ಮೆಟ್ರೋ ಕಾಮಗಾರಿಗಾಗಿ ಮತ್ತೆ 127 ಮರಕ್ಕೆ ಕೊಡಲಿ ಪೆಟ್ಟು
ಬೆಂಗಳೂರು, ಮೇ 12: ನಗರದ ಹೊರ ವರ್ತುಲ ರಸ್ತೆಯಲ್ಲಿ ನಮ್ಮ ಮೆಟ್ರೋ ಯೋಜನೆಯ 2ಎ ಹಂತದ ಕಾಮಗಾರಿಯ ಭಾಗವಾಗಿ ನಾಲ್ಕು ಮೆಟ್ರೋ ನಿಲ್ದಾಣಗಳ ನಿರ್ಮಾಣಕ್ಕೆ 127 ಮರಗಳನ್ನು ಕತ್ತರಿಸಲು ಅನುಮತಿ ನೀಡಬೇಕೆಂದು ಬೆಂಗಳೂರು ಮೆಟ್ರೋ ಕಾರ್ಪೋರೇಷನ್ ಲಿಮಿಟೆಡ್(ಬಿಎಂಆರ್ಸಿಎಲ್) ಮನವಿ ಮಾಡಿದೆ.
ಬಿಬಿಎಂಪಿ ಮರಗಳ ಅಧಿಕಾರಿ ಈ ಕುರಿತಂತೆ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ. ಕೇಂದ್ರೀಯ ರೇಷ್ಮೆ ಮಂಡಳಿ ಜಂಕ್ಷನ್, ಎಚ್ಎಸ್ಆರ್ ಲೇಔಟ್, ಅಗರ ಮತ್ತು ಕೋಡಿಬೀಸನಹಳ್ಳಿ ಮೆಟ್ರೋ ನಿಲ್ದಾಣಕ್ಕಾಗಿ ಮರಗಳನ್ನು ಕಡಿಯುವ ಅನಿವಾರ್ಯತೆ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಮೇ 18 ರೊಳಗೆ ಮರ ಕಡಿಯಲು ಸಾರ್ವಜನಿಕರು ತಕರಾರು ಸಲ್ಲಿಸಬಹುದಾಗಿದೆ.
ರೇಷ್ಮೆ ಮಂಡಳಿಯಿಂದ ಕೆಆರ್ ಪುರಂವರೆಗಿನ 18.2 ಕಿ.ಮೀ. ಉದ್ದದ ಮೆಟ್ರೋ ರೈಲು ಮಾರ್ಗ ಕಾಮಗಾರಿಗಾಗಿ ಮರಗಳನ್ನು ಕತ್ತರಿಸಲು ಬಿಎಂಆರ್ಸಿಎಲ್ ಸಲ್ಲಿಸಿರುವ ನಾಲ್ಕನೇ ಅರ್ಜಿ ಇದಾಗಿದೆ.

ಮರ ತಜ್ಞರ ಸಮಿತಿ ಕಾಮಗಾರಿಯ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮರಗಳನ್ನು ಉಳಿಸಿಕೊಳ್ಳುವ, ಸ್ಥಳಾಂತರಿಸುವ ಸಾಧ್ಯತೆ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ. ಇದೆರಡೂ ಆಗದಿದ್ದ ಪಕ್ಷದಲ್ಲಿ ಮರ ಕಡಿಯಲು ಸಮಿತಿ ಅನುಮತಿ ನೀಡುತ್ತದೆ.
ಬಿಎಂಆರ್ಸಿಎಲ್ ಈಗಾಗಲೇ ಮೂರು ಪ್ರತ್ಯೇಕ ಅರ್ಜಿಗಳಲ್ಲಿ ಕಾಮಗಾರಿಗಾಗಿ 2,115 ಮರಗಳನ್ನು ಕತ್ತರಿಸಲು ಅನುಮತಿ ಕೋರಿಲಾಗಿತ್ತು. ಕಳೆದ ವರ್ಷ ಏಪ್ರಿಲ್, ಜೂನ್ ಮತ್ತು ಜುಲೈನಲ್ಲಿ ಅರ್ಜಿ ಸಲ್ಲಿಸಿತ್ತು.

ಮರ ತಜ್ಞರ ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ಮರಗಳ ಅಧಿಕಾರಿ 1348 ಮರಗಳನ್ನು ಕಡಿಯಲು ಅನುಮತಿ ನೀಡಿದ್ದು, 696 ಮರಗಳನ್ನು ಸ್ಥಳಾಂತರ ಮಾಡುವಂತೆ ಶಿಫಾರಸ್ಸು ಮಾಡಿದ್ದರು, 71 ಮರಗಳನ್ನು ಹಾಗೇ ಉಳಿಸಿಕೊಳ್ಳಲು ಸೂಚಿಸಿದ್ದರು.
1,342 ಮರ ಕಡಿಯಲು ಅನುಮತಿ ನೀಡಿದ್ದ ಹೈಕೋರ್ಟ್:
ಬೆಂಗಳೂರು ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ 2ನೇ ಹಂತದ ಮೆಟ್ರೋ ರೈಲು ಮಾರ್ಗ ನಿರ್ಮಾಣಕ್ಕಾಗಿ 1,342 ಮರಗಳನ್ನು ಕತ್ತರಿಸಲು ಬಿಎಂಆರ್ಸಿಎಲ್ಗೆ ಹೈಕೋರ್ಟ್ ಇದೇ ವರ್ಷ ಏಪ್ರಿಲ್ನಲ್ಲಿ ಅನುಮತಿ ನೀಡಿತ್ತು. ಮೆಟ್ರೋ ಕಾಮಗಾರಿಗಾಗಿ ಮರಗಳನ್ನು ಕಡಿಯುವುದನ್ನು ಆಕ್ಷೇಪಿಸಿ ಟಿ.ದತ್ತಾತ್ರೇಯ ದೇವರೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿತ್ತು.












Click it and Unblock the Notifications