Bengaluru: ಟ್ರಾಫಿಕ್ಗೆ ಬ್ರೇಕ್ ಹಾಕುವ 2 ಬೃಹತ್ ಕಾರಿಡಾರ್ 2024ಕ್ಕೆ ಪೂರ್ಣ
ಬೆಂಗಳೂರು, ಜುಲೈ 19: ಬೆಂಗಳೂರಿನಲ್ಲಿನ ಸಂಚಾರ ದಟ್ಟಣೆ ನಿವಾರಣೆಗೆ ಪ್ರತಿ ಸರ್ಕಾರಗಳು ಒಂದಲ್ಲ ಒಂದು ಯೋಜನೆ ರೂಪಿಸುತ್ತಲೇ ಇರುತ್ತವೆ. ಅದೇ ರೀತಿ 2019ರಲ್ಲಿ ಆರಂಭಗೊಂಡಿದ್ದ ನಗರದ ಹೊರವಲಯದಲ್ಲಿನ ರಸ್ತೆ ಮತ್ತು ಮೇಲ್ಸೇತುವೆ ರಸ್ತೆ ನವೀಕರಣ ಕಾಮಗಾರಿ ಮೊದಲ ಹಂತ ಕೆಲವೇ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಈ ಮೂಲಕ ಸಾರ್ವಜನಿಕರಿಗೆ ಸುಹಿ ಸುದ್ದಿಯೊಂದು ಲಭಿಸಿದೆ.
ಬೆಂಗಳೂರಿನಲ್ಲಿ ಹೊರವಲಯದಲ್ಲಿ ಆರು ರಸ್ತೆ ಮತ್ತು ನಾಲ್ಕು ಸೇತುವೆಗಳ ರಸ್ತೆ ನವೀಕರಣ ಕಾಮಗಾರಿಯನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮವು (KRDCL) 2,095 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಂಡಿತ್ತು. ಹೊಸಕೋಟೆ-ಬೂದಿಗೆರೆ ಮತ್ತು ನೆಲಮಂಗಲ-ಮಧುರೆ ಕಾರಿಡಾರಿನ ಮೊದಲ ಹಂತದ ಕಾಮಗಾರಿ 2024ರ ಜನವರಿಯೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಕನ್ನಡಪ್ರಭ ವರದಿ ಮಾಡಿದೆ.

ನೆಲಮಂಗಲ -ಮಧುರೆ ಕಾರಿಡಾರ್ ರೈಲ್ವೆ ಮೇಲ್ಸೇತುವೆ ಮತ್ತು ರೈಲ್ವೆ ಕೆಳಸೇತುವೆಯನ್ನು ಸಹ ಹೊಂದಿದ್ದು ಇದು 15.25 ಕಿಮೀ ಉದ್ದ ಇದೆ. ಹೊಸಕೋಟೆ-ಬೂದಿಗೆರೆ ಕಾರಿಡಾರ್ನ ಒಟ್ಟು ಉದ್ದ 20.11 ಕಿಲೋ ಮೀಟರ್ ಇದೆ. ಹೊಸಕೋಟೆ-ಬೂದಿಗೆರೆ ಕ್ರಾಸ್ ರಸ್ತೆಯನ್ನು ಕೆಆರ್ಡಿಸಿಎಲ್ ಮೇಲ್ದರ್ಜೆಗೇರಿಸುವ ಕೆಲಸವು ನಡೆಯುತ್ತಿದೆ.
ಈ ಎರಡು ಕಾಮಗಾರಿಗಳ ಮೊದಲ ಹಂತವು 2019 ರಲ್ಲಿ ಆಂಭಗೊಂಡಿತ್ತು. ಈ ಮಧ್ಯೆ ಭೂಸ್ವಾಧೀನ, ಮರ ಕತ್ತರಿಸುವಿಕೆಗೆ ಸಮಯ ಹಿದಿಡ ಪರಿಣಾಮ ಹಾಗೂ ಕೊರೊನಾ ಪಿಡುಗಿನ ಸಂಬಂಧ ಕೆಲಸ ವಿಳಂಬವಾಯಿತು ಎನ್ನಲಾಗಿದೆ.
ಯೋಜನೆಯ ಅಂದಾಜು ವೆಚ್ಚದ ಮಾಹಿತಿ
ಬೂದಿಗೆರೆ ಕ್ರಾಸ್-ಹೊಸಕೋಟೆ, ಬೂದಿಗೆರೆ-ಸಿಂಗಹಳ್ಳಿ ಮತ್ತು ಮೈಲನಹಳ್ಳಿ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಕಾಮಗಾರಿಯನ್ನು ಚುರುಕುಗೊಳಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ಯೋಜನೆಗೆ ಒಟ್ಟು ಸುಮಾರು 137.51 ಕೋಟಿ ರೂಪಾಯ ತಗುಲಬಹುದು ಎನ್ನಲಾಗಿದೆ.

ಬೆಂಗಳೂರು ಉತ್ತರದಲ್ಲಿ, ಚಿಕ್ಕಮಧುರೆ ಮೂಲಕ ಎನ್ ಎಚ್ 4 ನಲ್ಲಿ ನೆಲಮಂಗಲದಿಂದ ರಾಜ್ಯ ಹೆದ್ದಾರಿ-74 ರಲ್ಲಿ ಮಧುರೆಗೆ ಸಂಪರ್ಕಿಸಲು 15.25 ಕಿಲೋ ಮೀಟರ್ ರಸ್ತೆ ನವೀಕರಣ ಯೋಜನೆಗೆ 155.69 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ನಿಗಮದ ಮೂಲಗಳು ತಿಳಿಸಿವೆ.
ಈ ರಸ್ತೆ ಅಭಿವೃದ್ಧಿ ಯೋಜನೆಗಳಿಂದ ನಗರದ ಸಂಚಾರದ ದಟ್ಟಣೆ ತುಸು ಕಡಿಮೆ ಆಗಲಿದೆ. ವಾರಾಂತ್ಯದಲ್ಲಿ ಹೆಚ್ಚಿರುವ ವಾಹನ ದಟ್ಟಣೆಗೆ ಈ ಯೋಜನೆ ಕಡಿವಾಣ ಹಾಕುವ ನಿರೀಕ್ಷೆ ಇದೆ. ಆದಷ್ಟು ಶೀಘ್ರವೇ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕಾರ್ಯ ನಿರತವಾಗಿದ್ದೇವೆ. ಮುಂದಿನ ಜನವರಿ ಒಳಗೆ ಯೋಜನೆ ಮುಗಿಸಲಿದ್ದೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.












Click it and Unblock the Notifications