ಟಿಕೆಟ್ ಬೇಡಿಕೆ ಬೆನ್ನಲ್ಲೇ ತುಮಕೂರು ಬಿಜೆಪಿ ಉಪಾಧ್ಯಕ್ಷರಾಗಿ ಸಚಿವ ವಿ ಸೋಮಣ್ಣ ಪುತ್ರ ನೇಮಕ
ಬೆಂಗಳೂರು, ಮಾರ್ಚ್. 29: ರಾಜ್ಯ ವಸತಿ ಸಚಿವ ವಿ ಸೋಮಣ್ಣ ಅವರು ಗೃಹ ಸಚಿವ ಅಮಿತ್ ಶಾ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿದ ಕೆಲವೇ ದಿನಗಳಲ್ಲಿ ಸೋಮಣ್ಣ ಅವರ ಪುತ್ರ ಅರುಣ್ ಅವರನ್ನು ತುಮಕೂರು ಬಿಜೆಪಿ ಘಟಕದ ಉಪಾಧ್ಯಕ್ಷರನ್ನಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇಮಕ ಮಾಡಿ ಆದೇಶಿಸಿದ್ದಾರೆ.
ಸಚಿವ ವಿ ಸೋಮಣ್ಣ ಅವರು ಚುನಾವಣೆಗೂ ಮುನ್ನ ತನ್ನದೆ ಪಕ್ಷದ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವರೊಂದಿಗೆ ಎರಡು ಸುತ್ತಿನ ಸಭೆ ನಡೆಸಿದ್ದಾರೆ. ಅಮಿತ್ ಶಾ ಕೂಡ ಸೋಮಣ್ಣ ಅವರನ್ನು ದೆಹಲಿಗೆ ಕರೆಸಿ ಸಮಾಧಾನ ಪಡಿಸಿದ್ದರು. ದೆಹಲಿಯಿಂದ ವಾಪಸಾದ ಬಳಿಕ ವಿ ಸೋಮಣ್ಣ ಪಕ್ಷದಲ್ಲೇ ಮುಂದುವರಿಯುವುದಾಗಿ ಘೋಷಿಸಿದ್ದರು.

ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಊಹಾಪೋಹಗಳ ನಡುವೆಯೇ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸೋಮಣ್ಣ ತನಗೆ ಹಾಗೂ ಪುತ್ರ ಅರುಣ್ಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದರು. ಮಗನಿಗೆ ಟಿಕೆಟ್ ನೀಡುವ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಪಕ್ಷದಲ್ಲಿ ವಿ ಸೋಮಣ್ಣ ಅವರಿಗೆ ಪ್ರಾಮುಖ್ಯತೆ ನೀಡಲು ಅರುಣ್ ಅವರನ್ನು ಉಪಾಧ್ಯಕ್ಷನಾಗಿ ನೇಮಿಸಲಾಗಿದೆ.
ಕಳೆದ ಕೆಲ ದಿನಗಳಿಂದ ಬಿಜೆಪಿ ಹಿರಿಯ, ಕಿರಿಯ ನಾಯಕರನ್ನು ತನ್ನತ್ತ ಸೆಳೆಯಲು ಕಾಂಗ್ರೆಸ್ ಭಾರೀ ಕಸರತ್ತು ನಡೆಸುತ್ತಿದೆ. ಕಾಂಗ್ರೆಸ್ ಆಪರೇಷನ್ ಹಸ್ತದ ಮೂಲಕ ಈಗಾಗಲೇ ಹಲವರನ್ನು ತನ್ನ ತೆಕ್ಕೆಗೆ ಸೆಳೆದು ಕೊಂಡಿದೆ. ಇತ್ತ, ಬಿಜೆಪಿ ಬಗ್ಗೆ ವಿ. ಸೋಮಣ್ಣ ಸಾಕಷ್ಟು ಮನಸ್ತಾಪಗಳನ್ನು ಹೊರಹಾಕಿದ್ದರು. ಇದು ಸಚಿವರಾದ ಅಶೋಕ್ ಮತ್ತು ವಿ.ಸೋಮಣ್ಣ ಮಧ್ಯೆ ಗೊಂದಲ ಸೃಷ್ಟಿಯಾದ ಹಿನ್ನೆಲೆ ಬೆಂಗಳೂರು ನಗರದ ನಾಗರಬಾವಿ ಬಳಿ ಬಿಜೆಪಿ ವಿಜಯಸಂಕಲ್ಪ ರಥಯಾತ್ರೆ ಅರ್ಧಕ್ಕೆ ನಿಂತಿದ್ದು ಭಾರೀ ವದಂತಿಗು ಸಾಕ್ಷಿಯಾಗಿತ್ತು.
ಸದ್ಯ ಸಚಿವ ಸೋಮಣ್ಣ ತಾವು ಬಿಜೆಪಿಯಲ್ಲೇ ಮುಮದುವರೆಯುವುದಾಗಿ ಘೋಷಿಸಿದ್ದಾರೆ. ಹೀಗಾಗಿ ಮಗನನ್ನು ತುಮಕೂರು ಬಿಜೆಪಿ ಘಟಕದ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಅರುಣ್ ಬೆಂಗಳೂರಿನ ಗೋವಿಂದರಾಜನಗರ ಮತ್ತು ತುಮಕೂರಿನ ಗುಬ್ಬಿ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಸೋಮಣ್ಣ ಅವರು ಚಾಮರಾಜನಗರ ವಿಧಾನಸಭಾ ಕ್ಷೇತ್ರವೊಂದರಲ್ಲಿ ತಮಗೇ ಟಿಕೆಟ್ ನೀಡುವಂತೆ ಕೋರಿದ್ದರು ಎನ್ನಲಾಗಿದೆ.

ಈಗ ಉಪಾಧ್ಯಕ್ಷರನ್ನಾಗಿ ನೇಮಿಸಿರುವುದು ಗುಬ್ಬಿ ವಿಧಾನಸಭಾ ಕ್ಷೇತ್ರದಿಂದ ಅರುಣ್ಗೆ ಟಿಕೆಟ್ ಕೊಡುವ ಮೊದಲ ಹೆಜ್ಜೆಯೋ ಅಥವಾ ಟಿಕೆಟ್ ಬದಲು ಉಪಾಧ್ಯಕ್ಷ ಸ್ಥಾನ ಸಾಂತ್ವನವೋ ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಇನ್ನೇನು ಕೆಲವೇ ದಿನಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದ್ದು, ಬಿಜೆಪಿಯ ಕಾರ್ಯತಂತ್ರಗಳ ಬಗ್ಗೆ ತಿಳಿಯಲಿದೆ. ಟಿಕೆಟ್ ಘೋಷಣೆ ಬಳಿಕ ಪಕ್ಷದಲ್ಲಿ ಮತ್ತಷ್ಟು ಅಸಮಾಧಾನ ಹೊಗೆಯಾಡಲಿದೆ.
2018 ರ ವಿಧಾನಸಭಾ ಚುನಾವಣೆಯಲ್ಲಿ ವರುಣಾದಿಂದ ಕೊನೆಯ ಕ್ಷಣದಲ್ಲಿ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಆ ಸಂದರ್ಭದಲ್ಲಿಯೂ ಬಿವೈ ವಿಜಯೇಂದ್ರ ಅವರನ್ನು ಪಕ್ಷದ ಉಪಾಧ್ಯಕ್ಷರಾಗಿ ಮಾಡುವ ಮೊದಲು ಅವರನ್ನು ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿತ್ತು.
ಪಕ್ಷದ ಕಾರ್ಯಕ್ರಮವೊಂದರಲ್ಲಿ ಅಸಹಕಾರ ತೋರಿದ ಆರೋಪದ ಮೇಲೆ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ವಿಜಯೇಂದ್ರ ಅವರ ಹೆಸರನ್ನು ಹೇಳದೆ ಅವರ ವಿರುದ್ಧ ಅರುಣ್ ಆಕ್ರೋಶ ವ್ಯಕ್ತಪಡಿಸಿದ್ದರು. ಇನ್ನು, ಪಕ್ಷದ ನಾಯಕರ ಒಂದು ವಿಭಾಗವು ಅರುಣ್ ಅವರ ನೇಮಕದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಏಪ್ರಿಲ್ ಮೊದಲ ವಾರದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ತಿಳಿಸಿದ್ದಾರೆ. ಇಂದಿನಿಂದ ನೀತಿ ಸಂಹಿತೆ ಜಾರಿಯಾಗಿರುವ ಕಾರಣ ಎಲ್ಲಾ ಕಾರ್ಯಕ್ರಮಗಳನ್ನು ಮೊಟಕುಗೊಳಿಸಲಾಗಿದೆ.












Click it and Unblock the Notifications