ಪ್ಯಾರಿಸ್ ಶೃಂಗಸಭೆಯಲ್ಲಿ ಗಾರ್ಡನ್ ಸಿಟಿಯ ಸ್ಕ್ರಾಪ್ ಡೀಲರ್
ಬೆಂಗಳೂರು, ಡಿ.1: ಫ್ರಾನ್ಸ್ನ ರಾಜಧಾನಿ ಪ್ಯಾರಿಸ್ನಲ್ಲಿ ನಡೆಯುತ್ತಿರುವ ಹವಾಮಾನ ಬದಲಾವಣೆ ಶೃಂಗಸಭೆಯಲ್ಲಿ ಗಾರ್ಡನ್ ಸಿಟಿ ಬೆಂಗಳೂರಿನ ಚಿಂದಿ ಆಯುವ ಡೀಲರ್ ರೊಬ್ಬರು ಭಾಗವಹಿಸಿದ್ದಾರೆ. ಈ ಜಾಗತಿಕ ಸಮಾವೇಶದಲ್ಲಿ ಜಯನಗರದ ಮನ್ಸೂರ್ ಅಹ್ಮದ್ ಅವರು ತಮ್ಮ ವಿಚಾರ ವಿನಿಮಯ ಮಾಡಿಕೊಳ್ಳಲಿದ್ದಾರೆ.
ತ್ಯಾಜ್ಯ ನಿರ್ವಹಣೆಯಲ್ಲಿ ಸೋತು ಗಾರ್ಡನ್ ಸಿಟಿ ಹೋಗಿ ಗಾರ್ಬೇಜ್ ಸಿಟಿಯಾಗಿರುವ ಕಾಲದಲ್ಲಿ ಬೆಂಗಳೂರಿನ ಚಿಂದಿ ಆಯುವ ವ್ಯಕ್ತಿಯೊಬ್ಬ ಜಾಗತಿಕ ಮಟ್ಟದ ಸಮಾವೇಶದಲ್ಲಿ ಪಾಲ್ಗೊಂಡಿರುವುದು ಹೆಮ್ಮೆಯ ವಿಷಯ. ಈ ಸಮಾವೇಶದಲ್ಲಿ ತ್ಯಾಜ್ಯ ನಿರ್ವಹಣೆ, ತ್ಯಾಜ್ಯ ಬೇರ್ಪಡಿಸುವಿಕೆ ಹಾಗೂ ನಿರ್ವಹಣೆ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಳ್ಳಲಿದ್ದಾರೆ.
ಕನ್ನಡ, ತಮಿಳು, ಹಿಂದಿ ಕಲಿತಿರುವ ಮನ್ಸೂರ್ ಅವರು ಮಾಡುವ ಭಾಷಣವನ್ನು ಭಾಷಾಂತರ ಮಾಡಲಾಗುತ್ತದೆ. ಭಾರತದಿಂದ ಈ ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ಇಬ್ಬರಿಗೆ ಆಹ್ವಾನವಿತ್ತು. ಹಸಿರು ದಳ ಸರ್ಕಾರೇತರ ಸಂಸ್ಥೆ ಮನ್ಸೂರ್ ಅವರನ್ನು ಆಯ್ಕೆ ಮಾಡಿ ದಕ್ಷಿಣ ಭಾರತದ ಪ್ರತಿನಿಧಿಯಾಗಿ ಪ್ಯಾರೀಸ್ ಗೆ ಕಳಿಸಿದ್ದಾರೆ.

ಐದನೇ ತರಗತಿ ತನಕ ಸರ್ಕಾರಿ ಶಾಲೆಯಲ್ಲಿ ಓದಿರುವ ಮನ್ಸೂರ್ ಅವರು ಈ ವೃತ್ತಿ ಆರಿಸಿಕೊಂಡಾಗ ಇನ್ನೂ 7 ವರ್ಷ ವಯಸ್ಸಾಗಿತ್ತು. ಆರು ಜನ ಸೋದರಿಯರು ಹಾಗೂ ಇಬ್ಬರು ಸೋದರರನ್ನು ಸಾಕುವ ಹೊಣೆ ಹೊತ್ತುಕೊಂಡರು. ಈಗ ಸ್ಕ್ರಾಪ್ ಡೀಲರ್ ಆಗಿ ಜಾಗತಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ. ತಮ್ಮ ಮಕ್ಕಳನ್ನು ಜೆಪಿ ನಗರದ ಆಕ್ಸ್ ಫರ್ಡ್ ಶಾಲೆಗೆ ಸೇರಿಸಿರುವ ಮನ್ಸೂರ್ ಗೆ ಮಕ್ಕಳು ಉತ್ತಮ ಶಿಕ್ಷಣ ಹೊಂದಿ ತಮ್ಮ ಕನಸು ನನಸು ಮಾಡಿಕೊಂಡರೆ ಸಾಕು ಎಂಬ ಆಸೆಯಿದೆ.
ತ್ಯಾಜ್ಯ ನಿರ್ವಹಣೆ ಬಗ್ಗೆ ಆತನಿಗೆ ಸಾಕಷ್ಟು ಜ್ಞಾನವಿದೆ. ಸರಿ ಸುಮಾರು ಶೇ 75ಕ್ಕೂ ಅಧಿಕ ಗ್ರಾಹಕರಿಗೆ ತ್ಯಾಜ್ಯ ಬೇರ್ಪಡಿಸುವಿಕೆಯನ್ನು ಕಲಿಸಿದ್ದಾರೆ. ಸ್ಕ್ರಾಪ್ ಡೀಲ್ ಜೊತೆಗೆ ಚಿಂದಿ ಆಯುವ ಹುಡುಗರಿಗೆ ಕೆಲಸ ಕೊಟ್ಟು ಅವರ ಜೀವನಕ್ಕೆ ಆಧಾರವಾಗಿದ್ದಾರೆ ಎಂದು ಅಲೈಯನ್ಸ್ ಆಫ್ ಇಂಡಿಯನ್ ವೇಸ್ಟ್ ಪಿಕರ್ಸ್ ನ ಸಂಚಾಲಕರಾದ ಕಬೀರ್ ಅರೋರಾ ಹೇಳಿದ್ದಾರೆ.
ಮನ್ಸೂರ್ ಅವರ ಜಯನಗರದ 168ನೇ ಬಿಬಿಎಂಪಿ ವಾರ್ಡ್ ನಲ್ಲಿ ಕಾರ್ಯ ನಿರ್ವಹಿಸುವ ತಂಡ(ಘನ ತ್ಯಾಜ್ಯ ಸಂಗ್ರಹ ಕೇಂದ್ರ) ಪ್ರತಿ ತಿಂಗಳಿಗೆ ಸುಮಾರು 10 ರಿಂದ 12 ಟನ್ ಗಳಷ್ಟು ತ್ಯಾಜ್ಯ ನಿರ್ವಹಣೆ ಮಾಡುತ್ತದೆ. ಅಪಾರ್ಟ್ಮೆಂಟ್ ಗಳಿಂದ 3,000 ರು ನಂತೆ ತ್ಯಾಜ್ಯ ಖರೀದಿಸುವುದು ನಡೆಯುತ್ತದೆ. ದಿನವೊಂದಕ್ಕೆ 120 ಕೆಜಿ ತ್ಯಾಜ್ಯ ಸಂಗ್ರಹ ಮಾಡಲಾಗುತ್ತದೆ. ಈಗ ಇಂಡಿಯನ್ ಯೂಥ್ ಕ್ಲೈಮ್ಯಾಟ್ ನೆಟ್ವರ್ಕ್ ನ ಭಾಗವಾಗಿ ಮನ್ಸೂರ್ ಅವರು ಮೂರು ನಿಮಿಷಗಳ ಕಾಲ ಜಾಗತಿಕ ಸಮಾವೇಶದಲ್ಲಿ ಮಾತನಾಡಲಿದ್ದಾರೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications