Bengaluru Suburban Rail: ಬೆಂಗಳೂರು ಉಪನಗರ ರೈಲು ಯೋಜನೆ ವಿಸ್ತರಣೆಗೆ ನಿರ್ಧಾರ, ಮಾರ್ಗಗಳ ವಿವರ ತಿಳಿಯಿರಿ
ಬೆಂಗಳೂರು, ಜನವರಿ, 28: ಬೆಂಗಳೂರು ಮಹಾನಗರ ದಿನದಿಂದ ದಿನಕ್ಕೆ ಸಾರಿಗೆ ವಿಭಾಗದಲ್ಲಿ ದೊಡ್ಡ ಮಟ್ಟದ ಅಭಿವೃದ್ಧಿಯನ್ನು ಕಾಣುತ್ತಲೇ ಇದೆ. ಇನ್ನು ಇದೀಗ ಸಾರ್ವಜನಿಕರ ಬೇಡಿಕೆಗೆ ಮಣಿದು 148.17 ಕಿ.ಮೀ. ಉದ್ದದ ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್ಆರ್ಪಿ)ಯನ್ನು ಸರಿಸುಮಾರು 5.5 ಕಿಲೋ ಮೀಟರ್ ವಿಸ್ತರಣೆ ಮಾಡಲು ನಿರ್ಧಾರ ಮಾಡಲಾಗಿದೆ.
ರಾಜನಕುಂಟೆ-ಹೀಲಳಿಗೆ (ಕಾರಿಡಾರ್ 4) ಮತ್ತು ವೈಟ್ಫೀಲ್ಡ್ನಿಂದ ಕೆಂಗೇರಿ (ಕಾರಿಡಾರ್ 2)ವರೆಗೆ ರಾಜ್ಯ ಸರ್ಕಾರ ಈಗಾಗಲೇ ಒಪ್ಪಿಗೆ ನೀಡಿದ್ದು, ಸರ್ಕಾರದ ಅನುಮೋದನೆಯನ್ನು ಕೇಳಲಾಗಿದೆ ಎಂದು ತಿಳಿದುಬಂದಿದೆ.

ರಾಜ್ಯ ಸರ್ಕಾರದ ನಗರ ಭೂ ಸಾರಿಗೆ ನಿರ್ದೇಶನಾಲಯದ (DULT) ಈ ಪ್ರಸ್ತಾವನೆಯನ್ನು ಕರ್ನಾಟಕ ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಎಂಟರ್ಪ್ರೈಸಸ್ (K-RIDE) ಅನುಷ್ಠಾನಗೊಳಿಸುವ ನೋಡಲ್ ಏಜೆನ್ಸಿಯು ಅಂಗೀಕರಿಸಿದೆ. ಈಗ ಅದನ್ನು ನೈಋತ್ಯ ರೈಲ್ವೆ (SWR) ಮಂಡಳಿಯ ಒಪ್ಪಿಗೆಗಾಗಿ ಕಳುಹಿಸಲಾಗುವುದು.
ಹೀಳಲಿಗೆ ಕಾರಿಡಾರ್ (ಕನಕ ಲೈನ್) ಅನ್ನು ಚಂದಾಪುರದವರೆಗೆ ಸುಮಾರು ಒಂದು ಕಿಲೋ ಮೀಟರ್ ವಿಸ್ತರಿಸಲು ಪ್ರಸ್ತಾಪಿಸಿದೆ. ಕೆಂಗೇರಿ (ಪಾರಿಜಾತ ಲೈನ್)ಮಾರ್ಗವನ್ನು ಚಲ್ಲಘಟ್ಟ ಕಡೆಗೆ ವಿಸ್ತರಿಸಲಾಗುವುದು ಎಂದು ಕೆ-ರೈಡ್ ಮೂಲಗಳು ತಿಳಿಸಿವೆ. ಕಾರ್ಯಸಾಧ್ಯತೆಯ ಅಧ್ಯಯನದ ನಂತರವೇ ನಿಖರವಾದ ದೂರ ತಿಳಿಯಲಿದೆ. ಸದ್ಯ ಸುಮಾರು 4.5 ಕಿಲೋ ಮೀಟರ್ಗೆ ಇದನ್ನು ಪ್ರಸ್ತಾಪಿಸಲಾಗಿದೆ ಎಂದು DULT ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ರೈಲ್ವೆ ಹೋರಾಟಗಾರ ಪೃಥ್ವಿನ್ ರೆಡ್ಡಿ ಮಾತನಾಡಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ನಾರಾಯಣಸ್ವಾಮಿ ಅವರು ಇತ್ತೀಚೆಗೆ ಆನೇಕಲ್, ಹೀಳಲಿಗೆ ಮತ್ತು ಹುಸ್ಕೂರು ರೈಲು ನಿಲ್ದಾಣಗಳಿಗೆ ಭೇಟಿ ನೀಡಿದಾಗ ಉಪನಗರ ಮಾರ್ಗವನ್ನು ವಿಸ್ತರಣೆ ಮಾಡುವಂತೆ ಸ್ಥಳೀಯರು ಒತ್ತಾಯಿಸಿದರು ಎಂದು ತಿಳಿಸಿದರು. 46.88-ಕಿಮೀ ಕನಕ ಮಾರ್ಗದ ಗುತ್ತಿಗೆಯನ್ನು ಇತ್ತೀಚೆಗೆ ಲಾರ್ಸನ್ ಮತ್ತು ಟೂರ್ಬೋ ಪ್ರೈವೇಟ್ ಲಿಮಿಟೆಡ್ಗೆ ನೀಡಲಾಯಿತು.
"ಈ ಪ್ರಸ್ತಾವಿತ ವಿಸ್ತರಣೆಗಳು 452-ಕಿಲೋ ಮೀಟರ್ ಉದ್ದದ ಹಂತ-2 ಯೋಜನೆಯಲ್ಲಿ ಕಾಣಿಸಿಕೊಂಡಿವೆ. ನಾವು ಕೈಗೊಳ್ಳಲು ಬಯಸಿದ ಪೂರ್ವ ಕಾರ್ಯಸಾಧ್ಯತೆಯ ಅಧ್ಯಯನವನ್ನು ನವೆಂಬರ್ 2023ರಲ್ಲಿ SWR ತಿರಸ್ಕರಿಸಿದೆ. ನಾವು ಅದೇ ಪ್ರಸ್ತಾವನೆಯನ್ನು ಡಿಸೆಂಬರ್ 28, 2023ರಂದು ನೈರುತ್ಯ ರೈಲ್ವೆಗೆ ಸಲ್ಲಿಸಿದ್ದೇವೆ. ನಮ್ಮ ವಿನಂತಿಯನ್ನು ಮರುಪರಿಶೀಲಿಸುವಂತೆ ಕೇಳಿಕೊಳ್ಳುತ್ತೇವೆ ಎಂದು ಕೆ- ರೈಡ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು ಅಂತಾ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ನೈರುತ್ಯ ರೈಲ್ವೆ (SWR) ಮತ್ತೊಮ್ಮೆ ಪ್ರಸ್ತಾವನೆಯನ್ನು ತಿರಸ್ಕರಿಸಿದರೆ, ನಾವು ಅವರ ಮೂಲಕ ರೈಲ್ವೆ ಮಂಡಳಿಗೆ ಹೊಸ ಪ್ರಸ್ತಾವನೆಯನ್ನು ಸಲ್ಲಿಸುತ್ತೇವೆ. ಈ ಹೆಚ್ಚುವರಿ 4.5 ಕಿಲೋ ಮೀಟರ್ ವಿಸ್ತರಣೆಗೆ ರಾಜ್ಯದಿಂದ ಒಪ್ಪಿಗೆ ಸಿಕ್ಕಿದ್ದು, ಕೇಂದ್ರದಿಂದ ಅನುಮೋದನೆ ಸಿಗಬೇಕಾಗಿದೆ ಎಂದು ತಿಳಿಸಿದರು.












Click it and Unblock the Notifications