Bengaluru Suburban Rail: ಸಬ್ ಅರ್ಬನ್ ಯೋಜನೆಯ ಒಂದು ಕಾರಿಡಾರ್ ರದ್ದು
ಬೆಂಗಳೂರು, ನವೆಂಬರ್ 26: ಬೆಂಗಳೂರು ನಗರದ ಸಂಚಾರ ದಟ್ಟಣೆ ತಪ್ಪಿಸಲು ಉಪ ನಗರ ರೈಲು ಯೋಜನೆ ಸಹಾಯಕವಾಗಲಿದೆ ಎಂದು ಅಂದಾಜಿಸಲಾಗಿದೆ. ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್ಆರ್ಪಿ) ಯೋಜನೆಯನ್ನು ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತ (ಕೆ-ರೈಡ್) ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಒಟ್ಟು 4 ಕಾರಿಡಾರ್ಗಳನ್ನು ಈ ಯೋಜನೆ ಒಳಗೊಂಡಿದೆ. ಆದರೆ ಈಗ ಯೋಜನೆಯಲ್ಲಿ ಮಹತ್ವದ ಬದಲಾವಣೆಯೊಂದು ಆಗುವ ಸಾಧ್ಯತೆ ಇದೆ.
ಸಬ್ ಅರ್ಬನ್ ರೈಲು ಯೋಜನೆಯು 148 ಕಿ. ಮೀ. 4 ಕಾರಿಡಾರ್ ಹೊಂದಿದೆ. ಇದರಲ್ಲಿ ವೈಟ್ಫೀಲ್ಡ್-ಕೆಂಗೇರಿ ಸಂಪರ್ಕಿಸುವ 35 ಕಿ. ಮೀ. 'ಪಾರಿಜಾತ' ಕಾರಿಡಾರ್ ಅನ್ನು ರದ್ದುಗೊಳಿಸುವ ನಿರೀಕ್ಷೆ ಇದೆ. ಈ ಕಾರಿಡಾರ್ ನಿರ್ಮಾಣದ ಕುರಿತು ಪುನರ್ ಚಿಂತನೆ ನಡೆಸಲು ಸರ್ಕಾರ ಮುಂದಾಗಿದೆ.

43 ಕಿ. ಮೀ. ನೇರಳೆ ಮಾರ್ಗದ ನಮ್ಮ ಮೆಟ್ರೋ ವಿನ್ಯಾಸದ ಹಿನ್ನಲೆಯಲ್ಲಿ ಪಾರಿಜಾತ ಕಾರಿಡಾರ್ ನಿರ್ಮಾಣದ ಕುರಿತು ಪುನರ್ ಪರಿಶೀಲನೆ ನಡೆಯಲಿದೆ. ಮೆಟ್ರೋ ನೇರಳೆ ಮಾರ್ಗ ಚೆಲ್ಲಘಟ್ಟದಿಂದ ವೈಟ್ಫೀಲ್ಡ್ (ಕಾಡುಗೋಡಿ) ಸಂಪರ್ಕಿಸುತ್ತದೆ.
ಸಚಿವರ ಸಭೆ: ಕೆಲವು ದಿನಗಳ ಹಿಂದೆ ರೈಲ್ವೆ ಖಾತೆ ರಾಜ್ಯ ಸಚಿವ, ತುಮಕೂರು ಸಂಸದ ವಿ. ಸೋಮಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಾರಿಜಾತ ಉಪ ನಗರ ರೈಲು ಯೋಜನೆ ಕೈ ಬಿಡಲು ತೀರ್ಮಾನಿಸಲಾಗಿದೆ. ಈ ಸಭೆಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಖಾತೆ ಸಚಿವ ಎಂ. ಬಿ. ಪಾಟೀಲ ಸಹ ಪಾಲ್ಗೊಂಡಿದ್ದರು.
'ಪಾರಿಜಾತ' ಉಪ ನಗರ ರೈಲು ಯೋಜನೆಗಿಂತ ಚಿಕ್ಕಬಣಾವರ-ತುಮಕೂರು ವಯಾ ದಾಬಸ್ಪೇಟೆ, ಚಿಕ್ಕಬಣಾವರ-ಮಾಗಡಿ, ರಾಜನಕುಂಟೆ-ಗೌರಿಬಿದನೂರು ವಯಾ ದೊಡ್ಡಬಳ್ಳಾಪುರ ಪರ್ಯಾಯ ಮಾರ್ಗ ನಿರ್ಮಾಣಕ್ಕೆ ಚಿಂತನೆ ನಡೆದಿದೆ. ಇದು ಉಪ ನಗರ ರೈಲು ಯೋಜನೆ ಸಂಪರ್ಕಿಸುವಂತೆಯೂ ಇರಲಿದೆ.
ಈ ಪರ್ಯಾಯ ಮಾರ್ಗಗಳು ನಗರದ ಹೊರ ವಲಯದ ಸಂಪರ್ಕಕ್ಕೆ ಕೊಡುಗೆ ನೀಡಬೇಕು ಮತ್ತು ಕ್ವೀನ್ ಸಿಟಿಗೆ ಸಂಪರ್ಕ ಕಲ್ಪಿಸುವಂತೆ ಇರಬೇಕು ಎಂಬ ಚರ್ಚೆ ನಡೆದಿದೆ. 2020ರಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್ಆರ್ಪಿ)ಗೆ ಒಪ್ಪಿಗೆ ನೀಡಲಾಗಿದೆ. ಒಟ್ಟು ಎರಡು ಹಂತದಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ.
24 ಕಿ. ಮೀ. ಮಲ್ಲಿಗೆ ಕಾರಿಡಾರ್ ಬೈಯಪ್ಪನಹಳ್ಳಿ-ಚಿಕ್ಕಬಣಾವರ, 46 ಕಿ. ಮೀ. ಕನಕ ಕಾರಿಡಾರ್ ಹೀಗಲಿಗೆ-ರಾಜನಕುಂಟೆ, 41 ಕಿ. ಮೀ. ಸಂಪಿಗೆ ಕಾರಿಡಾರ್ ಕೆಎಸ್ಆರ್ ಬೆಂಗಳೂರು-ದೇವನಹಳ್ಳಿ ವಯಾ ಯಲಹಂಕ ಮತ್ತು ವಿಮಾನ ನಿಲ್ದಾಣ ಮತ್ತು ಪಾರಿಜಾತ ಕಾರಿಡಾರ್ ಎಂದು ಯೋಜನೆಯನ್ನು ವಿಭಾಗ ಮಾಡಲಾಗಿತ್ತು. ಈಗ ಎರಡು ಕಾರಿಡಾರ್ ಕಾಮಗಾರಿ ಆರಂಭವಾಗಿದ್ದು, ಇನ್ನೆರಡು ಟೆಂಡರ್ ಹಂತದಲ್ಲಿದೆ.
ಸಬ್ ಅರ್ಬನ್ ರೈಲು ಯೋಜನೆಯಲ್ಲಿ 'ಪಾರಿಜಾತ' ಕಾರಿಡಾರ್-3 ಆಗಿತ್ತು. 21 ಅಕ್ಟೋಬರ್ 2020ರಲ್ಲಿ ಕಾರಿಡಾರ್ ನಿರ್ಮಾಣಕ್ಕೆ ಒಪ್ಪಿಗೆ ಸಿಕ್ಕಿತ್ತು. 35 ಕಿ. ಮೀ. ಮಾರ್ಗದ ಈ ಕಾರಿಡಾರ್ 13 ನಿಲ್ದಾಣಗಳನ್ನು ಹೊಂದಿತ್ತು. ರಾಮನಗರ, ಮೈಸೂರು, ಬಂಗಾರಪೇಟೆ, ಕೆಜಿಎಫ್ ತನಕ ವಿಸ್ತರಣೆ ಮಾಡುವಂತೆ ಈ ಮಾರ್ಗ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿತ್ತು.
ಈ ಕಾರಿಡಾರ್ನಲ್ಲಿ ಕೆಂಗೇರಿ, ಆರ್ವಿಸಿಇ, ಜ್ಞಾನ ಭಾರತಿ, ನಾಯಂಡಹಳ್ಳಿ, ಕೃಷ್ಣದೇವರಾಯ, ಜಗಜೀವನ್ರಾಮ್ ನಗರ, ಮೆಜೆಸ್ಟಿಕ್, ಕುಮಾರ ಪಾರ್ಕ್, ಕಂಟೋನ್ಮೆಂಟ್, ಕಂಟೋನ್ಮೆಂಟ್ನಿಂದ ವೈಟ್ಫೀಲ್ಡ್ ತನಕ ನಿಲ್ದಾಣಗಳು ಬರಲಿದೆ ಎಂದು ಯೋಜನೆ ರೂಪಿಸಲಾಗಿತ್ತು.
ಜೂನ್ 2022ರಲ್ಲಿ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್ಆರ್ಪಿ) ಯೋಜನೆಗೆ ಶಂಕು ಸ್ಥಾಪನೆ ಮಾಡಿದ್ದಾರೆ. 40 ತಿಂಗಳಿನಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿತ್ತು. ಕರ್ನಾಟಕ ಸರ್ಕಾರ ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತ (ಕೆ-ರೈಡ್) ಮೂಲಕ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ.












Click it and Unblock the Notifications