Cow Incident: ಹಸುಗಳ ಕೆಚ್ಚಲು ಕತ್ತರಿಸಿದ್ದ ಆರೋಪಿ ಬಂಧನ
ಬೆಂಗಳೂರು, ಜನವರಿ 13: ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ರಾತ್ರಿ ವಿಕೃತ ಘಟನೆ ನಡೆದಿತ್ತು. ಮೂರು ಹಸುಗಳ ಕೆಚ್ಚಲು ಕತ್ತರಿಸಿದ್ದ ಘಟನೆ ವರದಿ ಆಗಿತ್ತು. ಕೇವಲ 48 ಗಂಟೆಗಳಲ್ಲಿ ಕಾಟನ್ಪೇಟೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇದರಲ್ಲಿ ಬೇರೆ ಯಾರದ್ದು ಪಾತ್ರ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣ ರಾಜ್ಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿ ನಾಯಕರು, ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ಶನಿವಾರ ರಾತ್ರಿ ಮೂರು ಹಸುಗಳ ಮೇಲೆ ಹಲ್ಲೆ ನಡೆದಿತ್ತು. ಕೆಚ್ಚಲು ಕತ್ತರಿಸಿ ವಿಕೃತಿ ಮೆರೆಯಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿ ಬಿಹಾರ ಮೂಲಕ 30 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿ ಹೆಸರು ಶೇಖ್ ನಸ್ರು. ಈತ ಕುಡಿದ ಅಮಲಿನಲ್ಲಿ ಈ ರೀತಿ ಕೃತ್ಯ ಎಸಗಿದ್ದಾರೆ. ಮತ್ತಿನಲ್ಲಿ ಮೂರು ಹಸುಗಳ ಕೆಚ್ಚಲು ಕತ್ತರಿಸಿದ್ದಾನೆ. ಅವುಗಳಿಗೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಆರ್.ಅಶೋಕ್ ಇತರ ನಾಯಕರು, ಹಿಂದೂಪರ ಕಾರ್ಯಕರ್ತರು ಆಗಮಿಸಿ ಭೇಟಿ ನೀಡಿದ್ದರು.
ಸದ್ಯ ಆರೋಪಿಯನ್ನು ಬಂಧಿಸಲಾಗಿದೆ. ಆತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಈ ಅಪರಾಧದಲ್ಲಿ ಬೇರೆ ಯಾರೂ ಭಾಗಿಯಾಗಿಲ್ಲ. ಪಶುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಜೀವಕ್ಕೆ ಅಪಾಯ ಇಲ್ಲ ಎಂದು ಉಪ ಪೊಲೀಸ್ ಆಯುಕ್ತ (ಪಶ್ಚಿಮ) ಎಸ್ ಗಿರೀಶ್ ಮಾಹಿತಿ ನೀಡಿದ್ದಾರೆ.
ಹಸುಗಳ ಸ್ಥಿತಿ ಪತ್ತೆ ಆಗಿದ್ದು ಹೇಗೆ?
ಶನಿವಾರ ರಾತ್ರಿ ಘಟನೆ ನಡೆದಿದೆ. ಭಾನುವಾರ ಬೆಳಗಿನ ಜಾವ 4.30ಕ್ಕೆ ವಿನಾಯಕ ನಗರದ ಓಲ್ಡ್ ಪೆನ್ಷನ್ ಮೊಹಲ್ಲಾದಲ್ಲಿ ಈ ಹಸುಗಳು ರಕ್ತಸ್ರಾವದಿಂದ ಒದ್ದಾಡುತ್ತಿದ್ದವು. ಪಾದಾಚಾರಿಗಳು ಹಸುಗಳ ಸ್ಥಿತಿ ನೋಡಿ ಹಸುಗಳ ಆರೈಕೆ ಮಾಡುವ ಹೈನುಗಾರ ಕರ್ಣ ಅವರಿಗೆ ತಿಳಿಸಿದ್ದಾರೆ. ಬೆಳಗಾಗುವಷ್ಟರಲ್ಲಿ ಕೃತ್ಯದ ಸುದ್ದಿ ಎಲ್ಲೆಡೆ ಹಬ್ಬಿತ್ತು.
ಸರ್ಕಾರದ ಕಾಯ್ದೆ ಪ್ರಕಾರ, ಪ್ರಾಣಿಯನ್ನು ಕೊಲ್ಲುವ ಅಥವಾ ಅಂಗವಿಕಲಗೊಳಿಸುವ ದುಷ್ಕೃತ್ಯ (ಬಿಎನ್ಎಸ್ ಸೆಕ್ಷನ್ 325) ಅಡಿ ಕಾಟನ್ಪೇಟೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ದೃಷ್ಕೃತ್ಯ ನಡೆಸಿದ ದುರುಳರನ್ನು ಶಿಕ್ಷಿಸಬೇಕು. ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಕರಾಳ ಸಂಕ್ರಾಂತಿ ಆಚರಿಸಲಾಗುವುದು ಎಂದು ಆರ್.ಅಶೋಕ್ ತಿಳಿಸಿದ್ದರು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೃತ್ಯ ಖಂಡಿಸಿದ್ದರು. ಶ್ರೀರಾಮ ಸೇನೆ ಮುಖ್ಯಸ್ಥ ಮುತಾಲಿಕ್ ಅವರು ಖಂಡಿಸಿದರು.
ಸದ್ಯ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುವುದರಲ್ಲಿತ್ತು. ಅಷ್ಟರಲ್ಲಿ ಕೇಳಿ ಬಂದ ಒತ್ತಾಯದ ಮೇರೆಗೆ ಸಿಎಂ ಸಿದ್ದರಾಮಯ್ಯ ಅವರು ತನಿಖೆಗೆ ಆದೇಶಿಸಿದರು. ಅದರ ಬೆನ್ನಲ್ಲೆ ಆರೋಪಿಯ ಬಂಧನವಾಗಿದೆ.












Click it and Unblock the Notifications