ಸರ್ಕಾರ-ಬಿಐಎ ಗುದ್ದಾಟ, ಪ್ರಯಾಣಿಕರಿಗೆ ಹೊರೆ
ಬೆಂಗಳೂರು, ಅ.12: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರನ್ನು ಇಡಲು ಒಪ್ಪಿಗೆ ಸಿಕ್ಕ ಖುಷಿ ಬೆನ್ನಲ್ಲೇ ವಿಮಾನ ನಿಲ್ದಾಣದಲ್ಲಿ ಕನ್ನಡ ಫಲಕ ಬರೆಸುತ್ತೇನೆ ಎಂದಿದ್ದ 'ಮುಖ್ಯಮಂತ್ರಿ' ಚಂದ್ರು ಅಧಿಕಾರದಿಂದ ನಿರ್ಗಮನ ಸುದ್ದಿ ಬಂದಿದೆ. ಇದರ ಜತೆಗೆ ಪ್ರಯಾಣಿಕರಿಗೆ ಕಹಿ ಸುದ್ದಿಯೊಂದು ಬಂದಿದೆ.
ಸರ್ಕಾರ ಹಾಗೂ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್(BIAL) ಸಂಸ್ಥೆ ನಡುವಿನ ಕಿತ್ತಾಟ ಸರಿ ಹೋಗದಿದ್ದರೆ ಪ್ರಯಾಣಿಕರ ಮೇಲೆ ಮತ್ತಷ್ಟು ಹೊರೆ ಬೀಳುವ ಸಾಧ್ಯತೆ ಹೆಚ್ಚಿದೆ. ಬಿಐಎಎಲ್ ಅಭಿವೃದ್ಧಿ ಕಾಮಗಾರಿಗೆ ಸರ್ಕಾರ ತನ್ನ ಬೊಕ್ಕಸದಿಂದ ನೀಡುವ ಮೊತ್ತವನ್ನು ಹೆಚ್ಚಿಸಲು ನಿರಾಕರಿಸಿದೆ. ಹೀಗಾಗಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ವಿಸ್ತರಣೆ ಕಾರ್ಯಕ್ಕೆ ಹೊಡೆತ ಬೀಳಲಿದೆ.
ಬಿಐಎಎಲ್ ಗೆ ನೀಡಿರುವ ಭೂ ಪ್ರದೇಶಕ್ಕಿಂತ ಹೆಚ್ಚಿನ ಜಾಗವನ್ನು ಸಂಸ್ಥೆ ಆಕ್ರಮಿಸಿದೆ ಈಗ ವಿಸ್ತರಣೆ ಯೋಜನೆ ಇನ್ನಷ್ಟು ಪಾಲು ಕೇಳುವುದು ಎಷ್ಟರಮಟ್ಟಿಗೆ ಸರಿ ಎಂದು ಸರ್ಕಾರದ ಆರ್ಥಿಕ ಇಲಾಖೆ ಮೂಲಗಳು ಹೇಳಿದೆ.

ಬಿಐಎಎಲ್ ಷೇರುದಾರರು 150 ಕೋಟಿ ರು.ಗೂ ಅಧಿಕ ಮೊತ್ತವನ್ನು ಸರ್ಕಾರದಿಂದ ನಿರೀಕ್ಷಿಸಿದ್ದಾರೆ. ಬಿಐಎಎಲ್ ನಲ್ಲಿ ರಾಜ್ಯ ಸರ್ಕಾರ ಶೇ 13 ರಷ್ಟು ಪಾಲು ಹೊಂದಿದೆ. ಹೊಸ ಟರ್ಮಿನಲ್ ಹಾಗೂ ವಿಮಾನ ನಿಲ್ದಾಣದ ಎರಡನೇ ಹಂತರ ವಿಸ್ತರಣೆ ಯೋಜನೆಗಾಗಿ 4000 ಎಕರೆ ಭೂಮಿ ಮಂಜೂರಾಗಿದ್ದು ಸರ್ಕಾರ ಇದಕ್ಕಾಗಿ 350 ಕೋಟಿ ರು ನೀಡಿದೆ.
ಸರ್ಕಾರದಿಂದ ಪಡೆದ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿ ವಿಮಾನ ನಿಲ್ದಾಣ ನಿರ್ವಹಣೆಗೆ ಬೇಕಾದ ಅಗತ್ಯ ನಿಧಿಯನ್ನು ಸಂಗ್ರಹಿಸುವ ಜವಾಬ್ದಾರಿ ಬಿಐಎಎಲ್ ಸಂಸ್ಥೆಯದ್ದಾಗಿರುತ್ತದೆ. ಆದರೆ, ಇದರಲ್ಲಿ ವಿಫಲವಾದ ಬಿಐಎಎಲ್ ಗೆ ಸರ್ಕಾರವೇ ಒಂದು ಸಲಹೆ ನೀಡಿದೆ.
ಹೊರ ಹೋಗುವ ಪ್ರಯಾಣಿಕರಿಂದ ಬಳಕೆದಾರರ ಅಭಿವೃದ್ಧಿ ಶುಲ್ಕ ಹೆಸರಿನಲ್ಲಿ ಹೆಚ್ಚುವರಿ ಮೊತ್ತ ಸಂಗ್ರಹಿಸುವಂತೆ ಬಿಐಎಎಲ್ ಗೆ ಸರ್ಕಾರ ಸಲಹೆ ನೀಡಿದೆ. ಅದರಂತೆ 231.40 ರು ನೀಡುತ್ತಿದ್ದ ದೇಸಿ ಪ್ರಯಾಣಿಕರು ಇನ್ಮುಂದೆ 430 ರು ನೀಡಬೇಕಾಗುತ್ತದೆ. ವಿದೇಶಕ್ಕೆ ಹೋಗುವ ಪ್ರಯಾಣಿಕರು 952.30 ರು ನೀಡುತ್ತಿದ್ದವರು ಇನ್ಮುಂದೆ 1700 ರು ನೀಡಬೇಕಾಗುತ್ತದೆ.
ಸರ್ಕಾರದ ಸಲಹೆ ಮೇರೆಗೆ ಬೆಲೆ ಏರಿಕೆಗೆ ಮುಂದಾಗಿರುವ ಬಿಐಎಎಲ್ ಪ್ರಸ್ತಾಪಕ್ಕೆ ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ ಒಪ್ಪಿಗೆ ಸೂಚಿಸಬೇಕಿದೆ. ಒಮ್ಮೆ ಪ್ರಾಧಿಕಾರದ ಸೂಚನೆ ಸಿಕ್ಕರೆ ಹೈದರಾಬಾದಿನ ರಾಜೀವ್ ಗಾಂಧಿ ವಿಮಾನ ನಿಲ್ದಾಣವನ್ನು ಹಿಂದಿಕ್ಕಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅತ್ಯಂತ ದುಬಾರಿ ವಿಮಾನ ನಿಲ್ದಾಣ ಎನಿಸಲಿದೆ.












Click it and Unblock the Notifications