ಬೆಂಗಳೂರಿನ ಈ ಪ್ರಮುಖ 100 ರಸ್ತೆಗಳ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್!
ಬೆಂಗಳೂರಿನ ಗ್ರೇಟರ್ ಬೆಂಗಳೂರು ಆಡಳಿತ ವ್ಯಾಪ್ತಿಯಲ್ಲಿ ಪ್ರಮುಖ 100 ರಸ್ತೆಗಳನ್ನು ಗುರುತಿಸಿ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವ ಸಲುವಾಗಿ ಯೋಜನೆ ರೂಪಿಸಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ನಗರದಲ್ಲಿ ರಸ್ತೆ, ಪಾದಚಾರಿ ಮಾರ್ಗಗಳ ಅಭಿವೃದ್ಧಿ ಹಾಗೂ ಸ್ಬಚ್ಛತೆಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ವೇಳೆ ಮಾತನಾಡಿದ ಅವರು, ನಗರದಲ್ಲಿ ರಸ್ತೆಗಳನ್ನು ಸುಸ್ಥಿತಿಯಲ್ಲಿಡುವುದು ನಮ್ಮ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ 5 ನಗರ ಪಾಲಿಕೆಗಳಲ್ಲಿ ವಲಯಕ್ಕೆ 10 ರಸ್ತೆಗಳಂತೆ 10 ವಲಯಗಳಿಗೆ ಪ್ರಮುಖ 100 ರಸ್ತೆಗಳನ್ನು ಗುರುತಿಸಿ ಆ ರಸ್ತೆಗಳನ್ನು ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲು ಸೂಚನೆ ನೀಡಿದ್ದಾರೆ.
ಸಾರ್ವಜನಿಕರ ಅಭಿಪ್ರಾಯದ ಆಧಾರದ ಮೇಲೆ ರಸ್ತೆಗಳನ್ನು ಗುರುತಿಸಿ, ರಸ್ತೆ ಗುಂಡಿಗಳು, ಪಾದಚಾರಿ ಮಾರ್ಗಗಳ ಸ್ಥಿತಿ, ಬಸ್ ನಿಲ್ದಾಣಗಳ ಸ್ಥಿತಿ, ಬೀದಿ ದೀಪಗಳು, ವಾಹನ ಸಂಚಾರದ ದಟ್ಟಣೆ, ರಸ್ತೆಗಳಲ್ಲಿ ನೀರು ನಿಲ್ಲುವುದು, ಕಸ ಸುರಿಯುವ ಸ್ಥಳಗಳು ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಿ ಅವುಗಳನ್ನು ನಿವಾರಣೆ ಮಾಡಬೇಕು. ಈ ಸಂಬಂಧ ಸಮಗ್ರ ನಿರ್ವಹಣೆಯ ಹೊಣೆಗಾರಿಕೆಯನ್ನು ವಲಯ ಮುಖ್ಯ ಎಂಜಿನಿಯರ್ಗಳಿಗೆ ವಹಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ.

ಕೆಲಸ ಪ್ರಾರಂಭಕ್ಕೂ ಮುನ್ನ ಜಿಬಿಎ ಅನುಮತಿ ಕಡ್ಡಾಯ: ಇನ್ನು ಬೆಂಗಳೂರಿನ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ರಸ್ತೆಗಳನ್ನು ದುರಸ್ತಿ ಕಾರ್ಯ ನಡೆಸಲಾಗಿರುತ್ತದೆ. ಆ ಬಳಿಕ ವಿವಿಧ ಸಂಸ್ಥೆಗಳು ಅದನ್ನು ಅಗೆದು ರಸ್ತೆ ಹಾಳು ಮಾಡುತ್ತಾರೆ. ಈ ಸಂಬಂಧ ಜಲಮಂಡಳಿ, ಬೆಸ್ಕಾಂ ಸೇರಿದಂತೆ ಯಾವುದೇ ಇಲಾಖೆಯಾಗಲಿ ಪ್ರಮುಖ ರಸ್ತೆಗಳಲ್ಲಿ ಕೆಲಸ ಕೈಗೊಳ್ಳುವ ಮೊದಲು ಜಿಬಿಎಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕೆಂದು ನಿರ್ದೇಶನ ನೀಡಿದ್ದಾರೆ.
ಮೇಲ್ವಿಚಾರಣೆಗಾಗಿ ವಾರಕ್ಕೊಮ್ಮೆ ಸಭೆ: ಯೋಜನೆಗಳ ಮೇಲ್ವಿಚಾರಣೆಗಾಗಿ ಯೋಜನಾ ವಿಭಾಗದ ಮುಖ್ಯ ಎಂಜಿನಿಯರರ ಅಧ್ಯಕ್ಷತೆಯಲ್ಲಿ ವಾರಕ್ಕೊಮ್ಮೆ ಸಭೆ ನಡೆಸಬೇಕು. ಅಭಿವೃದ್ಧಿ ಕಾರ್ಯದ ವೇಳೆ ಮೊದಲಿಗೆ ತಾತ್ಕಾಲಿಕ ಪರಿಹಾರ ಕ್ರಮಗಳನ್ನು ಕೈಗೊಂಡು, ಪದೇ ಪದೇ ಉಂಟಾಗುವ ಸಮಸ್ಯೆಗಳ ಮೂಲ ಕಾರಣಗಳಿಗೆ ದೀರ್ಘಕಾಲಿಕ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ತಿಳಿಸಲಾಗಿದೆ.
ರಸ್ತೆ ಗುಂಡಿಗಳನ್ನು ಮುಚ್ಚಿ: ನಗರದ ಹೊರ ವರ್ತುಲ ರಸ್ತೆಗಳಲ್ಲಿರುವ ರಸ್ತೆಗುಂಡಿಗಳನ್ನು ಆದ್ಯತೆ ಮೇರೆಗೆ ಮುಚ್ಚಬೇಕು. ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳು ಹಾಗೂ ವಾರ್ಡ್ ರಸ್ತೆಗಳಲ್ಲಿ ರಸ್ತೆಗುಂಡಿಗಳನ್ನು ಮುಚ್ಚಲು ಹೇಳಲಾಗಿದೆ. ಅಲ್ಲದೇ ಪ್ರಸ್ತುತ ನಡೆಯುತ್ತಿರುವ ವೈಟ್ ಟಾಪಿಂಗ್ ರಸ್ತೆಗಳು ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಸುಸ್ಥಿತಿಯಲ್ಲಿ ಇರಿಸಲು ಕ್ರಮವಹಿಸಬೇಕು. ಗುತ್ತಿಗೆ ಪಡೆದಿರುವ ಗುತ್ತಿಗೆದಾರರಿಂದಲೇ ರಸ್ತೆ ಸುಸ್ತಿತಿಯಲ್ಲಿಟ್ಟುಕೊಳ್ಳಲು ಕ್ರಮ ವಹಿಸಲು ನಿರ್ದೇಶನ ನೀಡಲಾಗಿದೆ.
ಮೇಲ್ಸೇತುವೆಗಳ ಪೈಪ್ ಲೀಕೇಜ್ ದುರಸ್ಥಿಪಡಿಸಿ: ಜಿಬಿಎ ವ್ಯಾಪ್ತಿಯಲ್ಲಿರುವ ಮೇಲ್ಸೇತುವೆಗಳಿಗೆ ಮಳೆನೀರು ಹರಿದು ಹೋಗುಲು ಪೈಪ್ ಗಳನ್ನು ಅಳವಡಿಸಿದ್ದು, ಆ ಪೈಪ್ ಗಳು ಹಾಳಾಗಿ ಬೀಳುವ ಮಳೆ ನೀರು ನೇರವಾಗಿ ರಸ್ತೆ ಮೇಲೆ ಬಿದ್ದು, ರಸ್ತೆಯು ಶೀಘ್ರವೇ ಹಾಳಾಗುತ್ತಿದೆ. ಈ ನಿಟ್ಟಿನಲ್ಲಿ ಮೇಲ್ಸೇತುವೆಗಳಿಗೆ ಅಳವಡಿಸಿರುವ ಪೈಪ್ ಗಳು ಹಾಳಾಗಿರುವುದನ್ನು ಗುರುತಿಸಿ ಅವುಗಳನ್ನು ಬದಲಾಯಿಸಲು ತಿಳಿಸಲಾಗಿದೆ. ಜಿಬಿಎ ವ್ಯಾಪ್ತಿಯಲ್ಲಿ ಬರುವ ಹೊರ ವರ್ತುಲ ರಸ್ತೆಗಳ ಬದಿ, ಪಾದಚಾರಿ ಮಾರ್ಗಗಳು, ಮೀಡಿಯನ್ಸ್ ಗಳಲ್ಲಿ ಸ್ವಚ್ಛತೆ ಕಾಪಾಡಬೇಕಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತವು ನಗರ ಪಾಲಿಕೆಗಳೊಂದಿಗೆ ಸಮನ್ವಯ ಮಾಡಿಕೊಂಡು ತೀವ್ರ ಸ್ಬಚ್ಛತಾ ಕಾರ್ಯವನ್ನು ನಡೆಸಲು ಸೂಚಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.












Click it and Unblock the Notifications