CM & DCM ರಾಜೀನಾಮೆಗೆ ಆಗ್ರಹಿಸಿ ಬೆಂಗಳೂರಲ್ಲಿ ನಾಳೆ ಬೃಹತ್ ಪ್ರತಿಭಟನೆ... Bengaluru Bandh
ಬೆಂಗಳೂರು, ಜೂನ್ 16: ಬೆಂಗಳೂರಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜೂನ್ 4ರಂದು ನಡೆದ ಕಾಲ್ತುಳಿತದಲ್ಲಿ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ಮಂಗಳವಾರ ಬೆಂಗಳೂರಿನಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸುಮಾರು 10,000 ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಮುಖಂಡರು ತಿಳಿಸಿದ್ದಾರೆ. ಹಾಗಾದರೆ ಆರ್ಸಿಬಿ ಕಾಲ್ತುಳಿತ ಕಾರಣಕ್ಕೆ ಬೆಂಗಳೂರು ಬಂದ್ ಆಗುತ್ತಾ? ಎಂಬ ಮಾಹಿತಿ ಮುಂದೆ ಇದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಗೋಪಾಲಯ್ಯ ಅವರು, ಬೆಂಗಳೂರಿನ ವಿಧಾನಸೌಧ, ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ನಡೆದ ಕಾರ್ಯಕ್ರಮ ವಿಜಯೋತ್ಸವ ವೇಳೆ ಎಲ್ಲರನ್ನು ಆಹ್ವಾನಿಸಿದ್ದು ಈ ದುರ್ಘಟನೆಗೆ ಕಾರಣವಾಗಿದೆ. ಇದರ ವಿರುದ್ಧ ಸರ್ಕಾರದ ಧೋರಣೆ ನಿರ್ಲಕ್ಷ್ಯ ಖಂಡಿಸಿ ಬೆಳಗ್ಗೆ 10.30 ಗಂಟೆಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.

ಇವರಿಬ್ಬರನ್ನು ಏಕೆ ಬಂಧಿಸಿಲ್ಲ?
ಆರ್ಸಿಬಿ ತಂಡದವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ. ಡಿಪಿಎಆರ್ ಕಾರ್ಯದರ್ಶಿಗಳು ಫ್ಯಾನ್ಸ್ ಆಹ್ವಾನಿಸಿದ್ದರು. ಇದೇ ವಿಚಾರವಾಗಿ ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಹ ಸಂಭ್ರಮಾಚರಣೆಗೆ ಆಹ್ವಾನಿಸಿದ್ದರು. ಸ್ಟೇಡಿಯಂ ಬಳಿ ಕಾಲ್ತುಳಿತ ಉಂಟಾಗಿ 11 ಮಂದಿ ಜೀವ ಹಾನಿ ಆಯಿತು. ಇದಕ್ಕೆ ಸರ್ಕಾರದ ನಿರ್ಲಕ್ಷ್ಯ, ಪೂರ್ವ ತಯಾರಿ ಇಲ್ಲದೇ ಮಾಡಿಕೊಂಡ ತರಾತುರಿ ಕಾರ್ಯಕ್ರಮ ಹೀಗಾಗಿ ಜನರಿಗೆ ಶಿಕ್ಷೆ ನೀಡಿದಂತಾಯಿತು. ಹಾಗಾದರೆ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಡಿಪಿಎಆರ್ ಕಾರ್ಯದರ್ಶಿಗಳನ್ನು ಏಕೆ ಬಂಧಿಸಿಲ್ಲ? ಎಂದು ಪ್ರಶ್ನಿಸಿದರು.
ಸಿಎಂ ಮತ್ತು ಡಿಸಿಎಂ ರಾಜೀನಾಮೆ ಕೊಡಬೇಕು
ಬಿಜೆಪಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಉಭಯ ಸದನಗಳ ಸದಸ್ಯರು, ಜಿಲ್ಲಾಧ್ಯಕ್ಷರು, ಕಾರ್ಯಕರ್ತರು ಸೇರಿದಂತೆ ಒಟ್ಟು 10 ಸಾವಿರ ಮಂದಿ ಭಾಗಿಯಾಗಲಿದ್ದಾರೆ. ಸರ್ಕಾರದ ಈ ನಡೆಯಿಂದ ದುರಂತ ಸಂಭವಿಸಿದೆ. ಪೊಲೀಸ್ ಇಲಾಖೆ ಪತ್ರ ಬರೆದರು ಆ ಬಗ್ಗೆ ತಲೆಕೆಡಿಸಿಕೊಳ್ಳದೇ ಕೈಗೊಂಡ ತರಾತುರಿ ನಿರ್ಧಾರಗಳಿಂದ ಬಡ ಜೀವಗಳು ಬಲಿಯಾಗಿವೆ. ಇದರ ಹೊಣೆ ಹೊತ್ತು ಕೂಡಲೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ರಾಜೀನಾಮೆ ನೀಡಬೇಕು ಎಂದು ಹೇಳಿದರು.
ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ತನ್ನ ಈ ದುರ್ಘಟನೆಯಲ್ಲಿ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಪೊಲೀಸ್ ಇಲಾಖೆ ಅಧಿಕಾರಿಗಳನ್ನು ಅಮಾನತು ಮಾಡಿಕೊಂಡಿದೆ. ಬೆಂಗಳೂರಿನ ಘಟನೆ, ಸರ್ಕಾರ ನಡೆದುಕೊಂಡು ರೀತಿ ಪೊಲೀಸ್ ಅಮಾನತು ಇದೊಂದು ರಾಜ್ಯದಲ್ಲಿ ಕಪ್ಪು ಚುಕ್ಕೆಯಾಗಿದೆ ಎಂದು ಅವರು ದೂರಿದರು.
ಬೆಂಗಳೂರು ಬಂದ್ ಆಗುತ್ತಾ?
ಈ ಸಂಬಂಧ ಪ್ರತಿಭಟನೆಗೆ ಬಿಜೆಪಿಗೆ ವ್ಯಾಪಕ ಬೆಂಬಲ ದೊರೆಯುವ ಸಾಧ್ಯತೆ ಇದೆ. 11 ಮಂದಿ ಆರ್ಸಿಬಿ ಫ್ಯಾನ್ಸ್ಗಳ ಸಾವಿಗೆ ಸರ್ಕಾರ ಹೊಣೆ ಎಂದು ಬಹುತೇಕ ದೂರಿದ್ದಾರೆ. ಹೀಗಾಗಿ ಈ ಪ್ರತಿಭಟನೆಗೆ ಬೆಂಬಲ ಹೆಚ್ಚಾಗಬಹುದು. ಒಂದು ದಿನದ ಮಟ್ಟಿಗೆ ಬೆಂಗಳೂರನ್ನು ಬಂದ್ ಮಾಡಿ ಸರ್ಕಾರಕ್ಕೆ ಉತ್ತರ ಕಲಿಸಬೇಕು ಎಂಬ ಸಾರ್ವಜನಿಕ ಒತ್ತಡವು ಹೆಚ್ಚಾಗಿದೆ.












Click it and Unblock the Notifications