ ಅತ್ಯಾಚಾರಕ್ಕೆ ಚಾಲಕ ಯತ್ನಿಸಿದ್ದಾನೆ. ಪಂಜಾಬ್ ಮೂಲದ ಯುವತಿಯೊಬ್ಬಳೆ ಬಸ್ ನಲ್ಲಿರುವುದನ್ನು ಗಮನಿಸಿದ ಚಾಲಕ ತನ್ನ ಕಾಮದಾಸೆ ತೀರಿಸಿಕೊಳ್ಳಲು ಯತ್ನಿಸಿ ಆಕೆ ಮೇಲೆ ಹಲ್ಲೆ ಮಾಡಿದ್ದಾನೆ.
ಕಳೆದ ಗುರುವಾರದಂದು ರಾತ್ರಿ ಸಮಯ ಸುಮಾರು 11.30ರ ವೇಳೆಗೆ ಬನಶಂಕರಿ ಬಳಿಯ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಬಸ್ ಬರುತ್ತಿದ್ದಂತೆ ವಾಹನ ಪಕ್ಕಕ್ಕೆ ಹಾಕಿ ಯುವತಿ ಬಳಿಗೆ ಬಂದ ಚಾಲಕ ಆಕೆ ಮೇಲೆ ಎರಗಿದ್ದಾನೆ. ಆದರೆ, ಆಕೆ ತೀವ್ರ ಪ್ರತಿರೋಧ ಒಡ್ಡಿದ್ದಾಳೆ. ಚಾಲಕ ಆಕೆ ಮೇಲೆ ಹಲ್ಲೆ ಮಾಡಿದ್ದಾನೆ.ಚಾಲಕನ ಕೈ ಬಲವಾಗಿ ಕಚ್ಚಿದ್ದ ಯುವತಿ ಬೊಬ್ಬೆ ಹಾಕಿದ್ದಾಳೆ. ನಂತರ ಚಾಲಕನನ್ನು ತಳ್ಳಿ ಬಸ್ಸಿನಿಂದ ಹೊರ ಬಿದ್ದಿದ್ದಾಳೆ. ಅಲ್ಲಿಂದ ಬಸ್ ನ್ನು ಚಾಮರಾಜಪೇಟೆ ಬಳಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.

ಘಟನೆಯಿಂದ ತೀವ್ರವಾಗಿ ಮಾನಸಿಕ ಆಘಾತಕ್ಕೆ ಒಳಗಾದ ಯುವತಿಯನ್ನು ಕಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಚಾಲಕನ ಜಾಡು ಹಿಡಿದು ಹೊರಟ ಪೊಲೀಸರು ಚಾಮರಾಜಪೇಟೆ ಸ್ಟ್ರೀಟ್ ಬಜಾರ್ ಬಳಿ ಇದ್ದ ಬಸ್ ಗುರುತಿನಿಂದ ಚಾಲಕ ಸಿದ್ದಾರ್ಥ್ ನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಸಿದ್ದಾರ್ಥ್ ಗೆ ಮಾ.29ರವರೆಗೂ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಚಾಮರಾಜಪೇಟೆ ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದಾರೆ.
ಹಿರಿಯ ಅಧಿಕಾರಿಗಳ ಆದೇಶದಂತೆ ಕೆಂಪೇಗೌಡ ಬಸ್ ನಿಲ್ದಾಣದಿಂದ ಗುರುವಾರ ರಾತ್ರಿ 11 ಗಂಟೆ ನಂತರ ಬನಶಂಕರಿ ಕಡೆಗೆ ಪುಷ್ಪಕ್ ಬಸ್(ಡ್ರೈವರ್ ಕಮ್ ಕಂಡೆಕ್ಟರ್ ಆಗಿ) ತೆಗೆದುಕೊಂಡು ಚಾಲಕ ಸಿದ್ದಾರ್ಥ್ ಹೊರಟುತ್ತಾನೆ. ಬನಶಂಕರಿಯಲ್ಲಿ ಬಸ್ಸಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಇಳಿಯುತ್ತಾರೆ. ಇದೇ ಸಮಯದಲ್ಲಿ ಪಂಜಾಬಿ ಯುವತಿ ಚಾಲಕನ ಬಳಿ ಬಂದು ದೇವೇಗೌಡ ಪೆಟ್ರೋಲ್ ಬಂಕ್ ಗೆ ದಾರಿ ಕೇಳಿದ್ದಾಳೆ.
ದಾರಿ ಹೇಳಿದ ಸಿದ್ದಾರ್ಥ್ ನಾನು ಡ್ರಾಪ್ ಮಾಡುತ್ತೇನೆ ಬನ್ನಿ ಎನ್ನುತ್ತಾನೆ. ದೇವೇಗೌಡ ಪೆಟ್ರೋಲ್ ಬಂಕ್ ತಲುಪುವಷ್ಟರಲ್ಲೇ ಆಕೆ ಮೇಲೆ ಅತ್ಯಾಚಾರ ಎಸಗಲು ಯತ್ನಿಸುತ್ತಾನೆ. ಆಕೆ ಪ್ರತಿರೋಧ ಒಡ್ಡಿದ ಮೇಲೆ ಆಕೆ ಬಳಿ ಇದ್ದ ಹಣ ಕಸಿದುಕೊಂಡು ಆಕೆಯನ್ನು ಬಸ್ಸಿನಿಂದ ಹೊರಕ್ಕೆ ತಳ್ಳಿದ್ದಾನೆ. ನಂತರ ಅಲ್ಲಿಂದ ಚಾಮರಾಜಪೇಟೆಗೆ ಬಂದು ಬಸ್ ನಿಲ್ಲಿಸಿ ಪರಾರಿಯಾಗಿದ್ದ ಎನ್ನಲಾಗಿದೆ.
ಇದಕ್ಕೂ ಮುನ್ನ ಕನ್ನಡ ಸುದ್ದಿವಾಹಿನಿಯೊಂದರ ಜತೆ ಮಾತನಾಡಿದ ಬಿಎಂಟಿಸಿ ಎಂಡಿ ಅಂಜುಮ್ ಪರ್ವೇಜ್ ಅವರು. ಚಾಲಕ ಸಿದ್ದಾರ್ಥ್, ಟ್ರಾಫಿಕ್ ಇನ್ಸ್ ಪೆಕ್ಟರ್, ಟ್ರಾಫಿಕ್ ಕಂಟ್ರೋಲರ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಸಿದ್ದಾರ್ಥ್ ಓಡಿಸುತ್ತಿದ್ದದ್ದು ನಿತ್ಯ ಸಂಚಾರ ಬಸ್ ಆಗಿರಲಿಲ್ಲ. ಫ್ಯಾಕ್ಟರಿಗೆ ಹೋಗಬೇಕಿದ್ದ ಬಸ್, ಪೀಣ್ಯ ಡಿಪೋಗೆ ಸೇರಿದ್ದಾಗಿದ್ದು, ಚಾಲಕ ಸಿದ್ದಾರ್ಥ್ ದಾವಣಗೆರೆ ಮೂಲದವನಾಗಿದ್ದು, ಚಿಕ್ಕಬಿದರಹಳ್ಳಿಯಲ್ಲಿ ವಾಸವಾಗಿದ್ದಾನೆ. ಆತನಿಗೆ ಮದುವೆ ಆಗಿದೆ ಎಂದು ಹೇಳಿದರು.












Click it and Unblock the Notifications