Bengaluru Weather: ಚಂಡಮಾರುತ ಪ್ರಸರಣ: ಭಾರೀ ಮಳೆ ಎಚ್ಚರಿಕೆ, ಯೆಲ್ಲೋ ಅಲರ್ಟ್...Rain Alert
ಬೆಂಗಳೂರು, ಜುಲೈ 20: ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಬಿಸಿಲಿನ ವಾತಾವರಣ ಅಪರೂಪ ಎಂಬಂತಾಗಿದೆ. ನಗರಾದ್ಯಂತ ಆಗಾಗ ಜಿಟಿ ಜಿಟಿ ಮಳೆ ಆಗುತ್ತಿದೆ. ಸಮುದ್ರ ಹಾಗೂ ಭೂಮಿ ಮೇಲ್ಮೈನಲ್ಲಿ ಆಗುತ್ತಿರುವ ನಿರಂತರ ಬದಲಾವಣೆ ಕಾರಣದಿಂದಾಗಿ ಸಾಧಾರಣದಿಂದ ಭಾರೀ ಮಳೆ ನಿರೀಕ್ಷೆ ಇದೆ. ಮುಂದಿನ ಎರಡು ದಿನ ಬೆಂಗಳೂರು ನಗರ ಜಿಲ್ಲೆಗೆ 'ಯೆಲ್ಲೋ ಅಲರ್ಟ್' ನೀಡಲಾಗಿದೆ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಜಾರ್ಖಂಡ್, ಮಧ್ಯ ಪ್ರದೇಶ ಭಾಗದಿಂದ ಪಶ್ಚಿಮ ಬಂಗಾಳವರೆಗೆ ಹಾದು ಹೋದ ಚಂಡಮಾರುತ ಪ್ರಸರಣವು ತೀವ್ರಗೊಂಡಿದೆ. ಇದರಿಂದ ಕರ್ನಾಟಕದಲ್ಲಿ ಮುಂಗಾರು ಮಳೆ ತೀವ್ರವಾಗಿದೆ. ಪರಿಣಾಮ ಐಟಿ ಸಿಟಿ ಬೆಂಗಳೂರಿನಲ್ಲಿ ಮಳೆ ವಾತಾವರಣ, ತಂಪು ಗಾಳಿ ಸೃಷ್ಟಿಯಾಗಿದೆ. ಈ ಹವಾಮಾನ ವೈಪರೀತ್ಯವು ಮತ್ತಷ್ಟು ತೀವ್ರಗೊಳ್ಳುವ ಮುನ್ಸೂಚನೆ ಇದೆ. ಆದ್ದರಿಂದಲೇ ಬೆಂಗಳೂರು ನಗರಕ್ಕೆ ಜುಲೈ 22 ಮತ್ತು 23 ರಂದು ಯೆಲ್ಲೋ ಅಲರ್ಟ್ ನೀಡಲಾಗಿದೆ. ನಗರದಲ್ಲಿ ಹಲವೆಡೆ ಬರೋಬ್ಬರಿ 115 ಮಿಲಿ ಮೀಟರ್ಗಿಂತಲೂ ಅಧಿಕ ಮಳೆ ನಿರೀಕ್ಷೆ ಇದೆ.

ಉಳಿದೆಡೆ ನಗರದಲ್ಲಿ ಆಗಾಗ ಹಗುರದಿಂದ ಸಾಧಾರಣವಾಗಿ ಮತ್ತು ತುಂತುರು ಮಳೆ ಬೀಳುವ ಸಂಭವವಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ವಿಪರೀತ ಮಳೆ ಸುರಿಯಲಿದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ. ಜುಲೈ 25ರವರೆಗೆ ಅಂದರೆ ಮುಂದಿನ ಐದು ದಿನಗಳ ಕಾಲ ಬೆಂಗಳೂರಿನಲ್ಲಿ ವ್ಯಾಪಕ ಮಳೆ ನಿರೀಕ್ಷೆ ಇದೆ. ಗರಿಷ್ಠ ತಾಪಮಾನ 29 ಹಾಗೂ ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ನಷ್ಟು ದಾಖಲಾಗುತ್ತದೆ ಎಂದು ಭಾನುವಾರದ ಹವಾಮಾನ ಇಲಾಖೆ ಮುನ್ಸೂಚನೆ ವರದಿಯಲ್ಲಿ ತಿಳಿಸಲಾಗಿದೆ.
ಕೋರಮಂಗಲ, ಬಾಣಸವಾಡಿ, ಹೆಬ್ಬಾಳ, ಯಲಹಂಕ, ಕೆಂಗೇರಿ, ಆರ್ಆರ್.ನಗರ, ಹೊರಮಾವು, ವಿದ್ಯಾರಣ್ಯಪುರ, ಲಾಲ್ ಬಾಗ್, ಹಂಪಿನಗರ, ಯಶವಂತಪುರ, ಎಲೆಕ್ಟ್ರಾನಿಕ್ ಸಿಟಿ, ಬೆಳ್ಳಂದೂರು ಭಾಗಗಳಲ್ಲಿ ಸಾಮಾನ್ಯ ಮಳೆ ಆಗಿದೆ. ಸೋಮವಾರ ಹವಾಮಾಣದ ವೈಪರೀತ್ಯಗಳು ತೀವ್ರಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಮುಂದಿನ ಎರಡು ದಿನ ಸಾಧಾರಣದಿಂದ ಭಾರೀ ಮಳೆ ಆಗಲಿದೆ.
ಭಾಗಮಂಡಲದಲ್ಲಿ 47 ಮಿಲಿ ಮೀಟರ್ ಮಳೆ ದಾಖಲು
ಕೊಡಗು, ಭಾಗಮಂಡಲದಲ್ಲಿ ಇಂದು ಬೆಳಗ್ಗೆ 47 ಮಿಲಿ ಮೀಟರ್ ಮಳೆ ದಾಖಲಾಗಿದೆ. ಈ ಭಾಗದಲ್ಲಿ ಕಳೆದ ಒಂದು ತಿಂಗಳಿನಿಂದಲೂ ವ್ಯಾಪಕ ಮಳೆ ಮುಂದುವರಿದಿದೆ. ಮುಂಗಾರು ಮಳೆ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಚುರುಕಾಗಿದೆ. ಅವಧಿಗೂ ಮುನ್ನವೇ ಬಂದ ಮುಂಗಾರು ಮಳೆಯು ಪೂರ್ವ ಮುಂಗಾರು ಆರ್ಭಟದ ಬೆನ್ನಲ್ಲೆ ತನ್ನ ಅಬ್ಬರ ಮುಂದುವರಿಸಿತು. ಹೀಗಾಗಿ ಈ ಭಾರಿ ಕರಾವಳಿ ಭಾಗಗಳಲ್ಲಿ ಪ್ರವಾಹ, ಭಾರೀ ಮಳೆ ಇತರ ಸಮಸ್ಯೆಗಳು ಇಂದಿಗೂ ಜೀವಂತವಾಗಿವೆ.












Click it and Unblock the Notifications