ಬೆಂಬಲಕ್ಕೆ ನಿಂತು ಸೋತವರನ್ನು ಕೆರಳಿಸಿತಾ ಬಿಎಸ್ ವೈ ಆಡಿದ 'ಆ' ಮಾತು?
ಬೆಂಗಳೂರು, ಜನವರಿ.24: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಯಾವಾಗ ಎಂದು ಶಾಸಕರೆಲ್ಲ ಎದುರು ನೋಡುತ್ತಿದ್ದಾರೆ. ದಾವೋಸ್ ಪ್ರವಾಸ ಮುಗಿಸಿ ಬೆಂಗಳೂರಿಗೆ ಆಗಮಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉಪ ಚುನಾವಣೆಯಲ್ಲಿ ಸೋತ ಬಿಜೆಪಿ ಅಭ್ಯರ್ಥಿಗಳ ಎದೆ ಧಸ್ ಎನಿಸುವಂತಾ ಮಾತನ್ನು ಆಡಿದ್ದಾರೆ.
ಉಪ ಚುನಾವಣೆಯಲ್ಲಿ ಸೋತಿದ್ದರೂ ಸರಿ. ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ ತಮಗೆ ಒಂದೊಳ್ಳೆ ಹುದ್ದೆ ಸಿಗುತ್ತದೆ ಎಂದು ನಾಯಕರು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಶುಕ್ರವಾರ ಬೆಂಗಳೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಸೋತ ಅಭ್ಯರ್ಥಿಗಳಿಗೆ ಯಾವುದೇ ಸಚಿವ ಸ್ಥಾನ ನೀಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.
ನಮ್ಮನ್ನು ಬಿಟ್ಟು ಅದು ಹೇಗೆ ತಾನೇ ಸಚಿವ ಸಂಪುಟ ವಿಸ್ತರಣೆ ಮಾಡುತ್ತಾರೆ ಎಂದು ಹುಣಸೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹೆಚ್.ವಿಶ್ವನಾಥ್ ಪ್ರಶ್ನೆ ಮಾಡಿದ್ದಾರೆ. ಶನಿವಾರವೇ ಮುಖ್ಯಮಂತ್ರಿಯರನ್ನು ಈ ಸಂಬಂಧ ಭೇಟಿ ಮಾಡಿ ಚರ್ಚೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

ಸಿಎಂ ನಿವಾಸಕ್ಕೆ ನಾಯಕರ ಪರೇಡ್ ಮತ್ತೆ ಶುರು?
ರಾಜ್ಯದಲ್ಲಿ ವಿಧಾನಸಭಾ ಉಪ ಚುನಾವಣೆ ಫಲಿತಾಂಶ ಹೊರ ಬೀಳುತ್ತಿದ್ದಂತೆ ಸಚಿವ ಸಂಪುಟ ವಿಸ್ತರಣೆ ಕಸರತ್ತು ಜೋರಾಗಿತ್ತು. ದಿನೇ ದಿನೆ ಸಿಎಂ ನಿವಾಸಕ್ಕೆ ಶಾಸಕರ ಪರೇಡ್ ನಡೆದಿದ್ದು, ಮೂಲ ಬಿಜೆಪಿಗರೂ ಕೂಡಾ ತಮಗೆ ಸಚಿವ ಸ್ಥಾನ ನೀಡುವಂತೆ ದುಂಬಾಲು ಬೀಳುತ್ತಿದ್ದರು. ಇದೆಲ್ಲದರ ನಡುವೆ ಹೈಕಮಾಂಡ್ ಸೂಚನೆಗೆ ಕಾಯುತ್ತಿದ್ದ ಯಡಿಯೂರಪ್ಪ ಇದೀಗ ಮತ್ತೊಮ್ಮೆ ಕೇಂದ್ರ ನಾಯಕರ ಜೊತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಇದರ ಮಧ್ಯೆ ಸೋತವರಿಗೆ ಸಚಿವ ಸ್ಥಾನ ಇಲ್ಲ ಎಂಬ ಹೇಳಿಕೆಯು ಇಬ್ಬರು ಮಾಜಿ ಶಾಸಕರ ನಿದ್ದೆಗೆಡಿಸಿದೆ. ಹೊಸಕೋಟೆ ಮಾಜಿ ಶಾಸಕ ಎಂಟಿಬಿ ನಾಗರಾಜ್, ಹುಣಸೂರು ಮಾಜಿ ಶಾಸಕ ಹೆಚ್.ವಿಶ್ವನಾಥ್ ಕಂಗಾಲಾಗಿದ್ದಾರೆ. ಶನಿವಾರವೇ ಸಿಎಂ ನಿವಾಸಕ್ಕೆ ತೆರಳಿ ಚರ್ಚೆ ನಡೆಸುವುದಾಗಿ ಹೆಚ್.ವಿಶ್ವನಾಥ್ ಹೇಳಿದ್ದಾರೆ.












Click it and Unblock the Notifications