'ನರೇಂದ್ರ ಮೋದಿ ಕೋಬ್ರಾ; ಯುಪಿಎ ಸರ್ಕಾರ ಚೇಳು'
ಬೆಂಗಳೂರು, ಸೆಪ್ಟೆಂಬರ್ 18: ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಕಳೆದ ವಾರ ಆಯ್ಕೆಯಾಗುತ್ತಿದ್ದಂತೆ ಮೋದಿ ಪರ ಮತ್ತು ವಿರುದ್ಧ ನಾಡಿನ ಅನೇಕಾನೇಕ ಮಂದಿ ತಮ್ಮ ಶಕ್ತಿ/ಸಾಮರ್ಥ್ಯ, ಗ್ರಹಿಕೆಗೆ ಅನುಸಾರ ಹೇಳಿಕೆಗಳನ್ನು/ ಫರ್ಮಾನುಗಳನ್ನು ಹೊರಡಿಸಿದ್ದಾರೆ.
ಮೊದಲು ಮಾತಿನ ಬಾಂಬ್ ಸಿಡಿಸಿದವರು ಜ್ಞಾನಪೀಠ ಬುದ್ಧಿಜೀವಿ ಡಾ. ಯು.ಆರ್. ಅನಂತಮೂರ್ತಿ ಅವರು 'ಮೋದಿ ಪ್ರಧಾನಿಯಾಗುವ ದೇಶದಲ್ಲಿ ನಾನಿರಲಾರೆ' ಎಂದು ತಮ್ಮ ಅಭಿವೃಕ್ತಿ ಸ್ವಾತಂತ್ರ್ಯವನ್ನು ಪ್ರಕಟಗೊಳಿಸಿದರು.
ಇಡೀ ನಾಡಿನಾದ್ಯಂತ ಇದಕ್ಕೆ ವ್ಯಾಪಕ ಟೀಕೆಗಳು ಹರಿದುಬಂದಿವೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೀಗೆ ಹೇಳಿದ್ದಾರೆ:

'ಕಾಂಗ್ರೆಸ್ ನಲ್ಲಿ ವೀರಪ್ಪ ಮೊಯಿಲಿ ಸೇರಿದಂತೆ ಎಲ್ಲ ನಾಯಕರು ಇಂದಿರಾ ಗಾಂಧಿ ಕುಟುಂಬದ ಭಟ್ಟಂಗಿಗಳಾಗಿದ್ದು, ನಾಯಕತ್ವದ ದಿವಾಳಿತನದಲ್ಲಿದ್ದಾರೆ. ಅದಕ್ಕೇ ನರೇಂದ್ರ ಮೋದಿಯವರ ಬಗ್ಗೆ ಭೀತಿ ನಿರ್ಮಾಣವಾಗಿದೆ'.
ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಪ್ರತಿಕ್ರಿಯೆ:
'ಮೋದಿ ಪ್ರಧಾನಿಯಾದರೆ ತಾವು ಭಾರತದಲ್ಲಿ ನೆಲೆಸಲು ಇಷ್ಟಪಡುವುದಿಲ್ಲ ಎಂದು ಹೇಳಿಕೆ ನೀಡಿರುವ ಅನಂತಮೂರ್ತಿ ಆದಷ್ಟು ಬೇಗನೇ ಈ ದೇಶದಿಂದ ಹೊರ ನಡೆಯಲಿ. ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿದಾಗ ಈ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಕುರಿತು ಅಭಿಮಾನವನ್ನು ಹೊಂದಿರುವ ಪ್ರತಿಯೊಬ್ಬ ಪ್ರಜೆ ಸಂಭ್ರಮಿಸಿದ್ದಾನೆ. ಈ ಸಂದರ್ಭದಲ್ಲಿ ಜಾತ್ಯತೀತತೆಯ ತುತ್ತೂರಿ ಊದಿದರೆ ನಡೆಯುವುದಿಲ್ಲ'
ಇನ್ನು ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ಮಾರ್ನುಡಿ ಏನು?
'ನರೇಂದ್ರ ಮೋದಿ 'ಕೋಬ್ರಾ' ಇದ್ದಂತೆ. ಯುಪಿಎ ಸರ್ಕಾರ 'ಚೇಳು' ಇದ್ದಂತೆ. ಚೇಳು ಕುಟುಕಿದರೆ ಔಷಧಿಯಿದೆ. ಆದ್ದರಿಂದ ಯಾವ ಆಡಳಿತ ಬೇಕೆಂದು ಜನರೇ ನಿರ್ಧರಿಸಬೇಕು. ಮೋದಿ ಪ್ರಧಾನಿಯಾದರೆ ದೇಶವೇ ವಿಷ ವರ್ತುಲದೊಳಗೆ ಸಿಲುಕಿಕೊಳ್ಳುತ್ತದೆ. ಯುಪಿಎ ಸರ್ಕಾರ ಜನಸ್ನೇಹಿಯಾಗಿ ಕೆಲಸ ನಿರ್ವಹಿಸುತ್ತದೆ'.












Click it and Unblock the Notifications