ಕರ್ತವ್ಯಪ್ರಜ್ಞೆ ಮೆರೆದ ಸಂಚಾರಿ ಪೊಲೀಸರಿಗೆ ಶಭಾಶ್ಗಿರಿ
ಬೆಂಗಳೂರು, ಜು. 17 : ಹೃದಯಾಘಾತವಾಗಿ ಪ್ರಾಣಾಪಾಯಕ್ಕೆ ಸಿಲುಕಿದ್ದ 70 ವರ್ಷದ ವೃದ್ಧರನ್ನು ಸಮಯಸ್ಫೂರ್ತಿಯಿಂದ ಪ್ರಾಥಮಿಕ ಚಿಕಿತ್ಸೆ ಕೊಟ್ಟು, ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಮೂವರು ಪೊಲೀಸರನ್ನು ಗುರುತಿಸಿ ಅವರ ಕಾರ್ಯವನ್ನು ಶ್ಲಾಘಿಸಿದೆ.
ಚಿಕ್ಕಪೇಟೆ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಡಿ.ಜಿ. ರಾಮಚಂದ್ರಯ್ಯ, ಹೆಡ್ ಕಾನ್ಸ್ಟೇಬಲ್ ಲಿಂಗರಾಜು ಮತ್ತು ಪೊಲೀಸ್ ಕಾನ್ಸ್ಟೇಬಲ್ ವೆಂಕಟೇಶ್ ಅವರ ಕರ್ತವ್ಯಪ್ರಜ್ಞೆಯನ್ನು ಮೆಚ್ಚಿ ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ಡಾ. ಎಂ.ಎ. ಸಲೀಂ ಅವರು ಪ್ರಮಾಣಪತ್ರವನ್ನು ಶುಕ್ರವಾರ ವಿತರಿಸಿದರು. [ಸಂಚಾರಿ ಪೊಲೀಸರ ಮಾನವೀಯತೆಗೆ ಸಲಾಂ]

ಚಿಕ್ಕಪೇಟೆ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಸುಲ್ತಾನಪೇಟೆ ಅಡ್ಡರಸ್ತೆಯಲ್ಲಿ ಕಾರು ಚಲಾಯಿಸುತ್ತಿದ್ದಾಗ ರಾಮಣ್ಣ ಎಂಬುವವರಿಗೆ ಹೃದಯಾಘಾತವಾಗಿತ್ತು. ಇದನ್ನು ಗಮನಿಸಿದ ರಾಮಚಂದ್ರಯ್ಯ ಅವರು ಕೂಡಲೆ ಕಾರ್ಯತತ್ಪರರಾಗಿ ರಾಮಣ್ಣ ಅವರನ್ನು ಕಾರಿನಿಂದ ಇಳಿಸಿ, ನೀರುಣಿಸಿ ಕುಟುಂಬದ ಸದಸ್ಯರಿಗೆ ತಿಳಿಸಿದ್ದಾರೆ.
ಅಲ್ಲಿಯೇ ಇದ್ದ ಮತ್ತಿಬ್ಬರು ಕಾನ್ಸ್ಟೇಬಲ್ ಗಳಾದ ಲಿಂಗರಾಜು ಮತ್ತು ವೆಂಕಟೇಶ್ ಅವರ ಸಹಾಯದಿಂದ ರಾಜಾಜಿನಗರದ ರಾಮಣ್ಣ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದರಿಂದ ಹಿರಿಯ ಪ್ರಾಣ ಉಳಿದಿದೆ. ಅಲ್ಲದೆ, ಸುಲ್ತಾನಪೇಟೆಯಲ್ಲಿ ಈ ಘಟನೆಯಿಂದಾಗಿ ರಸ್ತೆ ಸಂಚಾರ ಸುಗಮವಾಗಿ ಸಾಗುವಂತೆಯೂ ನೋಡಿಕೊಂಡಿದ್ದಾರೆ. [ಅಮೆರಿಕದಲ್ಲಿ ಚಿನ್ನದ ಬೇಟೆಯಾಡಿದ ಬಿಎನ್ಎಸ್.ರೆಡ್ಡಿ]

ರಾಮಚಂದ್ರಯ್ಯ ಅವರ ನಿಸ್ವಾರ್ಥ ಸೇವಾಮನೋಭಾವ ಇತರ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಾದರಿಯಾಗಿದೆ ಮತ್ತು ಇವರು ಇಲಾಖೆಗೆ ಆಸ್ತಿಯಾಗಿದ್ದಾರೆ. ಇವರ ಕರ್ತವ್ಯನಿಷ್ಠೆ, ಪ್ರಾಮಾಣಿಕತೆ ಮತ್ತು ಸಮಯಪ್ರಜ್ಞೆ ಶ್ಲಾಘನೀಯ ಎಂದು ಹೆಚ್ಚುವರಿ ಆಯುಕ್ತ ಎಂಎ ಸಲೀಂ ಸನ್ಮಾನಿಸಿ ಹೇಳಿದರು.
ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಸಂಚಾರಿ ಪೊಲೀಸ್ ಇಲಾಖೆ ಈ ರೀತಿ ಪೊಲೀಸರ ಕರ್ತವ್ಯನಿಷ್ಠೆಯನ್ನು ಗುರುತಿಸಿ ಅವರನ್ನು ಗೌರವಿಸುತ್ತ ಬಂದಿರುವುದು ನಿಜಕ್ಕೂ ಪ್ರಶಂಸನೀಯ. ಹಾಗೆಯೆ, ಸಂಚಾರಿ ನಿಮಯಗಳನ್ನು ಗಾಳಿಗೆ ತೂರುತ್ತಿರುವ ವಾಹನ ಚಾಲಕರನ್ನು ಕೂಡ ಅಷ್ಟೇ ನಿಯತ್ತಿನಿಂದ ಶಿಕ್ಷಿಸಲು ಎಂಬುದೂ ಸಾರ್ವಜನಿಕರ ಆಶಯವಾಗಿದೆ.












Click it and Unblock the Notifications