Rain Alert: ಬೆಂಗಳೂರನಲ್ಲಿ ವಾರಾಂತ್ಯಕ್ಕೆ ಭರ್ಜರಿ ಮಳೆ: 3 ದಿನದ ಹವಾಮಾನ ಮುನ್ಸೂಚನೆ
ಬೆಂಗಳೂರು, ಏಪ್ರಿಲ್ 10: ಬೇಸಿಗೆ ಅರ್ಧ ಅವಧಿ ಪೂರ್ಣಗೊಳಿಸಿರುವ ಬೆಂಗಳೂರು ನಗರವು ಮಳೆಯ ದರ್ಶನಕ್ಕೆ ಸಜ್ಜಾಗಿದೆ. ಕಳೆದೊಂದು ವಾರದಿಂದ ಹಿಂದೆ ಸುರಿದಿದ್ದ ಮಳೆ ನಂತರ ಕಣ್ಮರೆಯಾಗಿತ್ತು. ಬಿಸಿಲಿನ ಅಬ್ಬರ ಮತ್ತೆ ಹೆಚ್ಚಾಗತೊಡಗಿದೆ. ಸದ್ಯ 34 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ. ಮುಂದಿನ ಮೂರು ದಿನಗಳ ಕಾಲ ನಗರದಲ್ಲಿ ತಂಪಿನ ವಾತಾವರಣ ಕಂಡು ಬರಲಿದೆ. ಏಕೆಂದರೆ ಏಪ್ರಿಲ್ 13ರವರೆಗೆ ನಗರದ ವಿವಿಧೆಡೆ ಹಗುರದಿಂದ ಸಾಧಾರಣ ಮಳೆ, ಒಂದೆರಡು ಕಡೆಗಳಲ್ಲಿ ಭಾರೀ ಮಳೆ ಆಗುವ ಸಾಧ್ಯತೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ನೀಡಿರುವ ಮುನ್ಸೂಚನೆ ಪ್ರಕಾರ, ಸಿಲಿಕಾನ್ ಸಿಟಿಯಲ್ಲಿ ಇದೇ ವಾರಾಂತ್ಯಕ್ಕೆ ಉತ್ತಮ ಮಳೆ ಆಗುವ ಸಾಧ್ಯತೆ ಇದೆ. ಗುಡುಗು ಮಿಂಚು ಸಹಿತ ಜೋರು ಮಳೆ ಅಬ್ಬರಿಸಲಿದೆ. ಬಹುತೇಕ ನಗರಾದ್ಯಂತ ಉತ್ತಮವಾಗಿ ಪೂರ್ವ ಮುಂಗಾರು ಮಳೆ ಸುರಿಯಬಹುದೆಂದು ಗುರುವಾರದ ಮುನ್ಸೂಚನಾ ವರದಿ ತಿಳಿಸಿದೆ.

ಏಪ್ರಿಲ್ 13ರವರೆಗೆ ಗರಿಷ್ಠ ತಾಪಮಾನದಲ್ಲಿ ಹಾಗೂ ಕನಿಷ್ಠ ತಾಪಮಾನದಲ್ಲಿ ಕೊಂಚ ಇಳಿಕೆ ಆಗಲಿದೆ. 34 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ 32ಕ್ಕೆ ಹಾಗೂ ಕನಿಷ್ಠ ಉಷ್ಣಾಂಶವು 22ರಿಂದ 21 ಇಲ್ಲವೇ 20 ಡಿಗ್ರಿ ಸೆಲ್ಸಿಯಸ್ ಇಳಿಯುವ ನಿರೀಕ್ಷೆ ಇದೆ.
ನಗರದಲ್ಲಿ ಸಂಜೆಗೆ ಮಳೆ ಜಮಾವಣೆ
ನಿತ್ಯ ಬೆಳಗ್ಗೆ ಎಂದಿನಂತಹ ವಾತಾವರಣ ಸೃಷ್ಟಿಯಾಗಲಿದೆ. ಮಧ್ಯಾಹ್ನ 12 ಗಂಟೆ ಹೊತ್ತಿಗೆ ತೀವ್ರ ಬಿಸಿಲಿನ ತಾಪ ಕಂಡು ಬರಲಿದ್ದು, ನಂತರ ಬಿಸಿಲು ದಿಢೀರ್ ಇಳಿಕೆ ಆಗಲಿದೆ. ಮಧ್ಯಾಹ್ನ ನಂತರ ತಡರಾತ್ರಿವರೆಗೆ ನಗರಾದ್ಯಂತ ಜಿಟಿ ಜಿಟಿ, ವ್ಯಾಪಕ ಮಳೆ ಸುರಿಯುವ ಮುನ್ಸೂಚನೆ ಇದೆ.
ಬೆಂಗಳೂರು ಮಾತ್ರವಲ್ಲದೇ ರಾಜ್ಯದ ನಾನಾ ಭಾಗಗಳಲ್ಲಿ ಪೂರ್ವ ಮುಂಗಾರು ಮಳೆ ಚುರುಕಾಗುವ ಲಕ್ಷಣಗಳು ಎದ್ದು ಕಾಣುತ್ತಿವೆ. ಬೇಸಿಗೆಗೆ ಮಳೆ ಆರಂಭವಾದಾಗಿನಿಂದ ಬೆಂಗಳೂರಿನಲ್ಲಿ ಆಗಾಗ ಮಳೆರಾಯನ ದರ್ಶನವಾಗುತ್ತಿದೆ. ಕಳೆದ ಕೆಲವು ದಿನಗಳಿಂದ ವಿರಾಮ ನೀಡಿದ್ದರಿಂದ ಮತ್ತೆ ಉಷ್ಣ ಅಲೆಯ ಅನುಭವ ಆಗಿತ್ತು. ಈ ತಾಪದ ದಿನಗಳಿಗೆ ತಾತ್ಕಲಿಕವಾಗಿ ಈ ವಾರಾಂತ್ಯಕ್ಕೆ ಮುಕ್ತಿ ಸಿಗುವ ನಿರೀಕ್ಷೆ ಇದೆ.
ಹವಾಮಾನ ವೈಪರಿತ್ಯ: ಮಳೆ ಚುರುಕು
ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಪರಿಚಲನೆಯ ತೀವ್ರ ಇಳಿಕೆ ಆಗಿಲ್ಲ. ಸಮುದ್ರ ಮೇಲ್ಮೈನಲ್ಲಿರುವ ಸ್ಟ್ರಫ್, ಚಂಡಮಾರುತದ ಬಿರುಗಾಳಿ ಪ್ರಭಾವ ಮುಂದುವರಿದಿದೆ. ಆಗ್ನೇಯ ಬಂಗಳಕೊಲ್ಲಿಯಿಂದ ಬೇರೆ ಬೇರೆ ದಿಕ್ಕಿನತ್ತ ಸಾಗುತ್ತಿದೆ ಎಂದು ತಿಳಿದು ಬಂದಿದೆ. ಹೀಗಾಗಿ ತಮಿಳುನಾಡು, ಕೇರಳ ಮತ್ತು ಕರ್ನಾಟಕದ ದಕ್ಷಿಣ ಒಳನಾಡು, ಕರಾವಳಿ ಹಾಗೂ ಮಲೆನಾಡಿನಲ್ಲಿ ಜಿಲ್ಲೆಗಳಲ್ಲಿ ಮಳೆಯ ವಾತಾವರಣ ನಿರ್ಮಾಣವಾಗಿದೆ. ಉತ್ತರ ಕರ್ನಾಟಕದಲ್ಲಿ ಬಹುತೇಕ ಒಣಹವೆ ಮುಂದುವರಿದಿದೆ.












Click it and Unblock the Notifications