ಕಣ್ಣು ಮಣ್ಣಾಗದಿರಲಿ ಬೇರೊಬ್ಬರ ಬಾಳಿಗೆ ಹೊನ್ನಾಗಲಿ
Recommended Video
ಮರಣಾನಂತರವೂ ನಮ್ಮದೊಂದು ಅಸ್ತಿತ್ವ ಜಗತ್ತಿನ ಜೀವಿಗಳಲ್ಲಿ ಇರುವುದಾದರೆ ಅದು ಕಣ್ಣು ಮಾತ್ರ ಹೀಗಾಗಿ ಕಣ್ಣನ್ನು ಮಣ್ಣಾಗಲು ಬಿಡದೆ ಬೇರೊಬ್ಬರ ಜೀವನಕ್ಕೆ ಹೊನ್ನಾಗುವಂತೆ ಮಾಡುವುದು ನಿಮ್ಮ, ನಮ್ಮೆಲ್ಲರ ಕರ್ತವ್ಯವಾಗಿದೆ.
ಈ ನಿಟ್ಟಿನಲ್ಲಿ ಹೋಪ್ ಸೊಸೈಟಿಯು 'ಪ್ರಾಜೆಕ್ಟ್ ವಿಷನ್' ಯೋಜನೆಯಡಿ ವಿಶ್ವ ಅಂಧರ ದಿನದ ಪ್ರಯುಕ್ತ 'ಅಂಧರ ನಡಿಗೆ' ಕಾರ್ಯಕ್ರಮವನ್ನು ಅಕ್ಟೋಬರ್ 10ರಂದು ಆಯೋಜಿಸಿದೆ.
ಈ ನಡಿಗೆಯು ಸಂಜೆ 4.30ಕ್ಕೆ ಮ್ಯೂಸಿಯಮ್ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ ಶಾಲೆಯಿಂದ ಆರಂಭವಾಗಲಿದ್ದು ಬ್ರಿಗೆಡ್ ರಸ್ತೆಯಲ್ಲಿ ಕೊನೆಗೊಳ್ಳಲಿದೆ ಸುಮಾರು 500 ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಐಫೋ ಸಂಸ್ಥೆಯ ಡಾ. ಜಯಂತ್ ಕುಮಾರ್ 'ಒನ್ ಇಂಡಿಯಾ'ಗೆ ತಿಳಿಸಿದ್ದಾರೆ.
ನಮ್ಮ ದೇಶದಲ್ಲಿ ಇಂದಿಗೂ ಒಂದು ಅಂದಾಜಿನ ಪ್ರಕಾರ 50 ಲಕ್ಷಕ್ಕೂ ಅಧಿಕ ಪುರುಷರೂ, ಮಹಿಳೆಯರೂ ಹಾಗೂ ಮಕ್ಕಳು ಅಂಧರಾಗಿ ಜೀವನ ನಡೆಸುತ್ತಿದ್ದಾರೆ. ಇವರೆಲ್ಲರೂ ಯಾವತ್ತೂ ಸೂರ್ಯನ ಕಿರಣಗಳನ್ನು ಕಂಡಿಲ್ಲ. ಪೂರ್ಣ ಹುಣ್ಣಿಮೆ ಚಂದ್ರನ ಸವಿ ಸವಿದಿಲ್ಲ.
ಇಂಥವರಿಗೆ ಸಹಾಯ ಮಾಡುವ ಮನಸ್ಸು ನಾವೆಲ್ಲಾ ಮಾಡಬೇಕು. ನೇತ್ರದಾನ ಮಾಡುವವರ ಸಂಖ್ಯೆ ಇನ್ನೂ ಹೆಚ್ಚಬೇಕು. ಈ ನಿಟ್ಟಿನಲ್ಲಿ ಸಮಾಜದ ಸಂಘ ಸಂಸ್ಥೆಗಳು ಪ್ರಜ್ಞಾವಂತರು ಜಾಗೃತಿ ಮೂಡಿಸಬೇಕು ಎನ್ನುವುದು ಆಶಯವಾಗಿದೆ.

ನೇತ್ರದಾನದ ಬಗ್ಗೆ ನೀವು ತಿಳಿಯಲೇಬೇಕಾದ ಸಂಗತಿ
ನೇತ್ರದಾನ ಎಂದರೆ ಕೆಲವರು ಇಡೀ ಕಣ್ಣನ್ನೇ ತೆಗೆಯುತ್ತಾರೆ ಎಂದು ತಿಳಿದಿರುತ್ತಾರೆ ಆದರೆ ಅದು ತಪ್ಪು, ಕಣ್ಣಿನ ಒಂದು ಪದರ(ಕಾರ್ನಿಯಾ)ವನ್ನು ಮಾತ್ರ ತೆಗೆಯಲಾಗುತ್ತದೆ. ಈ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಕೆಲವರು ನೇತ್ರದಾನ ಮಾಡಿದ್ದರೂ ಕೂಡ ಮರಣ ಸಂಭವಿಸಿದಾಗ ಅವರ ಕುಟುಂಬದವರು ಮಾಹಿತಿಯನ್ನೇ ನೀಡುವುದಿಲ್ಲ. ಹಾಗೆಂದ ಮಾತ್ರಕ್ಕೆ ಅವರಿಗೆ ನೇತ್ರದಾನ ಇಷ್ಟವಿಲ್ಲ ಎಂದರ್ಥವಲ್ಲ ಆದರೆ ಕಣ್ಣನ್ನು ಕಿತ್ತುಬಿಟ್ಟರೆ ಅಂತಿಮ ಕ್ಷಣದಲ್ಲಿ ಅವರ ವಿರೂಪ ಮುಖವನ್ನು ನೋಡಲು ಸಾಧ್ಯವಿಲ್ಲ ಎಂಬ ಭಾವನಾತ್ಮಕ ಆಲೋಚನೆಯೂ ಅವರಲ್ಲಿರುತ್ತದೆ ಎಂದು ಜಯಂತ್ ಹೇಳಿದ್ದಾರೆ.

ದೃಷ್ಟಿಹೀನತೆಗೆ ಇಲ್ಲಿವೆ ಕೆಲವು ಕಾರಣ
ಶೇ.20ರಷ್ಟು ಮಂದಿ ಕಾರ್ನಿಯಾ ಇಂಜ್ಯುರಿಯಿಂದ ಬಳಲುತ್ತಿದ್ದಾರೆ. ಇನ್ನೂ ಕೆಲವರು ಕುಷ್ಟರೋಗ ಪೀಡಿತರು ಕ್ರಮೇಣವಾಗಿ ದೃಷ್ಟಿ ಕಳೆದುಕೊಳ್ಳುತ್ತಿದ್ದಾರೆ. ಇನ್ನೂ ಎಚ್ಐವಿ ಪೀಡಿತರ ಸಂಖ್ಯೆಯೂ ಕೂಡ ಹೆಚ್ಚಿದೆ.

ಅಂಧರು ಕೂಡ ಪ್ರಪಂಚವನ್ನು ನೋಡುವಂತಾಗಬೇಕು
ಸಾಕಷ್ಟು ಸಂಸ್ಥೆಗಳು ಅಂಧರಿಗಾಗಿ ಶ್ರಮಿಸುತ್ತಿವೆ. ಆದರೆ ಅಂಧರಿಗೆ ತರಬೇತಿ ನೀಡುವುದು, ಶಿಕ್ಷಣ, ಮೂಲಸೌಕರ್ಯಗಳನ್ನು ಒದಗಿಸುತ್ತಿವೆ. ಆದರೆ ನಾವು ಅಂಧತ್ವವನ್ನು ಹೋಗಲಾಡಿಸಿ ಅವರಿಗೆ ಕಣ್ಣು ಕೊಡಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಅವರು ಕೂಡ ಪ್ರಪಂಚವನ್ನು ನೋಡುವಂತಾಗಬೇಕು. ಒಬ್ಬರ ಕಣ್ಣು ಎರಡು ಜೀವಗಳ ಬಾಳಿಗೆ ಬೆಳಕಾಗಬಹುದು.

ದೇಶದಲ್ಲಿದೆ ಒಟ್ಟು 750 ಕಣ್ಣಿನ ಬ್ಯಾಂಕ್
ವಿಶ್ವದಲ್ಲಿ ಒಟ್ಟು 39 ಮಿಲಿಯನ್ ಮಂದಿ ಅಂಧರಿದ್ದಾರೆ. ಅದರಲ್ಲಿ 15 ಮಿಲಿಯನ್ ಅಂದರೆ ಸುಮಾರು ಅರ್ಧ ಮಂದಿ ಭಾರತದಲ್ಲೇ ಇದ್ದಾರೆ. ಪ್ರತಿ 100 ಮಂದಿಯಲ್ಲಿ ಒಬ್ಬರಿಗೆ ದೃಷ್ಟಿದೋಷ ಇರುತ್ತದೆ. ಕಳೆದ ವರ್ಷ ಭಾರತದಲ್ಲಿ 90 ಲಕ್ಷ ಮಂದಿ ಮೃತಪಟ್ಟಿದ್ದರೆ ಕೇವಲ 30 ಸಾವಿರ ಮಂದಿ ಮಾತ್ರ ನೇತ್ರದಾನ ಮಾಡಿದ್ದಾರೆ.

ಅಂಧರಿಗಾಗಿಯೇ ಅಭಿವೃದ್ಧಿಪಡಿಸಲಾಗಿರುವ ಸಾಫ್ಟ್ವೇರ್ಗಳು
-ಅಂಧರಿಗಾಗಿಗೇ ಜೋಸ್ ಎನ್ನುವ ಸಾಫ್ಟ್ವೇರ್ ಅಭಿವೃದ್ಧಿಪಡಿಸಲಾಗಿದೆ. ಅದರಿಂದ ಸುಲಭವಾಗಿ ಅಂಧರು ಕಂಪ್ಯೂಟರ್ ಅಥವಾ ಮೊಬೈಲ್ಗಳಲ್ಲಿ ಸುದ್ದಿಗಳನ್ನು ಅಥವಾ ಸಂದೇಶಗಳನ್ನು ಸುಲಭವಾಗಿ ಓದಬಹುದಾಗಿದೆ.
- ಬ್ರೈಲ್ ವಾಚ್, ಬ್ರೈಲ್ ಕ್ಯಾಲ್ಕ್ಯುಲೇಟರ್, ವಾಲ್ ಕ್ಲಾಕ್ ಸೇರಿದಂತೆ ಇತರೆ ಸೌಲಭ್ಯಗಳಿವೆ.
- ಬಿ ಮೈ ಐಸ್ ಅಪ್ಲಿಕೇಷನ್- ಬಿ ಮೈ ಐಸ್ ಅಪ್ಲಿಕೇಷನ್ ಮೂಲಕ ನಾವು ಎಲ್ಲೇ ಇದ್ದರೂ ಕೂಡ ಆ ಸ್ಥಳದ ಮಾಹಿತಿಯನ್ನು ಸುಲಭವಾಗಿ ತಿಳಿಯಬಹುದಾಗಿದೆ.
-ಸೆನ್ಸರ್ ಇರುವ ಕೇನ್ಗಳು

ಕಾರ್ನಿಯಾ ಎಂದರೇನು?
ಕಣ್ಣಿನ ಪಾಪೆಯ ಗಾಜಿನಂತಿರುವ ರಕ್ಷಾಭಾಗವೇ ಕಾರ್ನಿಯಾ. ಕಣ್ಣಿನ ಕಾರ್ನಿಯಾ ಒಂದು ಕ್ಯಾಮರಾ ತರಹ ಇರುತ್ತದೆ. ಕ್ಯಾಮರಾದಲ್ಲಿ ಮುಂದೆ ಒಂದು ಲೆನ್ಸ್ ಇರುತ್ತದೆ. ಹಾಗೂ ಹಿಂದೆ ಒಂದು ಸ್ಕ್ರೀನ್ ಇರುತ್ತದೆ. ಫೋಟೋ ತೆಗೆದ ಮೇಲೆ ಹೇಗೆ ಇಮೇಜ್ ಸ್ಕ್ರೀನಿನ ಮೇಲೆ ಬರುತ್ತದೆಯೋ ಅದೇ ತರಹ ನಮ್ಮ ಕಣ್ಣಿನ ಲೆನ್ಸ್ನ ಮುಂದೆ ಕಾರ್ನಿಯಾ ಹಾಗೂ ಲೆನ್ಸ್ನ ಹಿಂದೆ ರೆಟಿನಾ ಇರುತ್ತದೆ. ಎದುರಿನ ಕಾರ್ನಿಯಾಕ್ಕೆ ಹಾನಿಯಾಗಿದ್ದರೆ ಹಿಂದೆ ಬೆಳಕು ಹೋಗುವುದಿಲ್ಲ. ಆಗ ಆ ವ್ಯಕ್ತಿಗೆ ಕಾಣಿಸುವುದಿಲ್ಲ. ಈ ಕಾರ್ನಿಯಾಕ್ಕೆ ಹೇಗೆ ಹಾನಿಯಾಗುತ್ತದೆ ಎಂದರೆ ಮಕ್ಕಳ ಅಪೌಷ್ಟಿಕತೆಯಿಂದ, ಕಣ್ಣಿನ ಸೋಂಕಿನಿಂದ ಅಥವಾ ಕಣ್ಣಿನ ಕಪ್ಪು ಗುಡ್ಡೆಗೆ ಗಾಯವಾದಾಗ. ಈ ಕಾರ್ನಿಯಾಕ್ಕೆ ಹಾನಿಯಾಗಿ ದೃಷ್ಟಿ ಕಳೆದುಕೊಂಡಿದ್ದರೆ ಕಾರ್ನಿಯಾ ಮತ್ತೆ ಜೋಡಣೆ ಮಾಡುವುದರಿಂದ ಪುನಃ ದೃಷ್ಟಿಯನ್ನು ಮರಳಿ ಪಡೆಯಬಹುದು. ಕಾರ್ನಿಯಾಕ್ಕೆ ಇದುವರೆಗೂ ಯಾವುದೇ ಪರ್ಯಾಯವನ್ನು ಅಭಿವೃದ್ಧಿ ಪಡಿಸಿಲ್ಲ.

ನೀವೂ ನೇತ್ರದಾನ ಮಾಡಬೇಕೇ ಹೀಗೆ ಮಾಡಿ
ನಿಮಗೆ ನೇತ್ರದಾನ ಮಾಡಲು ಇಚ್ಛೆ ಇದ್ದರೆ ಒಂದು ಎಸ್ಎಂಎಸ್ ಕಳುಹಿಸಿ...TPV-Name-Place ಟೈಪ್ ಮಾಡಿ 7039670396ಗೆ ಎಸ್ಎಂಎಸ್ ಕಳುಹಿಸಿ. ಮನೆಯಲ್ಲಿ ಯಾರಾದರೂ ಮರಣಹೊಂದಿದ್ದರೆ 104 ಸಂಖ್ಯೆಗೆ ಕರೆಮಾಡಿ.

ಚುನಾವಣೆಯಲ್ಲೂ ಮೀಸಲಾತಿ
ಚುನಾವಣೆಯಲ್ಲೂ ಮೀಸಲಾತಿ ನೀಡಬೇಕು. ಮತದಾನ ಮಾಡಲು ತೆರಳಿದರೆ ಒಂದೇ ಕಡೆ ಹತ್ತಾರು ಹೆಸರುಗಳಿರುತ್ತವೆ ಯಾವ ಆಗ ನಮಗೆ ಬೇಕಾದ ಅಭ್ಯರ್ಥಿಗಳಿಗೆ ಮತ ಹಾಕಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸುಲಭವಾಗಿ ವ್ಯಕ್ತಿ, ಪಕ್ಷ ಗುರುತಿಸುವ ಹಾಗೆ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.












Click it and Unblock the Notifications