ಕೈಲಾಸ ಮಾನಸ ಯಾತ್ರಿಗಳು ಸುರಕ್ಷಿತ: ಶಂಕರ ಟ್ರಾವೆಲ್ಸ್ ನಿಂದ ಅಭಯ
ಬೆಂಗಳೂರು, ಜುಲೈ 03: ಕೈಲಾಸ ಮಾನಸ ಸರೋವರ ಯಾತ್ರೆಗೆ ಕರ್ನಾಟಕದಿಂದ 230 ಜನರನ್ನು ತನ್ನ ಟ್ರಾವೆಲ್ ಏಜೆನ್ಸಿ ಮೂಲಕ ಕಳಿಸಿದ್ದ ಶಂಕರ ಟ್ರಾವೆಲ್ಸ್ ಯಾತ್ರಿಕರು ಸಿಲುಕಿಕೊಂಡಿರುವ ಕುರಿತು ಪ್ರತಿಕ್ರಿಯೆ ನೀಡಿದೆ.
'230 ಜನರನ್ನು ನಾನು ನೇಪಾಳದ ಮೂಲಕ ಕೈಲಾಸ ಮಾನಸಸರೋವರ ಯಾತ್ರೆಗೆ ಕಳಿಸಿದ್ದೇವೆ. ಅವರಲ್ಲಿ 70 ಜನರು ಸಿಮಿಕೋಟ್ ನಲ್ಲಿ ಮತ್ತು 40 ಜನ ಹಿಲ್ಸಾ ಎಂಬಲ್ಲಿ ಇದ್ದಾರೆ. ಅವರ ರಕ್ಷಣಾ ಕಾರ್ಯ ನಡೆಯುತ್ತಿದೆ. ಭೂ ಮಾರ್ಗವಾಗಿ ಸಾಗಿದ್ದ 120 ಜನರು ಕಠ್ಮಂಡುವಿಗೆ ವಾಪಸ್ಸಾಗುತ್ತಿದ್ದಾರೆ. ಯಾವುದೇ ಆತಂಕ ಬೇಡ' ಎಂದು ಶಂಕರ ಟ್ರಾವೆಲ್ಸ್ ನ ಮ್ಯಾನೇಜರ್ ಯಾಮಿನಿ ತಿಳಿಸಿದ್ದಾರೆ.
ನೇಪಾಳದ ಸಿಮಿಕೋಟ್ ನಲ್ಲಿ ನಾಲ್ಕು ದಿನಗಳಿಂದ ಸಿಲುಕಿಕೊಂಡಿರುವ ಕರ್ನಾಟಕದ ಸುಮಾರು 200 ಮಂದಿ ಯಾತ್ರಿಕರು ಯಾವುದೇ ರೀತಿಯ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಪ್ರತಿಕೂಲ ಹವಾಮಾನದಿಂದಾಗಿ ಯಾತ್ರೆಗೆ ತೆರಳಾಲಗದೆ ಅವರು, ಶಿಬಿರವೊಂದರಲ್ಲಿ ಬೀಡುಬಿಟ್ಟಿದ್ದಾರೆ. ಮೈಸೂರು, ರಾಮನಗರ, ಚನ್ನಪಟ್ಟಣ ನಿವಾಸಿಗಳೇ ಇಲ್ಲಿ ಹೆಚ್ಚಾಗಿದ್ದು, ಅವರಿಗೆ ಆಹಾರವನ್ನೂ ಒದಗಿಸುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ.

ಆದರೆ ನೇಪಾಳದಲ್ಲಿರುವ ಭಾರತೀಯ ರಾಯಭಾರ ಕಚೇರಿ ಇಲ್ಲಿನ ಯಾತ್ರಿಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಈಗಾಗಲೇ ತನ್ನ ಸಿಬ್ಬಂದಿಯನ್ನು ಕಳಿಸಿ ರಕ್ಷಣಾ ಕಾರ್ಯ ನಡೆಸುತ್ತಿದೆ. ಯಾತ್ರಿಕರೆಲ್ಲರೂ ಸುರಕ್ಷಿತವಾಗಿದ್ದಾರೆಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅಭಯ ನೀಡಿದ್ದಾರೆ.












Click it and Unblock the Notifications