Heavy Rain: ರಾಜಧಾನಿಗೆ ಅ.23ರ ತನಕ ಹಿಂಗಾರು ಮಳೆ ಆರ್ಭಟ, ನಗರ ಕೂಲ್ ಕೂಲ್
ಬೆಂಗಳೂರು, ಅಕ್ಟೋಬರ್ 18: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆ ಕೊಂಚ ಕಡಿಮೆ ಆಗಿದ್ದರೂ ಸಹಿತ ಕೆಲವು ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ಉಂಟಾದ ಸಮಸ್ಯೆಗಳು ಇನ್ನೂ ಅಂತ್ಯ ಕಂಡಿಲ್ಲ. ಈ ಮಧ್ಯೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಅಕ್ಟೋಬರ್ 23ರವರೆಗೆ ಸಾಧಾರಣದಿಂದ ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ.
ಕಳೆದೊಂದು ವಾರದಿಂದ ಬಿದ್ದ ಮಳೆಗೆ ನಲುಗಿದ ಬೆಂಗಳೂರಿನಲ್ಲಿ ಇನ್ನೂ ಕೆಲವು ದಿನಗಳ ಕಾಲ ಮಳೆ ಆಗಲಿದೆ. ಸದ್ಯ ಮಾಹಿತಿ ಪ್ರಕಾರ, ನಗರವು ಭಾರೀ ಮಳೆ, ಹಳದಿ ಎಚ್ಚರಿಕೆಯಿಂದ ಸಹಜ ಸ್ಥಿತಿಯತ್ತ ಮರಳುತ್ತಿದೆ. ನಗರದ ಮಹಾದೇವಪುರ ವಲಯ ಹಾಗೂ ಯಲಹಂಕ ವಲಯದಲ್ಲಿ ಮಳೆ ಸಮಸ್ಯೆಗಳ ವಿರುದ್ಧ ಹೋರಾಟ ಮುಂದುವರಿದಿದೆ.

ನಗರದೆಲ್ಲಡೆ ತಂಪು ವಾತಾವರಣ ಇದ್ದು, ಮಬ್ಬು ಕವಿದ ವಾತಾವರಣ ಕಂಡು ಬರುತ್ತಿದೆ. ಮುಂದಿನ 48 ಗಂಟೆಗಳಲ್ಲಿ ನಗರದ ಯಲಹಂಕ, ಎಚ್ಎಎಲ್ ವಿಮಾನ ನಿಲ್ದಾಣ, ದೇವನಹಳ್ಳಿ ಏರ್ಪೋರ್ಟ್ ಸೇರಿದಂತೆ ಹೊರ ವಲಯದಲ್ಲಿ ಜೋರು ಮಳೆ ಆಗುವ ಸಾಧ್ಯತೆ ಇದೆ.
ಕೆಲವೆಡೆ ಹಗುರದಿಂದ ಸಾಧಾರಣವಾಗಿ ಮಳೆ ಆದರೆ, ಮತ್ತೆ ಕೆಲವೆಡೆ ಆಗಾಗ ವ್ಯಾಪಕ ಮಳೆ ಕಂಡು ಬರಲಿದೆ. ಅಕ್ಟೊಬರ್ 19ರವರೆಗೆ ವಾತಾವರಣದಲ್ಲಿ ತಾಪಮಾನ ಕಡಿಮೆ ಇರಲಿದೆ. ಕನಿಷ್ಠ 21 ಹಾಗೂ ಗರಿಷ್ಠ 27 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.
ಅಕ್ಟೋಬರ್ 20 ರಂದು ನಗರದಲ್ಲಿ ಮಳೆ ಮತ್ತೆ ಬಿರುಸುಗೊಳ್ಳುವ ಎಲ್ಲ ಲಕ್ಷಣಗಳು ಇವೆ. ಸದ್ಯ ಮಳೆ, ಪ್ರವಾಹ ಸ್ಥಿತಿ ಎದುರಿಸಲು ಬಿಬಿಎಂಪಿ ಸಕಲ ಸಿದ್ಧತೆ ಮಾಡಿಕೊಂಡಿದೆ. ತಗ್ಗು ಪ್ರದೇಶಗಳ ಜನರು ಹಿಂಗಾರು ಮಳೆಯ ಆರ್ಭಟಕ್ಕೆ ಹೈರಾಣಾಗಿದ್ದಾರೆ.
ಬೆಂಗಳೂರಿನಂತೆ ಇತರೆಡೆ ಮಳೆ ತೊಂದರೆ
ಬೆಂಗಳೂರು ಮಾತ್ರವಲ್ಲದೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಹ ಹಿಂಗಾರು ಮಳೆ ಚುರುಕಾಗಿದೆ. ವಿವಿಧೆಡೆ ಬೆಂಗಳೂರಿನಂತಹ ಪ್ರವಾಹ, ನೆರೆ, ತಂಪು ವಾತಾವರಣ ಸೃಷ್ಟಿಯಾಗಿದೆ. ಜನಜೀವನ, ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಮುಂದಿನ ಇನ್ನೂ ಕೆಲವು ದಿನಗಳ ಕಾಲ ಬೆಂಗಳೂರು ನಗರ ಜಿಲ್ಲೆಗೆ ಹಾಗೂ ಇತರ ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದೆ.
ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ಉಂಟಾಗಿ ವಾಯುಭಾರತ ಕುಸಿತ/ಚಂಡಮಾರು ಪರಿಚಲನೆಯು ತೀವ್ರಗೊಂಡ ಪರಿಣಾಮ ಕಳೆದೊಂದು ವಾರದಿಂದ ಮಳೆ ಅಬ್ಬರಿಸಿತ್ತು. ಸದ್ಯ ಈ ವೈಪರಿತ್ಯವು ಒಡಿಶಾ ಕರಾವಳಿ ಮಾರ್ಗವಾಗಿ ಆಂಧ್ರ ಪ್ರದೇಶದ ಕರಾವಳಿಗೆ ಅಪ್ಪಳಿಸಿದ ಪರಿಣಾಮ ಅದರ ತೀವ್ರ ದಿಢೀರ್ ಕಡಿಮೆ ಆಗಿದೆ. ಇದರಿಂದ ಕರ್ನಾಟಕದ ಮೇಲಾಗಿದ್ದ ಪ್ರಭಾವವು ಕುಂದಿದೆ.
ಆದರೆ ತಮಿಳುನಾಡು, ಆಂಧ್ರ ಪ್ರದೇಶ, ಒಡಿಶಾ ರಾಜ್ಯಗಳ ವಿವಿಧೆಡೆ ಇನ್ನೂ ಒಂದೆರಡು ದಿನಗಳ ಕಾಲ ಗುಡುಗು ಮಿಂಚು ಸಹಿತ ವ್ಯಾಪಕ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications