ಉಪ ಚುನಾವಣಾ ಅಖಾಡಕ್ಕೆ ಸಂಸದ ಡಿಕೆ ಸುರೇಶ್: ಮೊದಲ ದಿನವೇ ಭರ್ಜರಿ ಬೇಟೆ!
ಬೆಂಗಳೂರು, ಅ. 19: ಕೊರೊನಾ ವೈರಸ್ನಿಂದ ಚೇತರಿಸಿಕೊಂಡಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್ ಅವರು ಇಂದಿನಿಂದ ಉಪ ಚುನಾವಣೆ ಅಖಾಡಕ್ಕೆ ಇಳಿದಿದ್ದಾರೆ. ಸಹೋದರ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿವಾಸದ ಮೇಲೆ ಸಿಬಿಐ ದಾಳಿಯ ಬಳಿಕ ಸುರೇಶ್ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದರಿಂದ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಕೋವಿಡ್ನಿಂದ ಚೇತರಿಸಿಕೊಂಡ ಬಳಿಕ ಕ್ವಾರಂಟೈನ್ ಮುಗಿಸಿ ಇಂದಿನಿಂದ ಆರ್ ಆರ್ ನಗರ ಚುನಾವಣಾ ಅಖಾಡಕ್ಕೆ ಇಳಿಸಿದ್ದು, ಡಿಕೆಶಿ ಅವರಿಗೆ ಆನೆ ಬಲ ಬಂದಂತಾಗಿದೆ.
ಕ್ಷೇತ್ರದಲ್ಲಿ ಪಕ್ಷಾಂತರ ಪರ್ವ ಜೋರಾಗಿಯೆ ನಡೆದಿದೆ. ಜೆಡಿಎಸ್ನಿಂದ ಕಾಂಗ್ರೆಸ್ ಪಕ್ಷಕ್ಕೆ, ಕಾಂಗ್ರೆಸ್ನಿಂದ ಬಿಜೆಪಿಗೆ ಸೇರ್ಪಡೆ ಹೀಗೆ ಸ್ಥಳೀಯ ಮುಖಂಡರ ಪಕ್ಷ ಬದಲಾವಣೆ ನಡೆದಿದೆ. ಆರ್ ಆರ್ ನಗರ ವಿಧಾನಸಭಾ ಕ್ಷೇತ್ರ ಡಿಕೆ ಸುರೇಶ್ ಪ್ರತಿನಿಧಿಸುವ ಬೆಂಗಳೂರು ಗ್ರಾಮೀಣ ಲೋಕಸಭಾ ಕ್ಷೇತ್ರಕ್ಕೆ ಸೇರಿದೆ. ಹೀಗಾಗಿ ಚುನಾವಣಾ ಪ್ರಚಾರ ಹಾಗೂ ಕಾರ್ಯತಂತ್ರ ರೂಪಿಸುವಲ್ಲಿ ಸುರೇಶ್ ಅವರ ಅನುಪಸ್ಥಿತಿ ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ಕಾಡಿತ್ತು.

ಜೆಡಿಎಸ್ಗೆ ಹೊಡೆತ ಕೊಟ್ಟ ಡಿ.ಕೆ. ಸುರೇಶ್
ಚುನಾವಣಾ ಅಖಾಡಕ್ಕೆ ಇಳಿಯುತ್ತಿದ್ದಂತೆಯೆ ಡಿಕೆ ಸುರೇಶ್ ಅವರು ಜೆಡಿಎಸ್ ಪಕ್ಷಕ್ಕೆ ಭಾರಿ ಹೊಡೆತ ಕೊಟ್ಟಿದ್ದಾರೆ. ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್. ಚಂದ್ರಶೇಖರ್ ಕಾಂಗ್ರೆಸ್ನತ್ತ ಮುಖ ಮಾಡಿದ್ದಾರೆ. ಸುರೇಶ್ ಜೊತೆಗೆ ಮಾತನಾಡಿದ ಬಳಿಕವೇ ಚಂದ್ರಶೇಖರ್ ಅಂತಿಮ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಚಂದ್ರಶೇಖರ್ ಅವರೊಂದಿಗೆ ಜೆಡಿಎಸ್ ಪಕ್ಷದ ಹಲವು ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಸೇರಲಿದ್ದಾರೆ.

ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ಹೆದರಬೇಡಿ
ಇದೇ ಸಂದರ್ಭದಲ್ಲಿ ಸಂಸದ ಡಿಕೆ ಸುರೇಶ್ ಅವರು ಪಕ್ಷದ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರಿಗೆ ಮತ್ತೊಂದು ಮಹತ್ವದ ಮಾತನ್ನಾಡಿದ್ದಾರೆ. ಬಿಜೆಪಿ ಅಭ್ಯರ್ಥಿ, ಮಾಜಿ ಶಾಸಕ ಮುನಿರತ್ನ ಅವರಿಗೆ ನೀವು ಹೆದರುವುದು ಬೇಡ ಎಂಬ ಧೈರ್ಯವನ್ನು ತುಂಬಿದ್ದಾರೆ.

ಅಭಿವೃದ್ಧಿ ವಿಚಾರ ನನಗೆ ಬಿಡಿ
ಮುಂದೆ ಕ್ಷೇತ್ರದ ಅಭಿವೃದ್ಧಿಯನ್ನು ನಾನು ನೋಡಿಕೊಳ್ಳುತ್ತೇನೆ. ನೀವು ಧೈರ್ಯವಾಗಿ ಮತದಾರರ ಮನವೋಲಿಸಿ. ಯಾವ ಕಾರ್ಯಕರ್ತರು ಎದೆಗುಂದುವುದು ಬೇಡ. ಯಾವೊಬ್ಬ ಕಾರ್ಯಕರ್ತನೂ ಭಯಬೀಳುವುದು ಬೇಡ ಎಂದು ಪಕ್ಷದ ಕಾರ್ಯಕರ್ತರಿಗೆ ಡಿ.ಕೆ. ಸುರೇಶ್ ಧೈರ್ಯ ತುಂಬಿದ್ದಾರೆ.
Recommended Video

ಪಕ್ಷದಿಂದ ಚಂದ್ರಶೇಖರ್ ಉಚ್ಛಾಟನೆ
ಇನ್ನು ಪಕ್ಷ ತೊರೆಯುವುದು ಖಚಿತವಾಗುತ್ತಿದ್ದಂತೆಯೆ ಜೆಡಿಎಸ್ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಬಿ.ಎಚ್. ಚಂದ್ರಶೇಖರ್ ಅವರನ್ನು ಜೆಡಿಎಸ್ನಿಂದ ಉಚ್ಛಾಟನೆ ಮಾಡಲಾಗಿದೆ. ಚಂದ್ರಶೇಖರ್ ಅವರು ಇಂದು ಮಧ್ಯಾಹ್ನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಸಂಸದ ಡಿಕೆ ಸುರೇಶ್ ಅವರ ಸಮ್ಮುಖದಲ್ಲಿ ಆರ್ ಆರ್ ನಗರದಲ್ಲಿ ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆ ಹಾಗೂ ಪಕ್ಷದ ನಾಯಕರ ವಿರುದ್ಧ ಅವಹೇಳನಕಾರಿ ಹೇಳಿಕೆ ಕೊಟ್ಟಿದ್ದೀರಿ. ಜೊತೆಗೆ ಪಕ್ಷದ ಸ್ಥಾನ ದುರುಪಯೋಗದ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದಿಂದ ಮುಂದಿನ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡುತ್ತಿರುವುದಾಗಿ ಬಿ.ಎಚ್. ಚಂದ್ರಶೇಖರ್ ಅವರಿಗೆ ಬೆಂಗಳೂರು ಮಹಾನಗರ ಜೆಡಿಎಸ್ ಅಧ್ಯಕ್ಷ ಆರ್. ಪ್ರಕಾಶ್ ತಿಳಿಸಿದ್ದಾರೆ. ಒಟ್ಟಾರೆಯಾಗಿ ಸಂಸದ ಡಿಕೆ ಸುರೇಶ್ ಅವರು ಚುನಾವಣಾ ಆಖಾಡಕ್ಕೆ ಧುಮುಕಿದ್ದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊರ ಹುರುಪು ತುಂಬಿದೆ.












Click it and Unblock the Notifications