ಕಾಂಗ್ರೆಸ್ ಹಾಕಿದ 'ಲಕ್ಷ್ಮಣ್' ರೇಖೆಗೆ ಸಿ ಟಿ ರವಿ ಕಾನೂನಿನ ಉತ್ತರ
ಬೆಂಗಳೂರು, ಏಪ್ರಿಲ್ 20: 'ಸುಳ್ಳು ನಮ್ಮಲ್ ಇಲ್ಲವಯ್ಯ, ಸುಳ್ಳೇ ನಮ್ಮನೆ ದೇವರು. ಪುರಂದರ ದಾಸರು ಈ ಮಾತನ್ನು ಹೇಳಿರುವುದು ಕಾಂಗ್ರೆಸ್ ಮುಖಂಡರನ್ನು ನೋಡಿಯೇ ಇರಬೇಕು. ಸುಳ್ಳೇ ಅವರ ಮನೆಯ ದೇವರಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಟೀಕಿಸಿದ್ದಾರೆ.
ನಾನು 500 ಎಕರೆ ಜಮೀನು ಹೊಂದಿರುವ ಬಗ್ಗೆ ನೀವು ಮಾಡಿರುವ ಆರೋಪಕ್ಕೆ ಕಾನೂನೇ ಉತ್ತರ ಕೊಡುತ್ತದೆ. ಕಾನೂನಿನ ಆ ಕಬಂಧ ಬಾಹುಗಳಿಂದ ನೀವು ಮತ್ತು ನಿಮ್ಮ ಜೀ ಹುಜೂರ್ (ಗ್ರಾಮ ಪಂಚಾಯಿತಿ ಗೆಲ್ಲದ) ನಾಯಕರು ತಪ್ಪಿಸಿಕೊಳ್ಳಲಾರಿರಿ ಎಂದು ಎಚ್ಚರಿಕೆ ನೀಡಿದರು.
ನನ್ನ ಸಾರ್ವಜನಿಕ ಜೀವನದಲ್ಲಿ ಇಂತಹ ಆರೋಪಗಳು ಎದುರಾಗಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ನಿಮ್ಮಂತ ಕೆಲವು ಪ್ರಚಾರ ಪ್ರಿಯರು ಮಾಧ್ಯಮಗಳ ಮುಂದೆ ಬಂದು ಠುಸ್ ಪಟಾಕಿ ಹಾರಿಸಿ ಹೋಗಿದ್ದಾರೆ. ʼಬರಿಗೈʼ ತೋರಿಸಿ ಮಾಧ್ಯಮಗಳ ಮುಂದೆ ಪ್ರಚಾರ ಗಿಟ್ಟಿಸಿಕೊಳ್ಳಲು ತಾವು ಮಾಡಿರುವ ಆರೋಪಕ್ಕೆ ಕಾನೂನು ಮೂಲಕವೇ ಉತ್ತರ ಕೊಡಲು ಸಿದ್ಧನಾಗಿದ್ದೇನೆ. ತಾವು ಮಾಡಿದ ಸುಳ್ಳು ಆರೋಪಕ್ಕೆ ಸಾರ್ವಜನಿಕವಾಗಿ ಕ್ಷಮೆಯಾಚಿಸದಿದ್ದರೆ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಚಿಕ್ಕಮಗಳೂರಿನ ಬಿಜೆಪಿ ಶಾಸಕ ಸಿ ಟಿ ರವಿ ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್ ವಕ್ತಾರನಿಗೆ ಸಿಟಿ ರವಿ ಸವಾಲು
"ಬಂಡಲ್ ಬಡಾಯಿ ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ನನ್ನ ಮೇಲೆ 500 ಎಕರೆ ಅಕ್ರಮ ಜಮೀನು ಹೊಂದಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಅವರ ಬಳಿ ಇರುವ 500 ಎಕರೆ ಸಿ.ಟಿ.ರವಿಗೆ ಸೇರಿದ ಭೂಮಿಯ ದಾಖಲೆಗಳನ್ನು ತಂದು ಕೊಟ್ಟರೆ, ತಂದು ಕೊಟ್ಟ ಪುಣ್ಯಾತ್ಮನಿಗೆ ಅರ್ಧ ದಾನವಾಗಿ ಕೊಟ್ಟು ಬಿಡುತ್ತೇನೆ," ಎಂದು ಮಾಧ್ಯಮ ಪ್ರಕಟಣೆ ಮೂಲಕ ಸಿಟಿ ರವಿ ಸವಾಲೆಸೆದಿದ್ದಾರೆ.

ಕಾಂಗ್ರೆಸ್ ನೈತಿಕತೆ ಬಗ್ಗೆ ಸಿಟಿ ರವಿ ಪ್ರಶ್ನೆ
ಎಂ.ಲಕ್ಷ್ಮಣ ಎಂಬ ಮಹಾನ್ ಸುಳ್ಳುಗಾರ ಮಾಧ್ಯಮಗಳ ಮುಂದೆ ಕುಳಿತರೆ ಸಾಕು ಸಾಕ್ಷಾತ್ ಸತ್ಯ ಹರಿಶ್ಚಂದ್ರನಂತೆ ಮಾತನಾಡುತ್ತಾರೆ. ತಮ್ಮದೇ ಪಕ್ಷದ ನಾಯಕರ ಬೇನಾಮಿ ಆಸ್ತಿ ಬಗ್ಗೆ ಹೇಳುವ ಬದಲು ತಪ್ಪಾಗಿ ಲಕ್ಷ್ಮಣ ನನ್ನ ಹೆಸರು ಹೇಳಿದಂತಿದೆ. ನಿಮ್ಮ ಪಕ್ಷದ ನಾಯಕರು ಹೊಲದಲ್ಲಿ ಗುದ್ದಲಿ, ಪಿಕಾಸಿ ಹಿಡಿದು ಕೂಲಿ ನಾಲಿ ಮಾಡಿ ಕೋಟಿ ಗಟ್ಟಲೆ ಆಸ್ತಿ ಸಂಪಾದಿಸಿದ್ದಾರೆಯೇ? ಹಾಗಾದರೆ ಅಕ್ರಮ ಆಸ್ತಿ ಮಾಡಿ ಜೈಲಿಗೆ ಹೋಗಿ ಬಂದವರು ನಿಮ್ಮ ಪಕ್ಷದಲ್ಲೇ ಇರುವಾಗ ನನ್ನ ಮೇಲೆ ಅಕ್ರಮ ಆಸ್ತಿ ಆರೋಪ ಮಾಡುತ್ತಿದ್ದೀರಲ್ಲ ನಿಮಗೇನಾದರೂ ನೈತಿಕತೆ ಇದೆಯೇ? ಎಂದು ಪ್ರಶ್ನಿಸಿದ್ದಾರೆ.

ಕಾನೂನು ಮೂಲಕ ಉತ್ತರ ನೀಡುವುದಾಗಿ ಹೇಳಿದ ರವಿ
ಆಧಾರ ರಹಿತವಾಗಿ ದಾಖಲೆಗಳಿಲ್ಲದೇ ಮಾಧ್ಯಮಗಳ ಮುಂದೆ ಸುಳ್ಳನ್ನು ಬಿತ್ತಿ ಸುಳ್ಳನ್ನು ಬೆಳೆಯುವ ನಿಮ್ಮ ಹಿಟ್ ಅಂಡ್ ರನ್ ಫಾಲ್ಸ್ ಲಕ್ಷ್ಮಣ ಅವರೇ ನಿಮ್ಮಲ್ಲಿ ದಾಖಲೆಗಳಿದ್ದರೆ ನೇರವಾಗಿ ಕಾನೂನು ಮೂಲಕವೇ ಹೋರಾಟ ನಡೆಸಿ. ಅದು ಬಿಟ್ಟು ಪ್ರಚಾರಕ್ಕಾಗಿ ಮಾಧ್ಯಮಗಳ ಮುಂದೆ ಬಂದು ಮಾತಾಡುವ ತಾವು ದೊಡ್ಡವರ ಬಗ್ಗೆ ಮಾತನಾಡಿದರೆ ತಾವು ದೊಡ್ಡ ರಾಜಕೀಯ ವ್ಯಕ್ತಿಯಾಗುತ್ತೇನೆ ಎಂಬ ಭ್ರಮೆಯಿಂದ ತಾವು ಮಾಡಿರುವ ಆರೋಪಕ್ಕೆ ಕಾನೂನಿನ ಮೂಲಕವೇ ಶೀಘ್ರದಲ್ಲೇ ಉತ್ತರಿಸುವೆ ಎಂದು ಎಚ್ಚರಿಸಿದ್ದಾರೆ.

ಬೇಕಿದ್ದರೆ ಅಫಿಡವಿಟ್ ನೋಡಿಕೊಳ್ಳಿರಿ ಎಂದ ಸಿ ಟಿ ರವಿ
ನನ್ನ ಸಾರ್ವಜನಿಕ ಜೀವನದಲ್ಲಿ 4 ಬಾರಿ ಚುನಾವಣೆಗೆ ನಿಂತು ಗೆದ್ದು ಶಾಸಕನಾಗಿದ್ದೇನೆ, ಮಂತ್ರಿಯಾಗಿದ್ದೇನೆ. ಚುನಾವಣೆಗೆ ನಿಂತಾಗ ಚುನಾವಣಾಧಿಕಾರಿಗಳಿಗೆ ನನ್ನ ಆಸ್ತಿಯ ಕುರಿತು ಅಫಿಡವಿಟ್ ಸಲ್ಲಿಸಿದ್ದೇನೆ. 2004ರಲ್ಲಿ ಸಲ್ಲಿಸಿದ ಅಫಡವಿಟ್, 2021ರಲ್ಲಿ ಸಲ್ಲಿಸಿದ ಅಫಿಡವಿಟ್ ನಡುವೆ ವ್ಯತ್ಯಾಸವನ್ನು ನೋಡಿ. ನಿಮ್ಮ ಪಕ್ಷದ ಮುಖಂಡರ ಆಸ್ತಿ ವ್ಯತ್ಯಾಸವನ್ನು ಗಮನಿಸಿ ಆಗ ಕಳ್ಳರು ಯಾರು ಎನ್ನುವುದು ನಿಮಗೆ ಅರ್ಥವಾಗುತ್ತದೆ.
ನಾನು ಯಾವುದೇ ಅಸ್ವಾಭಾವಿಕವಾಗಿ ಆಸ್ತಿಯನ್ನು ಸಂಪಾದಿಸಿಲ್ಲ. ನನ್ನ ಮೇಲೆ ಒಂದಿಬ್ಬರು ಲೋಕಾಯುಕ್ತಕ್ಕೂ ದೂರು ಸಲ್ಲಿಸಿದ್ದಾರೆ. ದೂರನ್ನು ಸಲ್ಲಿಸಿ ಮುಖಭಂಗಕ್ಕೆ ಒಳಗಾಗಿದ್ದಾರೆ. ನೀವೊಬ್ಬರು ಬಾಕಿ ಇದ್ದೀರಿ. ಈ ಹಿಂದೆ ಪ್ರತಿಬಾರಿ ಆಪಾದನೆಗಳು ಬಂದಾಗಲೂ ನಾನು ದೃತಿಗೆಟ್ಟಿಲ್ಲ. ಕಾನೂನು ಪ್ರಕಾರವೇ ಉತ್ತರ ಕೊಟ್ಟಿದ್ದೇನೆ. ನಾನು ಪಾರದರ್ಶಕವಾಗಿದ್ದೇನೆ. ಕೂಲಂಕಷವಾಗಿ ಪರಿಶೀಲನೆಗೂ ಸಿದ್ದರಿದ್ದೇನೆ. ನಿಮ್ಮ ಬಳಿ ನನ್ನ 500 ಎಕರೆ ಜಮೀನಿನ ದಾಖಲೆಗಳಿದ್ದರೆ ಅದನ್ನು ನನಗೆ ಕೊಟ್ಟು ನೀವು ಅರ್ಧ ಜಮೀನನ್ನು ನನ್ನಿಂದಲೇ ಬಳುವಳಿಯಾಗಿ ಪಡೆಯಿರಿ. ʼಸತ್ಯ ಹೊಸ್ತಿಲು ದಾಟುವಷ್ಟರಲ್ಲೇ ನಿಮ್ಮಂತ ಸುಳ್ಳುಗಾರರಿಂದ ಸುಳ್ಳು ಊರೆಲ್ಲ ಸುತ್ತಿ ಬಂತಂತೆ,ʼ ಎಂದು ಸಿ. ಟಿ ರವಿ ತಿಳಿಸಿದ್ದಾರೆ.












Click it and Unblock the Notifications