ಬೆಂಗಳೂರು ಮಾನ ಹರಾಜು ಹಾಕುತ್ತಿದೆ ವರ್ತೂರು ನೊರೆ!
ಬೆಂಗಳೂರು, ಜನವರಿ 06 : ಹದಿನಾಲ್ಕನೇ ಪ್ರವಾಸಿ ಭಾರತೀಯ ದಿವಸ ಸಮ್ಮೇಳನದಲ್ಲಿ ಭಾಗಿಯಾಗಲು ದೇಶವಿದೇಶಗಳಿಂದ ಗಣ್ಯರು ಬೆಂಗಳೂರಿಗೆ ಬರುತ್ತಿದ್ದರೆ, ಅವರನ್ನು ಸ್ವಾಗತಿಸಲು 'ಜಗತ್ಪ್ರಸಿದ್ಧ' ವರ್ತೂರಿನ ಕೆರೆ ವಿಷಯುಕ್ತ ನೊರೆ ತುಂಬಿಕೊಂಡು ಸಿದ್ಧವಾಗಿದೆ.
ಕಳೆದೊಂದು ವಾರದಿಂದ ವರ್ತೂರಿನ ಕೆರೆ ವಿಷಯುಕ್ತ ನೊರೆಯನ್ನು ರಸ್ತೆ, ರಸ್ತೆಯಲ್ಲಿ ಸಂಚರಿಸುವ ವಾಹನಗಳು, ಪಾದಚಾರಿಗಳು, ಸುತ್ತಾಡುವ ನಾಗರಿಕರ, ಹತ್ತಿರದಲ್ಲಿರುವ ನಿವಾಸಿಗಳ ಮೇಲೆಲ್ಲ ಚೆಲ್ಲಾಡುತ್ತಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮ್ಮೇಳನವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದರೂ ಬೆಂಗಳೂರಿನ ಗೌರವವನ್ನು ಹರಾಜು ಹಾಕುತ್ತಿರುವ ವರ್ತೂರು ಕೆರೆಯನ್ನು ಕರ್ನಾಟಕ ಸರಕಾರ ನಿರ್ಲಕ್ಷಿಸಿದೆ ಎಂದು 'ವೈಟ್ ಫೀಲ್ಡ್ ರೈಸಿಂಗ್' ಸಂಘಟನೆ ತರಾಟೆಗೆ ತೆಗೆದುಕೊಂಡಿದೆ. [ಬೆಂಗಳೂರಿನ ಆತಿಥ್ಯದಲ್ಲಿ 14ನೇ ಪ್ರವಾಸಿ ಭಾರತೀಯ ದಿವಸ]
ವರ್ಷದುದ್ದಕ್ಕೂ ವರ್ತೂರು ಮತ್ತು ಬೆಳ್ಳಂದೂರು ಕೆರೆಗಳಿಂದ ಆಗುತ್ತಿರುವ ವಾಯುಮಾಲಿನ್ಯ, ಅದರಿಂದ ಸಂಕಷ್ಟಕ್ಕೀಡಾಗಿರುವ ಜನರ ಅಳಲನ್ನು ವೈಟ್ ಫೀಲ್ಡ್ ರೈಸಿಂಗ್ ಸಂಸ್ಥೆ ಎತ್ತಿ ಹಿಡಿಯುತ್ತಲೇ ಇದೆ.
"ವರ್ತೂರು ಕೆರೆಯ ವಿಷಕಾರಕ ನೊರೆ, ಪ್ರವಾಸಿ ಭಾರತೀಯ ದಿವಸದ ಶೋಟೈಮ್" ಎಂದು ಟ್ವಿಟ್ಟಿಗರೊಬ್ಬರು, ಪ್ರವಾಸಿ ಭಾರತೀಯ ದಿವಸದ ಜಾಹೀರಾತಿನ ಮುಂದೆ ನರ್ತಿಸುತ್ತಿರುವ ನೊರೆಯ ಚಿತ್ರ ಹಾಕಿದ್ದಾರೆ.
ಪ್ರವಾಸಿ ಭಾರತೀಯ ದಿವಸ ಸಮ್ಮೇಳನದ ಪ್ರಯುಕ್ತ, ಇದರ ಉಸ್ತುವಾರಿ ವಹಿಸಿರುವ ಬೃಹತ್ ಕೈಗಾರಿಕೆ ಸಚಿವ ಆರ್ ವಿ ದೇಶಪಾಂಡೆ ಅವರು, ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿ ಮಾಡಿ "ಇಡೀ ಬೆಂಗಳೂರು ನಗರ ಸುಂದರವಾಗಿ ಕಾಣಿಸಬೇಕು" ಎಂದು ಫರ್ಮಾನು ಹೊರಡಿಸಿದ್ದಾರೆ.
ಆದರೆ, ಇದರ ಜವಾಬ್ದಾರಿ ತೆಗೆದುಕೊಳ್ಳಬೇಕಿದ್ದ ಬಿಡಿಎ ಮತ್ತು ಬಿಬಿಎಂಪಿ ಅಧಿಕಾರಿಗಳು, ಪ್ರವಾಸಿ ಭಾರತೀಯ ದಿವಸ ನಡೆಯಲಿರುವ, ತುಮಕೂರು ರಸ್ತೆಯಲ್ಲಿರುವ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದ ಸುತ್ತಮುತ್ತ ಎಲ್ಲವನ್ನೂ ಸುಂದರವಾಗಿಸಿದ್ದಾರೆ.