ನ.29 ಬಿಜೆಪಿ ಶಾಸಕಾಂಗ ಸಭೆ, ಅಧಿವೇಶನದೊಳಗೆ ಹೋರಾಟದ ಬಗ್ಗೆ ಚರ್ಚೆ
ಬೆಂಗಳೂರು, ನವೆಂಬರ್ 24: ರಾಜ್ಯ ಸರ್ಕಾರದ ವಿರುದ್ಧ ಸಮರ ಸಾರಿರುವ ಬಿಜೆಪಿಯು ಸರ್ಕಾರದ ವಿರುದ್ಧ ಹೋರಾಟದ ನೀಲನಕ್ಷೆ ತಯಾರಿಸಲು ಪಕ್ಷದ ಶಾಸಕಾಂಗ ಸಭೆ ಕರೆದಿದೆ.
ಬಿಜೆಪಿಯ ಎಲ್ಲ ಶಾಸಕರು ನವೆಂಬರ್ 29 ರಂದು ನಗರದಲ್ಲಿ ನಡೆಯಲಿರುವ ಪಕ್ಷದ ಶಾಸಕಾಂಗ ಸಭೆಯಲ್ಲಿ ಭಾಗವಹಿಸಬೇಕೆಂದು ಆದೇಶ ನೀಡಲಾಗಿದೆ. ಸಭೆಯು ಯಡಿಯೂರಪ್ಪ ನೇತೃತ್ವದಲ್ಲಿ ನಡೆಯಲಿದೆ.
ಬೆಳಗಾವಿ ಅಧಿವೇಶನವು ಡಿಸೆಂಬರ್ 10 ರಿಂದ ಆರಂಭವಾಗುತ್ತಿದ್ದು, ಅಧಿವೇಶನದಲ್ಲಿ ವಿರೋಧ ಪಕ್ಷವಾದ ಬಿಜೆಪಿಯ ಹೋರಾಟ ಹೇಗೆ ಇರಬೇಕು ಎಂಬುದರ ಬಗ್ಗೆ ಅಂದು ನಿರ್ಧಾರ ಮಾಡಲಾಗುತ್ತದೆ.

ಪಕ್ಷದ ಹಿರಿಯ ಶಾಸಕರಿಗೆ ಅಧಿವೇಶನದ ಸಂದರ್ಭ ನಿಭಾಯಿಸಬೇಕಾದ, ಎತ್ತಬೇಕಾದ ಚರ್ಚೆಗಳ ಜವಾಬ್ದಾರಿಯನ್ನು ಸಭೆಯಲ್ಲಿಯೇ ವಹಿಸಲಾಗುವುದು ಎನ್ನಲಾಗಿದೆ. ಅಲ್ಲದೆ, ಅಧಿವೇಶನದಲ್ಲಿ ಯಾವ ಯಾವ ವಿಷಯಗಳ ಬಗ್ಗೆ ವಿರೋಧ ಪಕ್ಷವು ದನಿ ಎತ್ತಬೇಕು ಎಂಬ ಬಗ್ಗೆಯೂ ಚರ್ಚೆ ನಡೆಯಲಿದೆ.
ಎಲ್ಲ ಶಾಸಕರು ತಮ್ಮ ಕ್ಷೇತ್ರದ ಸಮಸ್ಯೆಗಳ ಪಟ್ಟಿಯನ್ನೂ ಶಾಸಕಾಂಗ ಸಭೆಗೆ ತರಬೇಕು ಎಂದು ಸೂಚಿಸಲಾಗಿದ್ದು, ಅದರ ಕುರಿತೂ ಅಧಿವೇಶನದಲ್ಲಿ ಚರ್ಚಿಸುವ ಬಗ್ಗೆ ಪೂರ್ವ ತಯಾರಿ ನಡೆಸಲಾಗುತ್ತಿದೆ.
ಬಿಜೆಪಿಯ ಮುಂದಿನ ನಡೆಯ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ. ಅಲ್ಲದೆ ಲೋಕಸಭೆ ಚುನಾವಣೆ ತಯಾರಿ ಬಗ್ಗೆಯೂ ಸಂಕ್ಷಿಪ್ತ ಚರ್ಚೆ ನಡೆಯಲಿದೆ. ಸಭೆಯು ನವೆಂಬರ್ 29 ರಂದು ಮಧ್ಯಾಹ್ನ 2 ಕ್ಕೆ ಆರಂಭವಾಗುತ್ತಿದ್ದು, ದೀರ್ಘವಾಗಿ ಸಭೆ ನಡೆಯಲಿದೆ.












Click it and Unblock the Notifications