ನಿಗದಿತ ವೇಳೆ ಉಪ ಚುನಾವಣೆ ನಡೆದರೆ ಬಿಜೆಪಿಗರೇ ಅಭ್ಯರ್ಥಿಗಳು: ಲಿಂಬಾವಳಿ
ಬೆಂಗಳೂರು, ಸೆಪ್ಟೆಂಬರ್ 26: ನಿಗದಿತ ಸಮಯದಲ್ಲಿ ಉಪ ಚುನಾವಣೆ ನಡೆದರೆ ಬಿಜೆಪಿಗರೇ ಅಭ್ಯರ್ಥಿಗಳಾಗಲಿದ್ದಾರೆ ಎಂದು ಮಾಜಿ ಸಚಿವ ಅರವಿಂದ್ ಲಿಂಬಾವಳಿ ಹೇಳಿದ್ದಾರೆ.
ಉಪ ಚುನಾವಣೆ ಸನ್ನಿಹಿತವಾಗಿದೆ, ಅನರ್ಹ ಶಾಸಕರಿಗೆ ಟಿಕೆಟ್ ಕೊಡುವುದಾ ಅಥವಾ ಮೂಲ ಬಿಜೆಪಿಗರಿಗೆ ಟಿಕೆಟ್ ನೀಡುವುದಾ ಎನ್ನುವ ಗೊಂದಲದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇದ್ದಾರೆ. ಈಗಾಗಲೇ ಭಿನ್ನಮತ ಉದ್ಭವವಾಗಿದೆ.
ಅನರ್ಹ ಶಾಸಕರಿಗೆ ಉಪ ಚುನಾವಣೆಯ ಟಿಕೆಟ್ ನೀಡುವ ವಿಚಾರವಾಗಿ ಪಕ್ಷದೊಳಗೆ ವಿರೋಧ ಎದ್ದಿದೆ. ಈ ಹಿನ್ನೆಲೆಯಲ್ಲಿ ಬಂಡಾಯ ಶಮನಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ತುರ್ತು ಕೋರ್ ಕಮಿಟಿ ಸಭೆ ಕರೆದ್ದರು.
ಉಪಚುನಾವಣೆ ಸಂಬಂಧ ಇಂದು ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಪಕ್ಷದಲ್ಲಿ ನಾಯಕರು ಕೋರ್ ಕಮಿಟಿ ಸಭೆ ನಡೆಸಿದರು. ಸಭೆ ಬಳಿಕ ಮಾತನಾಡಿದ ಅರವಿಂದ್ ಲಿಂಬಾವಳಿ, ಸಭೆಯಲ್ಲಿ ಉಪಚುನಾವಣೆ ಬಗ್ಗೆ ಚರ್ಚೆ ಆಗಿದೆ. ಉಪಚುನಾವಣೆ ಸಂಬಂಧ ನಮ್ಮ ಪಕ್ಷದಿಂದ ಸಂಘಟನೆಯಿಂದ ತಯಾರಿ ನಡೆದಿದೆ. ಅನರ್ಹರ ವಿಚಾರ ಇನ್ನು ಸುಪ್ರೀಂಕೋರ್ಟ್ ನಲ್ಲಿದೆ.
ಈಗಾಗಲೇ ಕೋರ್ಟಿನಲ್ಲಿ ಉಪ ಚುನಾವಣೆ ಮುಂದೂಡಲು ಮನವಿ ಮಾಡಿದ್ದಾರೆ. ಹಾಗಾಗಿ ನಾವು ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ಮಾಡಿಲ್ಲ. ಒಂದು ವೇಳೆ ನಿಗದಿತ ಸಮಯದಲ್ಲಿ ಚುನಾವಣೆ ಬಂದರೆ ನಮ್ಮ ಪಕ್ಷದ ಅಭ್ಯರ್ಥಿಗಳು ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದ್ದಾರೆ. ಅದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.

ಉಪ ಚುನಾವಣೆ ಮುಂದೂಡುವಂತೆ ಮನವಿ
ಉಪಚುನಾವಣೆ ಮುಂದೂಡುವಂತೆ ಅನರ್ಹ ಶಾಸಕರ ಮನವಿ ಉಪಚುನಾವಣೆಯನ್ನು ಮುಂದೂಡುವಂತೆ ಅನರ್ಹರ ಶಾಸಕರ ವಕೀಲರು ವಾದ ಮಾಡಿದ್ದಾರೆ. ಹೀಗಾಗಿ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಚರ್ಚೆ ಮಾಡಿಲ್ಲ. ಚುನಾವಣೆ ನಡೆಯುವ ಬಗ್ಗೆಯೇ ಇಂದಿನ ಸಭೆಯಲ್ಲಿ ಸಂಶಯ ಬಂದಿದೆ. ಆ ಹಿನ್ನೆಲೆ ಉಪಚುನಾವಣೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಪಕ್ಷ ಅಂತಿಮ ನಿರ್ಧಾರಕ್ಕೆ ಕೈಗೊಂಡಿಲ್ಲ ಎಂದು ತಿಳಿಸಿದರು.

ನಿಗದಿತ ಅವಧಿಯಲ್ಲಿ ಚುನಾವಣೆ ನಡೆದರೆ ಬಿಜೆಪಿಗರೇ ಅಭ್ಯರ್ಥಿಗಳು
ಒಂದು ವೇಳೆ ನಿಗದಿಯಾದ ದಿನಾಂಕದಂತೆ ಚುನಾವಣೆ ನಡೆದರೆ ನಮ್ಮ ಪಕ್ಷದ ಅಭ್ಯರ್ಥಿಗಳು ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದಾರೆ. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಉಪಚುನಾವಣೆ ಟಿಕೆಟ್ ಗಾಗಿ ಮೂಲ ಬಿಜೆಪಿಗರ ಬಂಡಾಯ ಏಳುತ್ತಿದ್ದು, ಇತ್ತ ಅನರ್ಹ ಶಾಸಕರನ್ನು ಬಿಟ್ಟುಕೊಡುವ ಸ್ಥಿತಿಯಲ್ಲಿ ಪಕ್ಷ ಇಲ್ಲ. ಈ ಹಿನ್ನೆಲೆ ಬಿಜೆಪಿ ನಾಯಕರ ಮನವೊಲಿಕೆ ಜೊತೆ ಉಪಚುನಾವಣೆ ಸಿದ್ಧತೆ ಕುರಿತು ಕ್ಷೇತ್ರಗಳ ಮುಖಂಡರ ಜೊತೆ ಸಿಎಂ ಸಭೆ ನಡೆಸಲು ಮುಂದಾಗಿದ್ದಾರೆ.

ಸೆಪ್ಟೆಂಬರ್ 27ರಂದು ಯಡಿಯೂರಪ್ಪ ಸಭೆ
ಸೆಪ್ಟೆಂಬರ್ 27 ಮಹಾಲಕ್ಷ್ಮಿ ಲೇಔಟ್,ಕೆ.ಆರ್ ಪುರಂ, ಹೊಸಕೋಟೆ, ಯಶವಂತಪುರ, ಶಿವಾಜಿನಗರ, ಚಿಕ್ಕಬಳ್ಳಾಪುರ, ಹುಣಸೂರು, ಕೆಆರ್ ಪೇಟೆ ಕ್ಷೇತ್ರಗಳ ಮುಖಂಡರೊಂದಿಗೆ ಬಿಎಸ್ವೈ ಸಭೆ ನಡೆಸಲಿದ್ದಾರೆ.

ಮೂಲ ಬಿಜೆಪಿಗರ ಅತೃಪ್ತಿ ಶಮನಕ್ಕೆ ತಂಡ ರಚನೆ
ಉಪ ಚುನಾವಣೆ ಸನ್ನಿಹಿತವಾಗುತ್ತಿದ್ದು, ಎಲ್ಲಾ ಪಕ್ಷಗಳಂತೆಯೇ ಬಿಜೆಪಿಯೂ ಕೂಡ ಟಿಕೆಟ್ ಹಂಚಿಕೆ ಮಾಡುತ್ತಿದೆ. ಆದರೆ ಈ ಟಿಕೆಟ್ ಹಂಚಿಕೆಯಿಂದ ಮೂಲ ಬಿಜೆಪಿಗರು ಅಸಮಾಧಾನ ಪಟ್ಟುಕೊಳ್ಳುವ ಸಾಧ್ಯತೆ ಇದ್ದು ಈ ಅತೃಪ್ತಿ ಶಮನಕ್ಕಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಂಡ ರಚನೆ ಮಾಡಿದ್ದಾರೆ. ಬಿಜೆಪಿ ಅಸ್ತಿತ್ವಕ್ಕೆ ಬರಲು ಅನರ್ಹಗೊಂಡಿರುವ ಶಾಸಕರ ಪಾತ್ರ ಮಹತ್ವವಾಗಿದೆ. ಕಾರಣ ಅವರಿಗೆ ಟಿಕೆಟ್ ನೀಡಲು ತೀರ್ಮಾನಿಸಲಾಗಿದೆ. ಆದರೆ ಇದು ಬಿಜೆಪಿಯಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಬೆಂಗಳೂರು ಹಾಗೂ ಸುತ್ತಮುತ್ತಲಿನ ಕ್ಷೇತ್ರಗಳಿಗೆ ಮಾತ್ರ ತಂಡ ರಚನೆ ಮಾಡಲಾಗಿದೆ. ಪ್ರಮುಖ ಸಚಿವರು ಮತ್ತು ಸಂಸದರಿಗೆ ಈ ಜವಾಬ್ದಾರಿಯನ್ನು ನೀಡಲಾಗಿದೆ.












Click it and Unblock the Notifications