ಹ್ಯಾಕರ್ ಶ್ರೀಕಿ ವಿದೇಶಿ ಪ್ರಯಾಣ ನಿರ್ಬಂಧ, ಇಡಿ ಆದೇಶ ಪ್ರಶ್ನಿಸಿ ಅರ್ಜಿ ಕೇಂದ್ರ ಸರ್ಕಾರಕ್ಕೆ ನೋಟಿಸ್
ಬೆಂಗಳೂರು ಫೆ 1: ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ್ದ ಬಿಟ್ ಕಾಯಿನ್ ಹಗರಣದ ರೂವಾರಿ ಎನ್ನಲಾದ ಹ್ಯಾಕರ್ ಶ್ರೀ ಕೃಷ್ಣ ಅಲಿಯಾಸ್ ಶ್ರೀಕಿಗೆ ವಿದೇಶ ಪ್ರಯಾಣ ನಿರ್ಬಂಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಸಂಬಂಧ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಶ್ರೀಕಿ ಸಹೋದರ ಸುದರ್ಶನ ರಮೇಶ್ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ. ದೀಕ್ಷಿತ್ ಅವರಿದ್ದ ಏಕಸದಸ್ಯಪೀಠ ವಿಚಾರಣೆ ನಡೆಸಿತು. ಬಳಿಕ ಪ್ರತಿವಾದಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಜಾರಿ ನಿರ್ದೇಶನಾಲಯ ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು. ಮುಂದಿನ ವಿಚಾರಣೆ ಫೆ.3ರಂದು ನಡೆಯಲಿದೆ.
ದಕ್ಷಿಣ ನೆದರ್ಲ್ಯಾಂಡ್ನ ಇಂಡೊವೆನ್ ನಗರದಲ್ಲಿ ಶ್ರೀಕಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಡಚ್ ನಿವಾಸಿಯಾಗಿರುವ ಆತನಿಗೆ ಆರು ತಿಂಗಳಿಗಿಂತಲೂ ಹೆಚ್ಚು ಕಾಲ ನೆದರ್ಲ್ಯಾಂಡ್ನಿಂದ ಹೊರಗಿರಲು ಸಾಧ್ಯವಿಲ್ಲ ಎಂದು ಅರ್ಜಿದಾರರ ಪರ ವಕೀಲರು ಹೇಳಿದರು.

ಶ್ರೀಕಿ ಕಳೆದ ವರ್ಷ 2021ರ ಆ.12ರಂದು ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿರುವ ತನ್ನ ತಂದೆಯನ್ನು ನೋಡಲು ಬೆಂಗಳೂರಿಗೆ ಬಂದಿದ್ದರು. ಇದೇ 13 ರಂದು ನೆದರ್ಲ್ಯಾಂಡ್ಗೆ ವಾಪಸು ತೆರಳಬೇಕಿತ್ತು. ಆದರೆ, ವಿದೇಶ ಪ್ರಯಾಣ ಕೈಗೊಳ್ಳದಂತೆ ಶ್ರೀಕಿಗೆ ಜಾರಿ ನಿರ್ದೇಶನಾಲಯ ಹಿಂಬರಹ ನೀಡಿದೆ. ಹಾಗಾಗಿ ವಿಮಾನ ನಿಲ್ದಾಣ ಅಧಿಕಾರಿಗಳು ಪ್ರಯಾಣಕ್ಕೆ ಅವಕಾಶ ನೀಡದೆ ತಡೆದಿದ್ದಾರೆ. ಇದು ಶ್ರೀಕಿಯ ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
ಶ್ರೀಕಿ ವಿಚಾರಣೆಗೆ ಎಲ್ಲ ರೀತಿಯಲ್ಲೂ ಸಹಕರಿಸಿದ್ದಾರೆ, 2021ರ ಡಿಸೆಂಬರ್ 29, 30 ಹಾಗೂ 2022ರ ಜ.1ರಂದೂ ಸಹ ಇಡಿ ಮುಂದೆ ಹಾಜರಾಗಿ ಎಲ್ಲ ಮಾಹಿತಿ ನೀಡಿದ್ದಾರೆ. ಯಾವುದೇ ನೋಟಿಸ್ ನೀಡದ ಕೊನೆ ಕ್ಷಣದಲ್ಲಿ ವಿದೇಶಿ ಪ್ರಯಾಣಕ್ಕೆ ನಿರ್ಬಂಧ ವಿಧಿಸಿರುವುದು ಕಾನೂನು ಬಾಹಿರ ಕ್ರಮವಾಗಿದೆ . ಹಾಗಾಗಿ ಆತನಿಗೆ ವಿದೇಶಕ್ಕೆ ಪ್ರಯಾಣಿಸಲು ಅನುಮತಿ ನೀಡುವಂತೆ ಇಡಿಗೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.












Click it and Unblock the Notifications