ಬೆಸ್ಕಾಂ ಕಚೇರಿಯಲ್ಲಿ 15 ಲಕ್ಷ ಕಳ್ಳತನ, ಉದ್ಯೋಗಿ ಬಂಧನ!
ಬೆಂಗಳೂರು, ಜೂನ್ 20 : ಬೆಸ್ಕಾಂ ಕಚೇರಿಯಲ್ಲಿ ನಡೆದ 15 ಲಕ್ಷ ರೂ. ಹಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯೋಗಿಯನ್ನು ಬಂಧಿಸಲಾಗಿದೆ. ಆರೋಪಿಗಳಿಂದ 11.02 ಲಕ್ಷ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಹೊಸೂರು ರಸ್ತೆಯ ಬೆಸ್ಕಾಂ ಉಪ ವಿಭಾಗದ ಕಚೇರಿಯಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಸ್ಕಾಂ ನೌಕರ ಸಲೀಂ, ಆತನ ಗೆಳೆಯ ರಾಘವೇಂದ್ರ ರಾಥೋಡ್ನನ್ನು ಅಶೋಕ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜೂನ್ 12ರ ಮಂಗಳವಾರ ಸಿದ್ದಾಪುರದ ನಿವಾಸಿ ಸಲೀಂ ಮತ್ತು ರಾಘವೇಂದ್ರ ರಾಥೋಡ್ ಬೆಸ್ಕಾಂ ಕಚೇರಿಯಿಂದ 15 ಲಕ್ಷ ರೂ. ಹಣ ಕಳವು ಮಾಡಿದ್ದರು. ಬೆಸ್ಕಾಂ ಸಿಬ್ಬಂದಿಗಳನ್ನು ಒಬ್ಬರಾಗೇ ವಿಚಾರಣೆ ನಡೆಸಿದಾಗ ಇಬ್ಬರು ಸಿಕ್ಕಿಬಿದ್ದಿದ್ದಾರೆ.

ಸಾಲ ತೀರಿಸಲು ಹಣ ಕದ್ದರು : ಸಲೀಂ ಮೂರು ವರ್ಷಗಳಿಂದ ಬೆಸ್ಕಾಂ ಕಚೇರಿಯಲ್ಲಿ ಕಿರಿಯ ಸಹಾಯಕನಾಗಿ ಕೆಲಸ ಮಾಡುತ್ತಿದ್ದರು.. ಕ್ರಿಕೆಟ್ ಬೆಟ್ಟಿಂಗ್ ಕಟ್ಟುತ್ತಿದ್ದ ಅವರು ಸಾಕಷ್ಟು ನಷ್ಟ ಮಾಡಿಕೊಂಡು, ಸಾಲ ಮಾಡಿದ್ದರು.
ಇದರಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಆದ್ದರಿಂದ, ಸಲೀಂ ಕಚೇರಿಯಲ್ಲಿನ ಹಣವನ್ನು ಕದ್ದು ಸಾಲ ತೀರಿಸಲು ಮುಂದಾಗಿದ್ದರು. ಬೆಸ್ಕಾಂ ವಿವಿಧ ಕಚೇರಿಯಿಂದ ಹಣ ಸಂಗ್ರಹಣೆ ಮಾಡುವ ಜವಾಬ್ದಾರಿಯನ್ನು ಲಾಜಿಕ್ ಕ್ಯಾಶ್ ಏಜೆನ್ಸಿಗೆ ನೀಡಲಾಗಿತ್ತು.
ಪ್ರತಿ ದಿನ ಸಂಜೆ ಅವರು ಹೊಸೂರು ರಸ್ತೆಯ ಬೆಸ್ಕಾಂ ಕಚೇರಿಗೆ ಬಂದು ಹಣ ಸಂಗ್ರಹಿಸುತ್ತಿದ್ದರು. ಈ ವಿಚಾರ ತಿಳಿದಿದ್ದ ಸಲೀಂ ಆ ಹಣವನ್ನು ದೋಚಲು ಸಂಚು ರೂಪಿಸಿದ್ದರು. ಹಣದಾಸೆಗಾಗಿ ರಾಘವೇಂದ್ರ ಅವರು ಸಲೀಂಗೆ ಸಹಕಾರ ನೀಡಿದ್ದರು.
ಜೂನ್ 12ರಂದು ಲಾಜಿಕ್ ಕ್ಯಾಶ್ ಏಜೆನ್ಸಿ ಸಿಬ್ಬಂದಿ ಹಣವನ್ನು ಸಂಗ್ರಹಣೆ ಮಾಡಿ 15 ಲಕ್ಷ ರೂ. ಇದ್ದ ಬ್ಯಾಗ್ ಅನ್ನು ಕ್ಯಾಬೀನ್ನಲ್ಲಿಟ್ಟು ಟೀ ಕುಡಿಯಲು ಹೊರಗೆ ಹೋಗಿದ್ದರು. ಈ ಸಮಯದಲ್ಲಿ ಸಲೀಂ ಬ್ಯಾಗ್ ಎತ್ತಿಕೊಂಡು ರಾಘವೇಂದ್ರಗೆ ನೀಡಿದ್ದರು.
ಲಾಜಿಕ್ ಕ್ಯಾಶ್ ಏಜೆನ್ಸಿ ಸಿಬ್ಬಂದಿ ಅಶೋಕ ನಗರ ಠಾಣೆಗೆ ದೂರು ನೀಡಿದ್ದರು. ತನಿಖೆ ಆರಂಭಿಸಿದ ಪೊಲೀಸರು ಮೊದಲು ಬೆಸ್ಕಾಂ ಸಿಬ್ಬಂದಿಯನ್ನು ವಿಚಾರಣೆ ನಡೆಸಿದ್ದರು. ಆಗ ಸಲೀಂ ತಪ್ಪೊಪ್ಪಿಕೊಂಡಿದ್ದಾರೆ.












Click it and Unblock the Notifications