Bengaluru Rain: ನಗರಕ್ಕೆ ಇಂದು ಜೋರು ಮಳೆ, ಸೆ.22ರ ವರೆಗೆ ಹವಾಮಾನ ಮುನ್ಸೂಚನೆ
ಬೆಂಗಳೂರು, ಸೆಪ್ಟಂಬರ್ 17: ಬೆಂಗಳೂರಿನಲ್ಲಿ ಮಳೆ ಮುಂದುವರಿದಿದ್ದು, ಇಂದಿನಿಂದ ಮುಂದಿನ ಸೆಪ್ಟಂಬರ್ 22ರವರೆಗೂ ಮಳೆ ಬರಲಿದೆ. ಈ ಪೈಕಿ ಇಂದು ಭಾನುವಾರ ನಗರದಲ್ಲಿ ಮುಂಗಾರು ಮಳೆಯ ಸ್ವರೂಪ ತೀವ್ರವಾಗಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನಗರದಲ್ಲಿ ಕೆವು ದಿನಗಳಿಂದ ಆಗಾಗ ಬಿರುಸು ಮಳೆ ಸುರಿಯುತ್ತಿದೆ. ನೆನ್ನೆ ಶನಿವಾರವು ನಗರದ ವಿವಿಧ ಬಡಾವಣೆಗಳಲ್ಲಿ ಸಹ ಜೋರು ಮಳೆ ಆಗಿದೆ. ಇಂದು ಭಾನುವಾರವು ಜೋರಾಗಿಯೇ ಮಳೆ ಬರುವ ಸಾಧ್ಯತೆಗಳು ಇದ್ದು, ಮಬ್ಬು ವಾತಾವರಣವೇ ಮುಂದುವರಿಯಲಿದೆ. ಬೆಳಗ್ಗೆಯಿಂದ ತುಸು ಬಿಸಿಲಿನ ವಾತಾವರಣ ಇದ್ದರೂ ಸಹಿತ ಮಧ್ಯಾಹ್ನ ನಂತರ ಮಳೆ ಬರಬಹುದು.

ಸೆಪ್ಟಂಬರ್ 22ರವರೆಗೆ ನಿತ್ಯವು ತುಂತುರು ಮಳೆ ಇಲ್ಲವೇ ಆಗಾಗ ಬಿರುಸಿನ ಮಳೆ ಆಗಲಿದೆ. ಇದರ ಹೊರತು ವಾತಾವರಣದಲ್ಲಿ ಯಾವುದೇ ಗಂಭೀರ ಬದಲಾವಣೆಗಳು ಇಲ್ಲ. ತಾಪಮಾನದಲ್ಲಿ ಸಹ ಏರಿಕೆ ಸಾಧ್ಯತೆಗಳು ಇಲ್ಲ ಬದಲಾಗಿ ಗರಿಷ್ಠ 28 ಡಿಗ್ರಿಸೆಲ್ಸಿಯಸ್ ಮತ್ತು ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮುನ್ಸೂಚನೆ ನೀಡಿದೆ.
ಯಲಹಂಕದ ಮತ್ತು ಅಟ್ಟೂರಿನಲ್ಲಿ 14ಮಿಲಿ ಮೀಟರ್, ಚೌಡೇಶ್ವರಿ ವಾರ್ಡ್ನಲ್ಲಿ 12 ಮಿಲಿ ಮೀಟರ್ ಮಳೆ ಆಗಿದೆ. ಉಳಿದಂತೆ ಕೆಲವೆಡೆ ಸೋನೆ ಮಳೆ, ತುಂತುರು ಮಳೆ ಬಿದ್ದಿದೆ. ಹೆಚ್ಚು ಮಳೆಯಾದ ಪ್ರದೇಶಗಳಲ್ಲಿ ಕೆಲ ಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಇಂದು ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಇನ್ನೂ ಕರ್ನಾಟಕದ ಹವಾಮಾನ ನೋಡುವುದಾದರೆ, ಇಂದು ಚಿಕ್ಕಮಗಳೂರು, ಕೊಡು, ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ ಆಗಲಿದ್ದು, ಯೆಲ್ಲೋ ಅಲರ್ಟ್ ಕೊಡಲಾಗಿದೆ. ಇನ್ನೂಳಿದಂತೆ ಮುಂದಿನ ನಾಲ್ಕು ದಿನ ಸಾಧಾರಣ ಮಳೆ ಆಗಲಿದೆ.
ಒಳನಾಡಿನ ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ, ಶಿವಮೊಗ್ಗ, ತುಮಕೂರು, ಧಾರವಾಡ, ಬೆಳಗಾವಿ, ವಿಜಯಪುರ ಸೇರಿದಂತೆ ವಿವಿಧಡೆ ಮಳೆ ಬರುವ ಸಾಧ್ಯತೆಗಳು ಇವೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications