ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ ಜಾರಿಗೆ ಮೊದಲ ಹೆಜ್ಜೆ
ಬೆಂಗಳೂರು, ಫೆಬ್ರವರಿ 26 : ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ ಜಾರಿಗೊಳಿಸಲು ಮೊದಲ ಹೆಜ್ಜೆ ಇಡಲಾಗಿದೆ. ರೈಲ್ವೆ ಯೋಜನೆಗೆ ಬೇಕಾದ ಭೂಮಿ, ನೀಡಬೇಕಾದ ಪರಿಹಾರ ಮುಂತಾದವುಗಳ ಸಮೀಕ್ಷೆ ನಡೆಸಲು ಟೆಂಡರ್ ಕರೆಯಲಾಗಿದೆ.
ಕರ್ನಾಟಕ ರೈಲ್ವೆ ಮೂಲಸೌಲಭ್ಯ ಅಭಿವೃದ್ಧಿ ನಿಗಮ ಮುಚ್ಚಿದ ಲಕೋಟೆಯಲ್ಲಿ ಟೆಂಡರ್ ಸಲ್ಲಿಕೆ ಮಾಡಲು ಜಾಹೀರಾತು ಹೊರಡಿಸಿದೆ. 24/3/2020ರೊಳಗೆ ಸಮೀಕ್ಷೆ ನಡೆಸಲು ಆಸಕ್ತಿ ಇರುವ ಸಂಸ್ಥೆಗಳು ಟೆಂಡರ್ ಸಲ್ಲಿಕೆ ಮಾಡಬಹುದಾಗಿದೆ.
ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ ಒಟ್ಟು 583 ಎಕರೆ ಭೂಮಿ ಬೇಕಿದೆ ಎಂದು ಅಂದಾಜಿಸಲಾಗಿದೆ. ಎಷ್ಟು ಭೂಮಿ ಅಗತ್ಯವಿದೆ?, ರೈಲು ಯೋಜನೆ ಮಾರ್ಗದಲ್ಲಿನ ಅಡೆತಡೆಗಳು ಏನು? ಎಂಬುದನ್ನು ಸಮೀಕ್ಷೆ ಮೂಲಕ ತಿಳಿಯಲಾಗುತ್ತದೆ.
ಯೋಜನೆ ಜಾರಿಯಾಗುವ ಪ್ರದೇಶದಲ್ಲಿರುವ 327 ಎಕರೆ ಭೂಮಿ ರೈಲ್ವೆ ಇಲಾಖೆಗೆ ಸೇರಿದೆ. 153 ಎಕರೆ ಜಾಗ ರಾಜ್ಯ ಸರ್ಕಾರಕ್ಕೆ ಸೇರಿದೆ. ಖಾಸಗಿ ವ್ಯಕ್ತಿ/ಸಂಸ್ಥೆಗಳಿಗೆ ಸೇರಿದ 103 ಎಕರೆ ಜಾಗವಿದ್ದು, ಇದನ್ನು ಸ್ವಾಧೀನ ಪಡಿಸಿಕೊಂಡರೆ ಎಷ್ಟು ಪರಿಹಾರ ನೀಡಬೇಕು? ಎಂದು ಸಮೀಕ್ಷೆ ನಡೆಸಲಾಗುತ್ತದೆ.

ಇನ್ನೂ ಒಪ್ಪಿಗೆ ಸಿಗಬೇಕಿದೆ
ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ ರೈಲ್ವೆ ಮಂಡಳಿ ಒಪ್ಪಿಗೆ ಸಿಕ್ಕಿದೆ. ಆದರೆ, ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯಿಂದ ಇನ್ನೂ ಅನುಮೋದನೆ ಬಾಕಿ ಇದೆ. ಇದರ ನಡುವೆಯೇ ಕರ್ನಾಟಕ ರೈಲ್ವೆ ಮೂಲಸೌಲಭ್ಯ ಅಭಿವೃದ್ಧಿ ನಿಗಮ ಯೋಜನೆ ಜಾರಿ ಕುರಿತು ಸಮೀಕ್ಷೆಗೆ ಟೆಂಡರ್ ಕರೆದಿದೆ.

ತಜ್ಞರ ತಂಡ ರಚನೆ
ಉಪ ನಗರ ರೈಲು ಯೋಜನೆಯನ್ನು ಕರ್ನಾಟಕ ರೈಲ್ವೆ ಮೂಲಸೌಲಭ್ಯ ಅಭಿವೃದ್ಧಿ ನಿಗಮ ಜಾರಿಗೆ ತರಲಿದೆ. ನಮ್ಮ ಮೆಟ್ರೋ ಮಾದರಿಯಲ್ಲಿ ಯೋಜನೆಗೆ ಖಾಸಗಿಯಿಂದ ಬಂಡವಾಳ ತರುವ ಆಲೋಚನೆಯಲ್ಲಿ ನಿಗಮ ಇದ್ದು, ಸಮೀಕ್ಷೆ ಬಳಿಕ ಯೋಜನೆ ಕುರಿತು ವರದಿ ನೀಡಲು ತಜ್ಞರ ಸಮಿತಿಯನ್ನು ರಚನೆ ಮಾಡಲಾಗುತ್ತದೆ.

ಎರಡು ಟೆಂಡರ್ ಆಹ್ವಾನ
ಕರ್ನಾಟಕ ರೈಲ್ವೆ ಮೂಲಸೌಲಭ್ಯ ಅಭಿವೃದ್ಧಿ ನಿಗಮ ಒಟ್ಟು 2 ಟೆಂಡರ್ ಕರೆದಿದೆ. ಮೊದಲ ಟೆಂಡರ್ನಲ್ಲಿ 62.79 ಲಕ್ಷ ವೆಚ್ಚದಲ್ಲಿ ಭೂಮಿಯ ಸಮೀಕ್ಷೆ ಹಾಗೂ ಮೂಲ ಸೌಕರ್ಯಗಳ ಗುರುತಿಸುವಿಕೆ ನಡೆಯಲಿದೆ. 1.10 ಕೋಟಿ ರೂ. ವೆಚ್ಚದಲ್ಲಿ ಬೆಸ್ಕಾಂ, ಬಿಬಿಎಂಪಿ, ಜಲಮಂಡಳಿ ಮುಂತಾದ ಸಂಸ್ಥೆಗಳಿಂದ ಪಡೆಯಬೇಕಾದ ಮೂಲ ಸೌಕರ್ಯಗಳನ್ನು ಲೆಕ್ಕಾಚಾರ ಹಾಕಿ ವರದಿ ನೀಡಲಾಗುತ್ತದೆ.

ರೈಲು ಮಾರ್ಗಗಳ ವಿವರ
ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಯ ಉದ್ದ 148.17 ಕಿ. ಮೀ.. ಬೆಂಗಳೂರು ನಗರ-ಯಲಹಂಕ-ದೇವನಹಳ್ಳಿ, ಬೈಯಪ್ಪನಹಳ್ಳಿ-ಯಶವಂತಪುರ-ಚಿಕ್ಕಬಣಾವರ, ಕೆಂಗೇರಿ-ಬೆಂಗಳೂರುಸಿಟಿ-ವೈಟ್ಪೀಲ್ಡ್ ಮಾರ್ಗದಲ್ಲಿ ಉಪ ನಗರ ರೈಲು ಸಂಚಾರ ನಡೆಸಲಿದೆ.












Click it and Unblock the Notifications