ಮಾರ್ಚ್ 22ರಂದು 'ನಮ್ಮ ಮೆಟ್ರೋ' ಸಿಬ್ಬಂದಿ ಮುಷ್ಕರವಿಲ್ಲ
ಬೆಂಗಳೂರು, ಮಾರ್ಚ್ 20 : ಬೆಂಗಳೂರು ಮೆಟ್ರೊ ರೈಲು ನಿಗಮದ ಸಿಬ್ಬಂದಿಗಳು ಕರೆ ನೀಡಿದ್ದ ಮಾರ್ಚ್ 22ರ ಮುಷ್ಕರವನ್ನು ವಾಪಸ್ ಪಡೆಯಲಾಗಿದೆ. ಇದರಿಂದಾಗಿ ನಮ್ಮ ಮೆಟ್ರೋ ರೈಲುಗಳು ಎಂದಿನಂತೆ ಸಂಚಾರ ನಡೆಸಲಿವೆ.
ಕರ್ನಾಟಕ ಹೈಕೋರ್ಟ್ ಸಲಹೆಯ ಹಿನ್ನಲೆಯಲ್ಲಿ ಬಿಎಂಆರ್ಸಿಎಲ್ ಸಿಬ್ಬಂದಿಗಳು ಮಾರ್ಚ್ 22ರಂದು ಕರೆ ನೀಡಿದ್ದ ಮುಷ್ಕರವನ್ನು ವಾಪಸ್ ಪಡೆದಿದ್ದಾರೆ. ಮಾರ್ಚ್ 26ರಂದು ಆಡಳಿತ ಮಂಡಳಿ ಮತ್ತು ನೌಕರರ ನಡುವೆ ಮತ್ತೊಮ್ಮೆ ಸಭೆ ನಡೆಯಲಿದೆ.
ನಮ್ಮ ಮೆಟ್ರೋ ಸಿಬ್ಬಂದಿಗಳ ಮುಷ್ಕರವೇಕೆ?
ಬಿಎಂಆರ್ಸಿಎಲ್ ಸಿಬ್ಬಂದಿಗಳು ಮುಷ್ಕರಕ್ಕೆ ಕರೆ ನೀಡಿದ್ದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ (ಎಸ್ಮಾ) ಜಾರಿಗೊಳಿಸಿತ್ತು. ಇದನ್ನು ಸಿಬ್ಬಂದಿಗಳು ಕರ್ನಾಟಕ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು.
2002ರ ಮೆಟ್ರೋ ಕಾಯ್ದೆಯ ಅನ್ವಯ ರಾಜ್ಯ ಸರ್ಕಾರಕ್ಕೆ ಬಿಎಂಆರ್ಸಿಎಲ್ ಸಿಬ್ಬಂದಿಗಳ ವಿರುದ್ಧ ಎಸ್ಮಾ ಜಾರಿಗೊಳಿಸಲು ಅವಕಾಶವಿಲ್ಲ ಎಂದು ನೌಕರರು ವಾದಿಸಿದ್ದರು. ಮಂಗಳವಾರ ಹೈಕೋರ್ಟ್ನಲ್ಲಿ ಈ ಅರ್ಜಿಯ ವಿಚಾರಣೆ ನಡೆಯಿತು.
ಸಿಬ್ಬಂದಿ ಮುಷ್ಕರ: ದೇಶದ ಇತರೆ ಮೆಟ್ರೋಗಳಿಂದ ಬಿಎಂಆರ್ ಸಿಎಲ್ ಗೆ ನೆರವು
ಮತ್ತೊಮ್ಮೆ ಆಡಳಿತ ಮಂಡಳಿ ಜೊತೆ ಮಾತುಕತೆ ನಡೆಸಿ ಎಂದು ಹೈಕೋರ್ಟ್ ಸಿಬ್ಬಂದಿಗಳಿಗೆ ಸೂಚನೆ ನೀಡಿತು. ನ್ಯಾಯಾಲಯದ ಸಲಹೆ ಹಿನ್ನಲೆಯಲ್ಲಿ ಸಿಬ್ಬಂದಿಗಳು ಮಾರ್ಚ್ 22ರಂದು ಕರೆ ನೀಡಿದ್ದ ಮುಷ್ಕರವನ್ನು ವಾಪಸ್ ಪಡೆದರು.
ಮಾರ್ಚ್ 26ರಂದು ಆಡಳಿತ ಮಂಡಳಿ ಜೊತೆ ಸಿಬ್ಭಂದಿಗಳು ಮತ್ತೊಮ್ಮೆ ಮಾತುಕತೆ ನಡೆಸಲಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಿದ್ದಾರೆ. ಸಭೆಯ ಬಳಿಕ ಮುಷ್ಕರ ನಡೆಸುವ ಕುರಿತು ಸಿಬ್ಬಂದಿಗಳು ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಮುಷ್ಕರ ಏಕೆ? : ವೇತನ ಪರಿಷ್ಕರಣೆ, ಬಡ್ತಿ, ಕನ್ನಡಿಗ ಮತ್ತು ಹಿಂದಿ ಉದ್ಯೋಗಿಗಳ ನಡುವಿನ ತಾರತಮ್ಯ ನಿವಾರಣೆ ಮುಂತಾದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಬ್ಬಂದಿ ಮುಷ್ಕರಕ್ಕೆ ಕರೆ ನೀಡಿದ್ದರು.