ಮಾರ್ಚ್ 5ರಂದು 'ಭಾರತ ಭಾಗ್ಯ ವಿಧಾತ' ಸಮಾರೋಪ
ಬೆಂಗಳೂರು, ಮಾರ್ಚ್ 4: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಭಾರತ ಭಾಗ್ಯ ವಿಧಾತ ಸಮಾರೋಪ ಸಮಾರಂಭವನ್ನು ಮಾರ್ಚ್ 5ರಂದು ಸಂಜೆ 6.30ಕ್ಕೆ ಬೆಂಗಳೂರಿನಲ್ಲಿ ಬಸವೇಶ್ವರ ನಗರದ ರಾಜಾಜಿನಗರ ಇಂಡಸ್ಟ್ರಿಯಲ್ ಟೌನ್ನ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದೆ.
ಫೆಬ್ರವರಿ 1ರಂದು ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಆರಂಭಗೊಂಡ ಕಾರ್ಯಕ್ರಮವು ಒಂದು ತಿಂಗಳಕಾಲ ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿ ಯಶಸ್ವಿ ಪ್ರದರ್ಶನ ಕಂಡು, ಜನ ಮನ್ನಣೆ ಗಳಿಸಿದೆ. ಜನರ ಒತ್ತಾಯದ ಮೇರೆಗೆ ಸಮಾರೋಪಕ್ಕೂ ಮುನ್ನ ಮಾರ್ಚ್ 4 ರಂದು ಸಹ ಬೆಂಗಳೂರಿನಲ್ಲಿ ವಿಶೇಷ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ,
ಒಟ್ಟು ಎರಡು ದಿನಗಳ ಕಾಲ ಒಂದೇ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಶ್ರೀ ಎನ್.ಆರ್. ವಿಶುಕುಮಾರ್ ತಿಳಿಸಿದ್ದಾರೆ. ಮಾರ್ಚ್ 5ರಂದು ಸಂಜೆ 6.30ಕ್ಕೆ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಫಾಟಿಸಲಿದ್ದಾರೆ.

ಸಚಿವರಾದ ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ಎಚ್.ಆಂಜನೇಯ, ಆರ್. ರೋಷನ್ ಬೇಗ್, ಉಮಾಶ್ರೀ, ಕೃಷ್ಣ ಭೈರೇಗೌಡ, ಎಂ. ಕೃಷ್ಣಪ್ಪ, ಬೆಂಗಳೂರು ಮೇಯರ್ ಜಿ.ಪದ್ಮಾವತಿ, ಸಂಸದ ಪಿ.ಸಿ. ಮೋಹನ್, ಶಾಸಕ ಪ್ರಿಯಾ ಕೃಷ್ಣ, ಬಿಬಿಎಂಪಿ ಸದಸ್ಯರಾದ ರೂಪಾ ಆರ್ ಹಾಗೂ ಉಮಾವತಿ ಪದ್ಮರಾಜ್ ಪಾಲ್ಗೊಳ್ಳಲಿದ್ದಾರೆ.
ಡಾ.ಬಿ.ಆರ್.ಅಂಬೇಡ್ಕರ್ 125ನೇ ಜನ್ಮದಿನಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಮ್ಮಿಕೊಂಡಿರುವ ಅಂಬೇಡ್ಕರ್ ಅವರ ಜೀವನ ಸಾಧನೆಗಳನ್ನು ಬಿಂಬಿಸುವ ಧ್ವನಿ-ಬೆಳಕು ಕಾರ್ಯಕ್ರಮ 'ಭಾರತ ಭಾಗ್ಯ ವಿಧಾತ'.
2017ರ ಫೆಬ್ರವರಿ 1ರಂದು ಬೆಂಗಳೂರಿನಲ್ಲಿ ಆರಂಭಗೊಂಡು, ಆ ನಂತರ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಮಾರ್ಚ್ 3ರವರೆಗೆ ಒಂದು ತಿಂಗಳ ಕಾಲ ಕಾರ್ಯಕ್ರಮ ಜರುಗಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್ ಅವರ ಪರಿಕಲ್ಪನೆಯ ಈ ಕಾರ್ಯಕ್ರಮಕ್ಕೆ ನಿರ್ದೇಶನ ಮತ್ತು ಸಾಹಿತ್ಯವನ್ನು ಚಲನಚಿತ್ರ ನಿರ್ದೇಶಕ ಬಿ.ಎಂ. ಗಿರಿರಾಜ್, ಸಂಗೀತ ಪೂರ್ಣಚಂದ್ರ ತೇಜಸ್ವಿ, ರಂಗ ವಿನ್ಯಾಸ ಶಶಿಧರ ಅಡಪ, ವಸ್ತ್ರಾಲಂಕಾರ ಪ್ರಮೋದ್ ಶಿಗ್ಗಾವ್, ಪದ್ಮಿನಿ ಹಚ್ಚಿ ನೃತ್ಯ ನಿರ್ದೇಶನ, ರಾಮಕೃಷ್ಣ ಬೆಳ್ತೂರು ಮೇಕಪ್ ಹಾಗೂ ಡಾ.ಕೆ.ವೈ.ನಾರಾಯಣಸ್ವಾಮಿ ಅವರು ಗೀತ ರಚನೆ ಮಾಡಿದ್ದಾರೆ.
ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾರ್ಚ್ 11ಕ್ಕೆ
ಕರ್ನಾಟಕ ಮಾಧ್ಯಮ ಅಕಾಡೆಮಿ 2016ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪುರಸ್ಕೃತರ ಪ್ರದಾನ ಸಮಾರಂಭವನ್ನು ಮಾರ್ಚ್ 11ರಂದು ಸಂಜೆ 5ಕ್ಕೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಹಮ್ಮಿಕೊಳ್ಳಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಚಿವ ಡಾ.ಎಚ್.ಸಿ.ಮಹದೇವಪ್ಪ ಪ್ರಶಸ್ತಿ ಪುರಸ್ಕೃತರ ಪರಿಚಯ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಸಚಿವ ಆರ್. ರೋಷನ್ ಬೇಗ್ ವಹಿಸಲಿದ್ದಾರೆ.











Click it and Unblock the Notifications