ಬೆಂಗಳೂರಿನ ಈ ಭಾಗದಲ್ಲಿ ಬೇಕಾಬಿಟ್ಟಿ ಕಸ ಎಸೆದರೆ ದಂಡ ಫಿಕ್ಸ್: ಪೊಮ್ಮಲ ಸುನೀಲ್ ಕುಮಾರ್ ಎಚ್ಚರಿಕೆ!
ಬೆಂಗಳೂರಿನಲ್ಲಿ ಕಸದ ಸಮಸ್ಯೆ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಕಸದ ಸಮಸ್ಯೆ ಹಾಗೂ ಎಲ್ಲೆಂದರಲ್ಲಿ ಕಸ ಎಸೆಯುವುದು ಹೆಚ್ಚಾಗುತ್ತಿದ್ದು ಇದನ್ನು ತಪ್ಪಿಸಲು ಬೆಂಗಳೂರು ಪಾಲಿಕೆಗಳು ಮುಂದಾಗಿವೆ. ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರು ಗುರುವಾರ (ಅಕ್ಟೋಬರ್ 02) ಬೆಳಿಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ನಗರ ಪಾಲಿಕೆಯ ವ್ಯಾಪ್ತಿಯ ವಿವಿಧ ಪ್ರದೇಶಗಳನ್ನು ಪರಿಶೀಲಿನ ನಡೆಸಿದ್ದಾರೆ.
ಬಾಣಸವಾಡಿ ಮತ್ತು ಸುಬ್ಬಯ್ಯನ ಪಾಳ್ಯದಲ್ಲಿ ರಸ್ತೆಯ ಬದಿಗಳಲ್ಲಿ ಎಲ್ಲೆಲ್ಲೂ ಕಸ ತುಂಬಿರುವುದನ್ನು ಹಾಗೂ ಬ್ಲ್ಯಾಕ್ ಸ್ಪಾಟ್ ಗಳನ್ನು ಗಮನಿಸಿದ ಆಯುಕ್ತರು ತಕ್ಷಣ ಸ್ವಚ್ಛಗೊಳಿಸಲು ಸೂಚಿಸಿದ್ದಾರೆ. ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿ ಕಸದ ಸಮಸ್ಯೆ ಬಗ್ಗೆ ಚರ್ಚಿಸಿದ್ದು, ರಸ್ತೆಯ ಬದಿಯಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರನ್ನು ಗುರುತಿಸಿ, ದಂಡ ವಿಧಿಸಲು ಮಾರ್ಷಲ್ಗಳಿಗೆ ಸೂಚನೆ ನೀಡಿದ್ದಾರೆ.

ಎಲ್ಲೆಲ್ಲಿ ಕಸದ ಬ್ಲ್ಯಾಕ್ ಸ್ಪಾಟ್ ಗಳು ಹೆಚ್ಚಾಗಿ ಕಂಡು ಬರುತ್ತದೆಯೋ ಅಂತಹ ಪ್ರದೇಶಗಳಲ್ಲಿ ಮಾರ್ಷಲ್ ಗಳು ರಾತ್ರಿ ಗಸ್ತು ತಿರುಗುತ್ತಾ ಕಸ ಹಾಕುವವರನ್ನು ಗುರುತಿಸಿ, ದಂಡ ವಿಧಿಸಲು ಕ್ರಮ ಕೈಗೊಳ್ಳುವಂತೆ ಹಾಗೂ ಈ ಸಮಸ್ಯೆಗಳು ಮರುಕಳಿಸದಂತೆ ನೋಡಿಕೊಳ್ಳಲು ಮಾರ್ಷಲ್ಗಳಿಗೆ ಹಾಗೂ ಸಂಬಂಧಪಟ್ಟ ಘನತ್ಯಾಜ್ಯ ಸಿಬ್ಬಂದಿಗಳಿಗೆ ಸೂಚನೆ ಕೊಡಲಾಗಿದೆ. ನಗರ ಪಾಲಿಕೆಯ ಘನತ್ಯಾಜ್ಯ ನಿರ್ವಹಣಾ ತಂಡದ ಎಲ್ಲಾ ಸಿಬ್ಬಂದಿ ಕಸ ವಿಲೇವಾರಿ ಬಗ್ಗೆ ಸಂಪೂರ್ಣ ಗಮನಹರಿಸಿ ಕಾರ್ಯವೈಖರಿಯ ವಿಧಾನವನ್ನು ಬದಲಾಯಿಸಿಕೊಂಡು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.
ಘನತ್ಯಾಜ್ಯ ವಿಲೇವಾರಿಯಲ್ಲಿ ಕಾರ್ಯವೈಖರಿ ಸುಧಾರಣೆಗೊಳ್ಳದಿದ್ದಲ್ಲಿ, ಕಸ ವಿಲೇವಾರಿಯ ಕಾರ್ಯವು ಸಮರ್ಪಕವಾಗಿ ನಿರ್ವಹಣೆಯಾಗದಿದ್ದಲ್ಲಿ ಸಂಬಂಧಿಸಿದ ಎಲ್ಲಾ ಅಧಿಕಾರಿ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದಾದ ಮೇಲೆ ಆಯುಕ್ತರು ಸರ್ವಜ್ಞನಗರದ ಹೆಚ್ಬಿಆರ್ ಲೇಔಟ್ನಲ್ಲಿರುವ ಟ್ರಾನ್ಸ್ಫರ್ ಸ್ಟೇಷನ್ ಪರಿಶೀಲಿಸಿ ಅಗತ್ಯ ಸೂಚನೆಗಳನ್ನು ಕೊಟ್ಟಿದ್ದಾರೆ.
ಮಹಾತ್ಮ ಗಾಂಧಿ ಜಯಂತಿ ಆಚರಣೆ: ಮಹಾತ್ಮ ಗಾಂಧೀಜಿಯವರ ಜಯಂತಿಯ ಅಂಗವಾಗಿ ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರ ನೇತೃತ್ವದಲ್ಲಿ ಅಮೃತಹಳ್ಳಿ ಆಯುಕ್ತರವರ ಕಚೇರಿ ಆವರಣದಲ್ಲಿ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಜಯಂತಿ ಕಾರ್ಯಕ್ರಮ ಆಚರಿಸಲಾಯಿತು. ಈ ಸಮಯದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸತ್ಯ, ಅಹಿಂಸೆ ಮತ್ತು ಸ್ವಚ್ಛತೆಯಂತಹ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಮೌಲ್ಯಗಳನ್ನು ಸ್ಮರಿಸಿ ಅವರಿಗೆ ಗೌರವ ನಮನ ಸಲ್ಲಿಸಿದರು.












Click it and Unblock the Notifications