Bengaluru Traffic: ಗೊರಗುಂಟೆಪಾಳ್ಯ ಜಂಕ್ಷನ್ನಲ್ಲಿ ಟ್ರಾಫಿಕ್ ಕಡಿಮೆ ಮಾಡುವ ಐಡಿಯಾ ಫೇಲ್! ಹೊಸ ದಾರಿ ಹುಡುಕುವ ಭರವಸೆ
ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಟ್ರಾಫಿಕ್ ಉಂಟಾಗುವ ಜಂಕ್ಷನ್ಗಳಲ್ಲಿ ಒಂದಾದ ಗೊರಗುಂಟೆಪಾಳ್ಯ ಜಂಕ್ಷನ್ ಮತ್ತು ಸಿಎಂಐಟಿ ಜಂಕ್ಷನ್ನಲ್ಲಿ ಟ್ರಾಫಿಕ್ ಕಡಿಮೆ ಮಾಡಲು ಪೊಲೀಸರು ಮಾಡಿದ್ದ ಪ್ರಯೋಗ ವಿಫಲವಾಗಿದೆ. ಈ ಬಗ್ಗೆ ಯಶವಂತಪುರ ಸಂಚಾರ ಪೊಲೀಸ್ ಟ್ವಿಟರ್ ಹ್ಯಾಂಡಲ್ನಲ್ಲಿ ಮಾಹಿತಿ ನೀಡಿದೆ.
ಗೊರಗುಂಟೆ ಪಾಳ್ಯ ಜಂಕ್ಷನ್ನಲ್ಲಿ ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡಲು ನಾವು ಮಾಡಿದ್ದ ಪ್ರಯೋಗ ವಿಫಲವಾಗಿದೆ. ಆದರೆ ಟ್ರಾಫಿಕ್ ಕಡಿಮೆ ಮಾಡಲು ಮುಂದಿನ ದಿನಗಳಲ್ಲಿ ಬೇರೆ ಮಾರ್ಗಗಳನ್ನು ಹುಡುಕಲಾಗುವುದು ಎಂದು ಹೇಳಿದೆ. ಈ ಮೂಲಕ ಗೊರಗುಂಟೆ ಪಾಳ್ಯ ಮತ್ತು ಸಿಎಂಐಟಿ ಜಂಕ್ಷನ್ಗಳಲ್ಲಿ ಟ್ರಾಫಿಕ್ ಸಮಸ್ಯೆ ಹಾಗೆ ಮುಂದುವರೆಯಲಿದೆ.

ಬೆಂಗಳೂರು ನಗರಕ್ಕೆ ಹಲವು ಜಿಲ್ಲೆಗಳನ್ನು ಸಂಪರ್ಕಿಸುವ ತುಮಕೂರು-ಬೆಂಗಳೂರು ರಸ್ತೆಯಲ್ಲಿ ಗೊರಗುಂಟೆ ಪಾಳ್ಯ ಜಂಕ್ಷನ್ ಮತ್ತು ಜಾಲಹಳ್ಳಿ ಕ್ರಾಸ್ನಲ್ಲಿ ಭಾರಿ ಟ್ರಾಫಿಕ್ ಸಮಸ್ಯೆ ವಾಹನ ಸವಾರರಿಗೆ ಕಿರಿ ಕಿರಿ ಉಂಟು ಮಾಡುತ್ತಿದೆ. ಗೊರಗುಂಟೆ ಪಾಳ್ಯ ಫ್ಲೈ ಓವರ್ ಬಂದ್ ಮಾಡಿರುವುದರಿಂದ ಜಾಲಹಳ್ಳಿ ಕ್ರಾಸ್ ಜಂಕ್ಷನ್ನಲ್ಲಂತೂ ಭಾರಿ ಟ್ರಾಫಿಕ್ ಸಮಸ್ಯೆ ಇದೆ.
ಪೊಲೀಸರು ಮಾಡಿದ್ದ ಪ್ರಯೋಗವೇನು?
ಗೊರಗುಂಟೆಪಾಳ್ಯ ಜಂಕ್ಷನ್, ಸಿಎಂಐಟಿ ಜಂಕ್ಷನ್ನಲ್ಲಿ ಟ್ರಾಫಿಕ್ ಕಡಿಮೆ ಮಾಡಲು ಹೊಸ ಉಪಾಯ ಮಾಡಿದ್ದ ಪೊಲೀಸರು ಜೂನ್ 19ರಂದು, ಸೋಮವಾರ ಜಾರಿ ಮಾಡಿದ್ದರು. ಅದರ ಪ್ರಕಾರ, ಸುಮಹಳ್ಳಿ ರಿಂಗ್ರಸ್ತೆಯಿಂದ ಬರುವ ವಾಹನಗಳು, ಕಡ್ಡಾಯವಾಗಿ ಮಾಡ್ರನ್ ಬ್ರೆಡ್ ಫ್ಯಾಕ್ಟರಿ ಹತ್ತಿರ ಎಡ ತಿರುವು ಪಡೆದು, ತುಮಕೂರು ರಸ್ತೆಗೆ ಸೇರುವಂತೆ ಮಾಡಿದ್ದರು, ಬೆಂಗಳೂರು, ಹೆಬ್ಬಾಳ ಕಡೆಗೆ ಚಲಿಸುವ ವಾಹನಗಳಿಗೆ ಎಸ್ಆರ್ಎಸ್ ಜಂಕ್ಷನ್ ಬಳಿ ಯೂ-ಟರ್ನ್ ಪಡೆಯಲು ಸೂಚನೆ ನೀಡಲಾಗಿತ್ತು.
ಆದರೆ ಮೊದಲನೇ ದಿನವೇ ಈ ಪ್ರಯತ್ನ ವಿಫಲವಾಗಿದ್ದು, ಮತ್ತಷ್ಟು ಗೊಂದಲ, ಸಮಸ್ಯೆಗೆ ಕಾರಣವಾಗಿದ್ದರಿಂದ ಮೊದಲಿನಂತೆಯೇ ಸುಮನಹಳ್ಳಿ ಕಡೆಯಿಂದ ಬಂದು ಬೆಂಗಳೂರು, ಹೆಬ್ಬಾಳ ಕಡೆ ಚಲಿಸುವ ವಾಹನಗಳು ಮೊದಲಿನಂತೆ ಟ್ರಾಫಿಕ್ ಸಿಗ್ನಲ್ನಲ್ಲಿ ನಿಂತು ಚಲಿಸಲು ಅವಕಾಶ ನೀಡಲಾಗಿದೆ.
ಪ್ರಯೋಗ ಫೇಲ್ ಆಯ್ತು…ಅಷ್ಟೆ.
— YASHAVANTHAPURA TRAFFIC BTP (@yspuratrfps) June 20, 2023
ಆದ್ರೆ ಎಲ್ಲೋ ಒಂದು ಕಡೆ ದಾರಿ ಇದ್ದೆ ಇರುತ್ತಲ್ಲಾ
ಅದನ್ನು ಆದಷ್ಟು ಬೇಗ ಹುಡುಕ್ತಿವಿ
ಸುಗಮ…ಘಮ ಘಮ ಅಂತ ಸಂಚರಿಸಬೇಕು ಅಂದ್ರೆ ಸ್ವಲ್ಪ ಟೈಮ್ ತಗೋಳ್ತಿದೆ ಅಷ್ಟೆ
ಆದ್ರೂ ನಿಮ್ಮೆಲ್ಲರ ಸಹಕಾರ & ಸಲಹೆಯಿಂದ ಆದಷ್ಟು ಬೇಗ ಸಂಚರಿಸಿಯೇ ಸಂಚರಿಸುತ್ತೆ…
ಆ ನಂಬಿಕೆ ನಮಗಿದೆ....https://t.co/20BR08nR7L
ಆದಷ್ಟು ಬೇಗ ದಾರಿ ಹುಡುಕ್ತೀವಿ!
ಪ್ರಯೋಗ ವಿಫಲವಾದ ಬಗ್ಗೆ ಟ್ವೀಟ್ ಮಾಡಿರುವ ಯಶವಂತಪುರ ಸಂಚಾರ ಪೊಲೀಸರು, "ಪ್ರಯೋಗ ಫೇಲ್ ಆಯ್ತು, ಅಷ್ಟೆ.ಆದ್ರೆ ಎಲ್ಲೋ ಒಂದು ಕಡೆ ದಾರಿ ಇದ್ದೆ ಇರುತ್ತಲ್ಲಾ ಅದನ್ನು ಆದಷ್ಟು ಬೇಗ ಹುಡುಕ್ತಿವಿ. ಸುಗಮ...ಘಮ ಘಮ ಅಂತ ಸಂಚರಿಸಬೇಕು ಅಂದ್ರೆ ಸ್ವಲ್ಪ ಟೈಮ್ ತಗೋಳ್ತಿದೆ ಅಷ್ಟೆ, ಆದ್ರೂ ನಿಮ್ಮೆಲ್ಲರ ಸಹಕಾರ ಮತ್ತು ಸಲಹೆಯಿಂದ ಆದಷ್ಟು ಬೇಗ ಸಂಚರಿಸಿಯೇ ಸಂಚರಿಸುತ್ತೆ, ಆ ನಂಬಿಕೆ ನಮಗಿದೆ." ಎಂದು ಟ್ವೀಟ್ ಮಾಡಿದ್ದಾರೆ.
ಬೆಂಗಳೂರು ಟ್ರಾಫಿಕ್ನಿಂದ ಕೆಟ್ಟ ಹೆಸರು ಪಡೆದುಕೊಂಡಿದ್ದು, ಅದನ್ನು ಹೋಗಲಾಡಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕೂಡ ಮೂರು ತಿಂಗಳುಗಳಲ್ಲಿ ನಗರದ ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ.
ಹೆಚ್ಚು ಟ್ರಾಫಿಕ್ ಉಂಟಾಗುವ ನಗರದ 8 ಜಂಕ್ಷನ್ಗಳಲ್ಲಿ ಡ್ರೋನ್ ಕ್ಯಾಮರಾಗಳನ್ನು ನಿಯೋಜಿಸಲಾಗಿದ್ದು, ಟ್ರಾಫಿಕ್ಗೆ ಕಾರಣಗಳನ್ನು ಅಧ್ಯಯನ ಮಾಡಲಾಗುತ್ತದೆ. ನಂತರ ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎನ್ನುವ ಬಗ್ಗೆ ನಿರ್ಧರಿಸಲಾಗುತ್ತದೆ.












Click it and Unblock the Notifications