ಚುನಾವಣಾ ಪ್ರಚಾರಕ್ಕೆ ಬಿಜೆಪಿಯ ವಿಭಿನ್ನ ಕಾರ್ಯತಂತ್ರ!
ಬೆಂಗಳೂರು, ಅ,22 : ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರ ನೋಂದಣಿ ಕಾರ್ಯವನ್ನು ಬೆಂಗಳೂರು ಮತ್ತು ರಾಜ್ಯದ ಇತರ ಜಿಲ್ಲೆಗಳಲ್ಲಿ ಪ್ರಾರಂಭಿಸಿದೆ. ಟೆಕ್ಕಿಗಳು, ವಕೀಲರು, ವೈದ್ಯರು ಮುಂತಾದವರನ್ನು ಕಾರ್ಯಕರ್ತರಾಗಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆ.
ಬೆಂಗಳುರಿನಲ್ಲಿ ಮನೆ-ಮನೆಗಳಿಗೆ ತೆರಳಿ ಬಿಜೆಪಿ ಕಾರ್ಯಕರ್ತರು ನೋಂದಣಿ ಅಭಿಯಾನ ನಡೆಸುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಟೆಕ್ಕಿಗಳು, ವಕೀಲರು, ವೈದ್ಯರು ಬಿಜೆಪಿಗೆ ಬೆಂಬಲ ನೀಡುವಂತೆ ಮಾಡಿ, ಕೇಂದ್ರದಲ್ಲಿ ಅಧಿಕಾರಕ್ಕೆರುವ ಯೋಜನೆ ಈ ಅಭಿಯಾನದ ಉದ್ದೇಶ.

ಸುಮಾರು 15,000 ಇಂತಹ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಅವರು ಕಾರ್ಯನಿರ್ವಹಿಸುವ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುವ ಉದ್ದೇಶವನ್ನು ಬಿಜೆಪಿ ಹೊಂದಿದೆ. ಇಂತಹ ಕಾರ್ಯಕರ್ತರು ಸ್ವ ಇಚ್ಛೆಯಿಂದ ತಮ್ಮ ಹೆಸರನ್ನು ನೋಂದಾವಣೆ ಮಾಡಿಕೊಳ್ಳಬಹುದು.
ಇದುವರೆಗೂ ಸುಮಾರು ಎರಡು ಸಾವಿರ ಇಂತಹ ಕಾರ್ಯಕರ್ತರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡಲಿದ್ದಾರೆ. ಇವರಲ್ಲಿ ಸುಮಾರು 800 ಜನರು ಈಗಾಗಲೇ ಬಿಜೆಪಿ ಪರವಾಗಿ ಪ್ರಚಾರ ಮಾಡಲು ಪ್ರಾರಂಭಿಸಿದ್ದಾರೆ ಎಂದು ಪಕ್ಷದ ಮಾಧ್ಯಮ ವಿಭಾಗ ಮಾಹಿತಿ ನೀಡಿದೆ.
ಹೀಗೆ ನೋಂದಾವಣೆ ಮಾಡಿಕೊಂಡ ಕಾರ್ಯಕರ್ತರಿಗೆ ಪಕ್ಷದ ವತಿಯಿಂದ ಪ್ರಚಾರ ನಡೆಸುವ ಕುರಿತು ತರಬೇತಿ ಸಹ ನೀಡಲಾಗುತ್ತದೆ. ತಮ್ಮ ಕ್ಷೇತ್ರಗಳಲ್ಲಿ ಪ್ರಚಾರ ಸಾಮಾಗ್ರಿ ಸಿದ್ಧಪಡಿಸಿಕೊಂಡು ಹೇಗೆ ಪ್ರಚಾರ ನಡೆಸಬೇಕು ಎಂದು ಮಾಹಿತಿ ನೀಡಲಾಗುತ್ತದೆ. ಈ ಪ್ರಚಾರದ ಮೂಲಕ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಸಾಧನೆಯನ್ನು ಪ್ರತಿಯೊಬ್ಬರಿಗೂ ತುಲುಪಿಸಲಿ ಬಿಜೆಪಿ ನಿರ್ಧರಿಸಿದೆ.
ಈ ರೀತಿ ಸ್ವ ಇಚ್ಛೆಯಿಂದ ಪ್ರಚಾರ ಮಾಡುವವರು ಶನಿವಾರ, ಭಾನುವಾರ ಮತ್ತು ರಜಾ ದಿನಗಳಲ್ಲಿ ಮಾತ್ರ ತಮ್ಮ ಪ್ರಚಾರ ಕಾರ್ಯ ಕೈಗೊಳ್ಳುತ್ತಾರೆ. ಉಳಿದ ದಿನ ತಮ್ಮ-ತಮ್ಮ ಕೆಲಸದಲ್ಲಿ ತೊಡಗಿರುತ್ತಾರೆ. ದೀಪಾವಳಿ ನಂತರ ಇವರು ಬಹಿರಂಗವಾಗಿ ಪ್ರಚಾರ ಕಾರ್ಯಕ್ಕೆ ಇಳಿಯಲಿದ್ದಾರೆ.
ಅ.27 ಭಾನುವಾರ ಇಂತಹ ಕಾರ್ಯಕರ್ತರಿಗೆ ಬಿಜೆಪಿ ಬೆಂಗಳೂರಿನಲ್ಲಿ ತರಬೇತಿ ಶಿಬಿರ ಹಮ್ಮಿಕೊಂಡಿದೆ. ಪ್ರಚಾರ ಸಮಿತಿಯ ಸಭೆ ಶನಿವಾರ ಬೆಂಗಳೂರಿನಲ್ಲಿ ನಡೆಯಲಿದ್ದು, ಅಂದು ತರಬೇತಿ ಶಿಬಿರದ ರೂಪುರೇಷೆ ತಯಾರಿಸಲಾಗುತ್ತದೆ.
ಸಾಮಾಜಿಕ ಜಾಲ ತಾಣಗಳನ್ನು ಪರಿಣಾಮಕಾರಿಯಾಗಿ ಪ್ರಚಾರ ನಡೆಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ. ಈಗಾಗಲೇ ಮಾಜಿ ಸಚಿವ ಅರವಿಂದ ಲಿಂಬಾವಳಿ, ಸಾಮಾಜಿಕ ತಾಣಗಳನ್ನು ಬಳಿಸಕೊಂಡು ಪ್ರಚಾರ ಮಾಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಇಂದಿನ ಯುವಜನಾಂಗ ತಲುಪಲು ಸಾಮಾಜಿಕ ತಾಣಗಳೇ ಪ್ರಮುಖ ಅಸ್ತ್ರವಾಗಿವೆ ಎಂದು ಹೇಳಿದ್ದಾರೆ.












Click it and Unblock the Notifications