ಸರ್ಕಾರ ನಡೆಸಲು ಆಗದಿದ್ದರೆ ರಾಜೀನಾಮೆ ನೀಡಿ: ಬಿಎಸ್ವೈ ಆಗ್ರಹ
ಬೆಂಗಳೂರು, ಜೂನ್ 22: ಮೈತ್ರಿ ಪಕ್ಷಗಳಿಗೆ ಸರ್ಕಾರ ನಡೆಸಲು ಆಗದೆ ಇದ್ದರೆ ರಾಜೀನಾಮೆ ಕೊಟ್ಟು ತೊಲಗಲಿ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್, ಯಡಿಯೂರಪ್ಪ ಆಗ್ರಹಿಸಿದರು.
ನಿಮ್ಮಿಂದ ಸರ್ಕಾರ ನಡೆಸಲು ಆಗದೆ ಇದ್ದರೆ ನಾನು ಸರ್ಕಾರ ರಚಿಸಲು ಸಿದ್ಧನಿದ್ದೇನೆ. ನಾವು 105 ಶಾಸಕರನ್ನು ಹೊಂದಿದ್ದೇವೆ. ಕಾಂಗ್ರೆಸ್ ಮತ್ತು ಜೆಡಿಎಸ್ನಲ್ಲಿ 20ಕ್ಕೂ ಅಧಿಕ ಅತೃಪ್ತ ಶಾಸಕರಿದ್ದಾರೆ. ರಾಜಕೀಯದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು ಎಂದರು.
ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ನನ್ನ ಪ್ರಕಾರ ಸಮ್ಮಿಶ್ರ ಸರ್ಕಾರ ಹೆಚ್ಚು ದಿನ ಇರುವುದಿಲ್ಲ. ಒಂದು ಕಡೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯಕ್ಕೆ ಹೋಗುತ್ತಾರೆ. ಇನ್ನೊಂದೆಡೆ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಮಧ್ಯಂತರ ಚುನಾವಣೆಯ ಕುರಿತು ಮಾತನಾಡುತ್ತಾರೆ ಎಂದು ಟೀಕಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಟೀಕಿಸಿದ ಅವರು, ಕುಮಾರಸ್ವಾಮಿ ಸುಳ್ಳು ಭರವಸೆ ಕೊಟ್ಟು ಒಂದು ದಿನ ವಾಸ್ತವ್ಯ ಮಾಡಿ ವಾಪಸ್ ಬಂದಿದ್ದಾರೆ. ಮಳೆ ಬಂತು ಎಂಬ ಕುಂಟು ನೆಪ ಹೇಳಿ ಗ್ರಾಮ ವಾಸ್ತವ್ಯ ಮೊಟಕುಗೊಳಿಸಿದ್ದಾರೆ ಎಂದು ವ್ಯಂಗ್ಯವಾಡಿದರು.
ಸಾಧ್ಯವಾದಷ್ಟು ಬೇಗ ಈ ಸರ್ಕಾರದಿಂದ ರಾಜ್ಯವನ್ನು ಮುಕ್ತಿಗೊಳಿಸುವುದು ನಮ್ಮ ಉದ್ದೇಶ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಪಿ. ಮುರಳೀಧರ ರಾವ್ ಹೇಳಿದರು.
105 ಸ್ಥಾನಗಳಲ್ಲಿ ಗೆದ್ದಿರುವ ನಾವು ರಾಜ್ಯದಲ್ಲಿ ಅಧಿಕಾರ ಸ್ಥಾಪನೆ ಮಾಡುವುದು ನಮ್ಮ ಕರ್ತವ್ಯ ಕೂಡ. ಎಷ್ಟು ಬೇಗ ಈ ಸರ್ಕಾರದಿಂದ ರಾಜ್ಯವನ್ನು ಮುಕ್ತಗೊಳಿಸುತ್ತೇವೆಯೋ ಅಷ್ಟು ಬೆಗ ರಾಜ್ಯದ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂದರು.












Click it and Unblock the Notifications