MLA Satish Reddy: ಬಿಜೆಪಿ ಶಾಸಕ ಸತೀಶ್ ರೆಡ್ಡಿ ಹತ್ಯೆಗೆ 2 ಕೋಟಿಯ ಸುಪಾರಿ, ಇಬ್ಬರು ಆರೋಪಿಗಳ ಬಂಧನ
ಸುಪಾರಿ ಪಡೆದು ಶಾಸಕ ಸತೀಶ್ ರೆಡ್ಡಿ ಅವರ ಚಲನವಲನದ ಮೇಲೆ ನಿಗಾ ಇಡುತ್ತಿದ್ದ ವೇಳೆಯೇ ವಿಷಯ ಬಹಿರಂಗಗೊಂಡಿದ್ದು, ದುರಂತ ಘಟನೆ ನಡೆಯುವುದು ತಪ್ಪಿದೆ.
ಬೆಂಗಳೂರು, ಫೆಬ್ರವರಿ. 15: ಬಿಜೆಪಿ ಶಾಸಕ ಸತೀಶ್ ರೆಡ್ಡಿ ಹತ್ಯೆಗೆ ಎರಡು ಕೋಟಿ ರೂಪಾಯಿಗೆ ಸುಪಾರಿ ನೀಡಿದ್ದ ಆರೋಪದ ಮೇಲೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಹತ್ಯೆಗೆ ರೌಡಿಗಳ ತಂಡ ಸಂಚು ರೂಪಿಸಿದ್ದ ವಿಷಯ ಬಹಿರಂಗಗೊಂಡಿದ್ದು, ವಿಲ್ಸನ್ ಗಾರ್ಡನ್ ನಾಗನ ತಂಡ ಶಾಸಕನ ಹತ್ಯೆಗೆ 2 ಕೋಟಿಗೆ ಸುಪಾರಿ ಪಡೆದಿದ್ದರು ಎಂದು ತಿಳಿದು ಬಂದಿದೆ.
ಬಿಜೆಪಿ ಶಾಸಕ ಮತ್ತು ವಿಧಾನಸಭೆ ಆಡಳಿತ ಪಕ್ಷದ ಮುಖ್ಯ ಸಚೇತಕ ಸತೀಶ್ ರೆಡ್ಡಿ ಅವರನ್ನು ಹತ್ಯೆ ಮಾಡಲು 2 ಕೋಟಿ ರೂಪಾಯಿ ಸುಪಾರಿ ನೀಡಿದ್ದ ಇಬ್ಬರು ಆರೋಪಿಗಳನ್ನು ಬೊಮ್ಮನಹಳ್ಳಿ ಪೊಲೀಸರು ಹೊಳಲ್ಕೆರೆಯಲ್ಲಿ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಆಕಾಶ್, ಗಗನ್ ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಸುಪಾರಿ ಪಡೆದಿದ್ದ ಪ್ರಮುಖ ಆರೋಪಿ ವಿಲ್ಸನ್ ಗಾರ್ಡನ್ ನಾಗನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಸುಪಾರಿ ಪಡೆದು ಶಾಸಕ ಸತೀಶ್ ರೆಡ್ಡಿ ಅವರ ಚಲನವಲನದ ಮೇಲೆ ನಿಗಾ ಇಡುತ್ತಿದ್ದ ವೇಳೆಯೇ ವಿಷಯ ಬಹಿರಂಗಗೊಂಡಿದ್ದು, ದುರಂತ ಘಟನೆ ನಡೆಯುವುದು ತಪ್ಪಿದೆ.
ಶಾಸಕ ಸತೀಶ್ ರೆಡ್ಡಿ ಆಪ್ತ ಸಹಾಯಕ ಹರೀಶ್ ಬಾಬು ಅವರಿಗೆ ಫೆಬ್ರವರಿ 11 ರಂದು ಬೊಮ್ಮನಹಳ್ಳಿ ನಿವಾಸಿ ಚಂದ್ರು ಎಂಬುವವರು ಕರೆ ಮಾಡಿ ಕೊಲೆಗೆ ಸಂಚು ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ವಿಲ್ಸನ್ ಗಾರ್ಡನ್ ನಾಗನ ತಂಡದಲ್ಲಿದ್ದ ಚಿತ್ರದುರ್ಗದ ಮೂಲದ ಆಕಾಶ್ ಎಂಬುವವರು ಕೊಲೆಯ ಸುಳಿವು ಬಿಟ್ಟು ಕೊಟ್ಟಿದ್ದಾನೆ. ಇದಾದ ಬಳಿಕ ಸತೀಶ್ ರೆಡ್ಡಿ ಬೆಂಬಲಿಗರಾಗಿದ್ದ ಚಂದ್ರು, ಹರೀಶ್ ಬಾಬುಗೆ ವಿಷಯ ಮುಟ್ಟಿಸಿದ್ದಾರೆ. ಎಚ್ಚೆತ್ತ ಶಾಸಕರು ಬೊಮ್ಮನಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ತನಿಖೆ ಆರಂಭವಾಗಿತ್ತು.
ತಲೆ ಮರೆಸಿಕೊಂಡಿರುವ ವಿಲ್ಸನ್ ಗಾರ್ಡನ್ ನಾಗನ ಪತ್ತೆಗೆ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ.












Click it and Unblock the Notifications