Bengaluru Metro: ರೈಲಿನಲ್ಲಿ ಕುಸಿದುಬಿದ್ದ ವೃದ್ಧ ಸಾವು: ಮೆಟ್ರೋ ಸಿಬ್ಬಂದಿ ವಿರುದ್ದ ಪ್ರಕರಣ ದಾಖಲು
ಮೆಟ್ರೋ ರೈಲಿನಲ್ಲಿ ಕುಸಿದು ಬಿದ್ದ ವೃದ್ಧರೊಬ್ಬರು ಕೆಲವು ಗಂಟೆಗಳ ನಂತರ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಎಂಆರ್ಸಿಎಲ್ ಸಿಬ್ಬಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವೃದ್ಧನ ಸಾವಿಗೆ ಬಿಎಂಆರ್ ಸಿಎಲ್ ಸಿಬ್ಬಂದಿಯ ನಿರ್ಲಕ್ಷ್ಯ ಕಾರಣ ಎಂದು ಎಫ್ಐಆರ್ ನಲ್ಲಿ ದಾಖಲಿಸಲಾಗಿದೆ.
ಮೃತ ವ್ಯಕ್ತಿಯನ್ನು ತಿಮ್ಮೇಗೌಡ (67) ಎಂದು ಗುರುತಿಸಲಾಗಿದೆ. ಅವರ ಮಗ ಮುತ್ತುರಾಜ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಇನ್ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತದ (ಬಿಎಂಆರ್ಸಿಎಲ್) ಸಿಬ್ಬಂದಿ ಸಕಾಲದಲ್ಲಿ ವೈದ್ಯಕೀಯ ನೆರವು ನೀಡದ ಕಾರಣ ತಂದೆ ತಿಮ್ಮೇಗೌಡ (67) ಮೃತಪಟ್ಟಿದ್ದಾರೆ ಎಂದು ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರಿನಲ್ಲಿ ತಿಳಿಸಿದ್ದಾರೆ.
ಜುಲೈ 20ರಂದು ನಡೆದಿರುವ ಘಟನೆ
ಜುಲೈ 20 ರಂದು ರಾತ್ರಿ 9 ಗಂಟೆ ಸುಮಾರಿಗೆ ತಿಮ್ಮೇಗೌಡ ಅವರು ಕೆಂಗೇರಿಗೆ ತೆರಳಲು ಬೈಯಪ್ಪನಹಳ್ಳಿಯಲ್ಲಿ ಮೆಟ್ರೋ ಹತ್ತಿದ್ದರು. ಅಲ್ಲಿಂದ ತಮ್ಮ ಊರು ಚಾಮರಾಜನಗರಕ್ಕೆ ಬಸ್ ನಲ್ಲಿ ತೆರಳಲು ಯೋಜನೆ ರೂಪಿಸಿದ್ದರು.
ಆದರೆ ಎಸ್ವಿ ರಸ್ತೆ ನಿಲ್ದಾಣದಿಂದ ಮೆಟ್ರೊ ರೈಲು ಹೊರಡುವಷ್ಟರಲ್ಲಿಯೇ ಅವರು ಕುಸಿದು ಬಿದ್ದಿದ್ದಾರೆ. ಸಹ ಪ್ರಯಾಣಿಕರು ಅವರ ಸಹಾಯಕ್ಕೆ ಧಾವಿಸಿದರು. ಆದರೂ ಅವರಿಗೆ ತಕ್ಷಣ ವೈದ್ಯಕೀಯ ನೆರವು ಸಿಗಲು, ಇಳಿಸಲು ಸಾಧ್ಯವಾಗಲಿಲ್ಲ. ಕೊನೆಗೆ ಎಂಜಿ ರೋಡ್ ಮೆಟ್ರೋ ನಿಲ್ದಾಣದಲ್ಲಿ ಇಳಿಸುವಲ್ಲಿ ಯಶಸ್ವಿಯಾದರು.
ಎಂಜಿ ರಸ್ತೆಯ ಮೆಟ್ರೋ ನಿಲ್ದಾಣದಲ್ಲಿ ತಿಮ್ಮೇಗೌಡ 15-20 ನಿಮಿಷಗಳ ಕಾಲ ಪ್ಲಾಟ್ಫಾರ್ಮ್ ಮೇಲೆ ಮಲಗಿದ್ದರು. ದೂರಿನ ಪ್ರಕಾರ, ಭದ್ರತಾ ಸಿಬ್ಬಂದಿ ಮತ್ತು ಇತರ ಬಿಎಂಆರ್ಸಿಎಲ್ ಸಿಬ್ಬಂದಿ ಸಹಾಯವನ್ನು ನೀಡಲಿಲ್ಲ ಅಥವಾ ಆಂಬ್ಯುಲೆನ್ಸ್ಗೆ ಕರೆ ಮಾಡಲಿಲ್ಲ ಎಂದು ಆರೋಪಿಸಲಾಗಿದೆ.
ಮುತ್ತುರಾಜ್ ಮನವಿ ಮಾಡಿದ ನಂತರ, ಪ್ರಯಾಣಿಕರಲ್ಲಿ ಒಬ್ಬರು ತಿಮ್ಮೇಗೌಡರನ್ನು ಆಟೋ ರಿಕ್ಷಾದ ಮೂಲಕ 11.15 ಕ್ಕೆ ಇನ್ಫೆಂಟ್ರಿ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಸಹಾಯ ಮಾಡಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮರುದಿನ ಬೆಳಗ್ಗೆ 11.57ಕ್ಕೆ ತಿಮ್ಮೇಗೌಡ ನಿಧನರಾದರು.
ಮೆಟ್ರೋ ನಿಲ್ದಾಣದ ಫ್ಲಾಟ್ಫಾರಂ ಮೇಲೆ 15-20 ನಿಮಿಷ ಅನಾರೋಗ್ಯದಿಂದ ಮಲಗಿದ್ದರೂ ಸಹಾಯಕ್ಕೆ ಬರದ ಮೆಟ್ರೋ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಸಮಯಕ್ಕೆ ಸರಿಯಾಗಿ ತಿಮ್ಮೇಗೌಡರಿಗೆ ಸೂಕ್ತ ಚಿಕಿತ್ಸೆ ಸಿಕ್ಕಿದ್ದರೆ ಬದುಕುಳಿಯುವ ಸಾಧ್ಯತೆ ಇತ್ತು ಎನ್ನಲಾಗಿದೆ.












Click it and Unblock the Notifications