ಬಿಜೆಪಿಯವರು 2 ನಾಲಿಗೆಯವರು, ಗೋಸುಂಬೆಗಳು: ಸಿದ್ದು
ಬೆಂಗಳೂರು, ಡಿಸೆಂಬರ್ 28: ಜಿಜೆಪಿಯವರು ಎರಡು ನಾಲಿಗೆಯವರು, ಗೋಸುಂಬೆಗಳು, ಢೋಂಗಿಗಳು ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ತೀಕ್ಷ್ಣವಾಗಿ ವಾಗ್ದಾಳಿ ಮಾಡಿದ್ದಾರೆ.
ಗೊರಗುಂಟೆ ಪಾಳ್ಯದ ಪ್ರಭಾಕರ ಕೋರೆ ಸಭಾಂಗಣದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ವತಿಯಿಂದ ನಡೆದ 132ನೇ ಸಂಸ್ಥಾಪನಾ ದಿನ ಆಚರಣೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಭಾರತೀಯ ಜನತಾ ಪಾರ್ಟಿ ಮತ್ತು ಪಕ್ಷದ ಸದಸ್ಯರ ವಿರುದ್ಧ ವಾಗ್ದಾಳಿ ನಡೆಸಿದರು.[ಯಡಿಯೂರಪ್ಪ ಐಟಿ ಇಲಾಖೆಯ ಏಜೆಂಟರೇ? ಸಿಎಂ ಪ್ರಶ್ನೆ]
ಯಡಿಯೂರಪ್ಪ ಕೆಜೆಪಿ ಪಕ್ಷ ಕಟ್ಟಿದಾಗ ಟಿಪ್ಪು ಧರಿಸುವಂತಹ ಟೋಪಿ ಧರಿಸಿ ಸಂಭ್ರಮಿಸಿ ಹಾಡಿ ಹೊಗಳಿದ ಬಿಜೆಪಿಯವರು, ನಾವು ಟಿಪ್ಪು ಜಯಂತಿ ಮಾಡಲು ಮುಂದಾದರೆ ಭಾರೀ ವಿರೋಧವನ್ನು ವ್ಯಕ್ತಪಡಿಸಿದರು. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಟಿಪ್ಪು ಪುಸ್ತಕಕ್ಕೆ ಮುನ್ನುಡಿ ಬರೆಯುತ್ತಾರೆ ಆದರೆ ಟಿಪ್ಪು ಜಯಂತಿಯನ್ನು ಮಾತ್ರ ವಿರೋಧಿಸುತ್ತಾರೆ. ಇವರೆಲ್ಲಾ ಢೋಂಗಿಗಳು ಇವರ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ದೇಶದ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಲೇವಡಿ ಮಾಡಿದರು.
ಪ್ರಧಾನಿ ಮೋದಿ ವಿರುದ್ಧ ಸುಳ್ಳು ಆಶ್ವಾಸನೆ ನೀಡುವ ನಾಯಕ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದು, ಪ್ರಧಾನಿಗಳು ಅಧಿಕಾರಕ್ಕೆ ಬಂದ ಮೇಲೆ ವಿದೇಶದಲ್ಲಿದ್ದ ಕಪ್ಪು ಹಣವನ್ನು ತಂದು ಪ್ರತಿಯೊಬ್ಬರ ಅಕೌಂಟಿಗೆ 15 ಲಕ್ಷ ಜಮೆ ಮಾಡುತ್ತೇನೆ ಎಂದಿದ್ದರು. ಆದರೆ 15 ರುಪಾಯಿಯನ್ನೂ ಹಾಕದೆ ಜನರಿಗೆ ವಂಚಿಸಿದ್ದಾರೆ ಎಂದು ಆರೋಪಿಸಿದರು.[ರಾಹುಲ್ ಗಾಂಧಿ ಮನೆಯಲ್ಲೇ ಭೂಕಂಪ ಆಗುತ್ತೆ: ಬಿಎಸ್ ವೈ]
ಇನ್ನು ಸಂಸ್ಥಾಪನಾ ದಿನಾಚರಣೆಯಲ್ಲಿ ಸಚಿವ ಜಾರ್ಜ್, ಆಂಜನೇಯ ಸೇರಿದಂತೆ ಅನೇಕ ಕಾಂಗ್ರೆಸ್ ಪಕ್ಷದ ಗಣ್ಯರು ಹಾಜರಿದ್ದರು.