ಕಾಂಗ್ರೆಸ್-ಜೆಡಿಎಸ್ ಒಲೆಯೇ ತೂತು, ಆ ಒಲೆಯಲ್ಲಿ ಬೆಂಕಿಯೂ ಇಲ್ಲ: ಗೋ. ಮಧುಸೂದನ್
ಬೆಂಗಳೂರು, ಅಕ್ಟೋಬರ್ 23: 'ಕಾಂಗ್ರೆಸ್ ಮತ್ತು ಜೆಡಿಎಸ್ನವರ ಒಲೆಯೇ ತೂತು' ಎಂದು ಬಿಜೆಪಿ ವಕ್ತಾರ ಗೋ. ಮಧುಸೂದನ್ ಲೇವಡಿ ಮಾಡಿದ್ದಾರೆ.
'ಬಿಜೆಪಿಯ ದೋಸೆ ತೂತು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಹೇಳಿದ್ದರು. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ನ ದೋಸೆಯಲ್ಲ, ಒಲೆಯೇ ತೂತು. ಆ ಒಲೆಯಲ್ಲಿ ಬೆಂಕಿ ಕೂಡ ಇಲ್ಲ' ಎಂದು ಅವರು ವ್ಯಂಗ್ಯವಾಡಿದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರು ಸೋಲಾರ್ ಪವರ್ ಸುಂದರಿಯ ಹಿಂದೆ ಹೋಗಿದ್ದರು. ಅವರ ಪರಿಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದೇ ಇದೆ. ಅವರನ್ನು ಹಿಂಬಾಲಿಸುತ್ತಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ಸ್ಥಿತಿಯೂ ಹಾಗೆಯೇ ಹಾಗಿದೆ ಎಂದರು.

ಎಚ್ ಡಿ ಕುಮಾರಸ್ವಾಮಿ ಅವರು ಎಷ್ಟಾದರೂ ಸಿನಿಮಾ ನಿರ್ಮಾಪಕರು. ಅವರು ತೀಲು ಬಿಡುತ್ತಲೇ ಇರುತ್ತಾರೆ. ನಾವು ಅದನ್ನು ಸುತ್ತಿಕೊಳ್ಳುತ್ತಿದ್ದೇವೆ. ಅವರು ಒಳ್ಳೆಯ ಚಿತ್ರಕಥೆಗಾರ ಎನ್ನುವುದು ಸಾಬೀತಾಗುತ್ತಿದೆ ಎಂದು ಹೇಳಿದರು.
ರೈತರ ಸಾಲ ಮನ್ನಾ ಮಾಡುತ್ತಿರುವುದಾಗಿ ಕುಮಾರಸ್ವಾಮಿ ಸುಳ್ಳು ಹೇಳುತ್ತಿದ್ದಾರೆ. ಈ ಹಿಂದಿನ ಸಿದ್ದರಾಮಯ್ಯ ಸರ್ಕಾರ ಸಹಕಾರ ಸಂಘಗಳಲ್ಲಿನ ಎಂಟು ಸಾವಿರ ಕೋಟಿ ರೂ ಬೆಳೆ ಸಾಲ ಮನ್ನಾ ಮಾಡುವುದನ್ನು ಬಾಕಿ ಉಳಿಸಿತ್ತು. ಆ ಸಾಲವನ್ನು ಮಾತ್ರ ಈಗಿನ ಸರ್ಕಾರ ಮನ್ನಾ ಮಾಡಿದೆ.
ಸಹಕಾರ ಸಂಘಗಳಲ್ಲಿನ ಸಾಲ ಮನ್ನಾ ಮಾಡುವುದಕ್ಕೆ 9,450 ಕೋಟಿ ರೂ. ಬಿಡುಗಡೆ ಮಾಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಈ ಹಣವನ್ನು ಯಾವ ಜಿಲ್ಲೆಗೆ ಬಿಡುಗಡೆ ಮಾಡಲಿದ್ದಾರೆ ಎಂದು ಅವರು ಸ್ಪಷ್ಟನೆ ನೀಡಬೇಕು ಎಂದು ಮಧುಸೂದನ್ ಆಗ್ರಹಿಸಿದರು.












Click it and Unblock the Notifications