Bengaluru-Pune Expressway: ಪುಣೆ-ಬೆಂಗಳೂರು ಎಕ್ಸ್ಪ್ರೆಸ್ವೇ ಕರ್ನಾಟಕದ ಯಾವೆಲ್ಲ ಜಿಲ್ಲೆಗಳಲ್ಲಿ ಹಾದುಹೋಗಲಿದೆ?-ಮಾಹಿತಿ
Bengaluru-Pune Expressway: ರಾಷ್ಟ್ರೀಯ ಹೆದ್ದಾರಿ ಪ್ರಧಿಕಾರವು ದೇಶದ ಹಲವೆಡೆ ಪ್ರಮುಖ ಹೆದ್ದಾರಿಗಳನ್ನು ನಿರ್ಮಾಣ ಮಾಡುತ್ತಿದ್ದು, ಈಗಾಗಲೇ ಕೆಲವು ಉದ್ಘಾಟನೆಗೆ ಸಜ್ಜಾಗಿವೆ. ಹಾಗಾದರೆ ಬೆಂಗಳೂರು-ಪುಣೆ ಎಕ್ಸ್ಪ್ರೆಸ್ ವೇ ಕರ್ನಾಟಕದ ಯಾವೆಲ್ಲ ಜಿಲ್ಲೆಗಳ ಮೇಲೆ ಹೋಗಲಿದೆ? ಹಾಗೂ ಇದರ ನಿರ್ಮಾಣಕ್ಕೆ ತಗುಲಿದ ವೆಚ್ಚ ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಹೆದ್ದಾರಿ ಅಭಿವೃದ್ಧಿಗೆ ರಹದಾರಿ ನಿರ್ಮಿಸಿರುವ ಕೇಂದ್ರ ಸರ್ಕಾರ ಕರ್ನಾಟಕದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಲ್ಯಾಣ, ಉತ್ತರ ಕರ್ನಾಟಕ ಮಾರ್ಗವಾಗಿ ಬೆಂಗಳೂರಿನಿಂದ ಪುಣೆಗೆ ಸಂಪರ್ಕ ಕಲ್ಪಿಸುವ ಯೋಜನೆಗೆ ಹೊಸ ಸರ್ಕಾರ ರಚನೆಯಾಗುತ್ತಿದ್ದಂತೆ ಚಾಲನೆ ನೀಡಲು ಸಿದ್ಧತೆ ನಡೆಸಿದೆ ಎನ್ನುವ ಮಾಹತಿ ಲಭ್ಯವಾಗಿದೆ.

ರಾಷ್ಟ್ರೀಯ ಹೆದ್ದಾರಿ 4ಕ್ಕೆ ಪರ್ಯಾಯ ಆಗಿರುವ ಈ ಹೆದ್ದಾರಿಯಿಂದ ಉಭಯ ನಗರಗಳ ಅಂತರ 95 ಕಿಲೋ ಮೀಟರ್ ತಗ್ಗಲಿದ್ದು, ಕೇವಲ 7 ಗಂಟೆಗಳಲ್ಲಿ 700 ಕಿಲೋ ಮೀಟರ್ವರೆಗೂ ವಿಸ್ತರಿಸಿದೆ ಎನ್ನಲಾಗಿದೆ. ಭಾರತ್ ಮಾಲಾ-2 ಯೋಜನೆಯಡಿ ಬೆಂಗಳೂರು-ಪುಣೆ ಗ್ರೀನ್ಫೀಲ್ಡ್ ಎಕ್ಸ್ಪ್ರೆಸ್ವೇಗೆ 40,000 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚವಾಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಾಣದ ಹೊಣೆ ಹೊತ್ತಿದ್ದು, 2028ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. 12 ಲೇನ್ ಹೆದ್ದಾರಿ ಇದಾಗಿದ್ದು, ಸದ್ಯ 8 ಲೇನ್ ನಿರ್ಮಾಣ ಆಗಲಿದೆ. ಇದಕ್ಕಾಗಿ 250 ಮೀಟರ್ ಅಗಲದ ಭೂಮಿಯನ್ನು ವಶಪಡಿಸಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.
ಯಾವೆಲ್ಲಾ ಜಿಲ್ಲೆಗಳಿಗೆ ಕನೆಕ್ಟ್: ಮಧ್ಯ, ಕಲ್ಯಾಣ ಹಾಗೂ ಉತ್ತರ ಕರ್ನಾಟಕದ 9, ಮಹಾರಾಷ್ಟ್ರದ ಮೂರು ಸಹಿತ ಒಟ್ಟು 12 ಜಿಲ್ಲೆಗಳ ಮೂಲಕ ಈ ಹೆದ್ದಾರಿ ಹಾದು ಹೋಗಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ನೆಲಮಂಗಲ, ತುಮಕೂರು ಜಿಲ್ಲೆಯ ಕೊರಟಗೆರೆ, ಮಧುಗಿರಿ, ಚಿತ್ರದುರ್ಗ, ದಾವಣಗೆರೆಯ ಜಗಳೂರು, ವಿಜಯನಗರದ ಕೂಡ್ಲಿಗಿ, ಕೊಪ್ಪಳದ ಯಲಬುರ್ಗಾ, ಗದಗ ಜಿಲ್ಲೆಯ ರೋಣ, ನರಗುಂದ, ಬಾಗಲಕೋಟೆಯ ಬಾದಾಮಿ, ಮುಧೋಳ, ಜಮಖಂಡಿ, ಬೆಳಗಾವಿ ಜಿಲ್ಲೆಯ ಅಥಣಿ ಮೂಲಕ ಹಾಯ್ದು ಮಹಾರಾಷ್ಟ್ರದ ಸತಾರಾ, ಸಾಂಗ್ಲಿ ಮಾರ್ಗವಾಗಿ ಪುಣೆಗೆ ತಲುಪಲಿದೆ.
ಏನೆಲ್ಲಾ ಉಪಯೋಗ?: ಬೆಂಗಳೂರಿನ ಮುತಗಂಡಹಳ್ಳಿಯ ಸ್ಯಾಟ್ಲೈಟ್ ರಿಂಗ್ ರಸ್ತೆಯಿಂದ ಪ್ರಾರಂಭವಾಗಲಿದ್ದು, ಪುಣೆಯ ಕಂಜೆ ಬಳಿಯ ರಿಂಗ್ ರಸ್ತೆಗೆ ಮುಕ್ತಾಯವಾಗಲಿದೆ. ಈ ಹೆದ್ದಾರಿ ಹಾದು ಹೋಗುವ ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ, ಪ್ರವಾಸೋದ್ಯಮ, ರಿಯಲ್ ಎಸ್ಟೇಟ್ನಲ್ಲಿ ಗಣನೀಯ ಪ್ರಗತಿ, ಉದ್ಯೋಗಾವಕಾಶ ಸೃಷ್ಟಿಗೆ ಅನುಕೂಲ ಆಗಲಿದೆ.
ಗ್ರೀನ್ಫೀಲ್ಡ್ ಎಕ್ಸ್ಪ್ರೆಸ್ವೇಯಲ್ಲಿ ಪ್ರತಿ ಗಂಟೆಗೆ 120 ಕಿಲೋ ಮೀಟರ್ ವೇಗದಲ್ಲಿ ಸಂಚರಿಸಲು ಗುಣಮಟ್ಟದ ರಸ್ತೆ ನಿರ್ಮಾಣ ಮಾಡಲು ನಿರ್ಧಾರ ಮಾಡಲಾಗಿದೆ. ಬೆಂಗಳೂರು-ಪುಣೆ ಸಮೀಪ 5 ಕಿಲೋ ಮೀಟರ್ ಉದ್ದದ ಎರಡು ಏರ್ಸ್ಟ್ರಿಪ್ಗಳನ್ನು ಕೂಡ ನಿರ್ಮಿಸುವ ಯೋಜನೆ ಇದರಲ್ಲಿ ಒಳಗೊಂಡಿದೆ.
ರಾಜ್ಯದ ತುಂಗಭದ್ರಾ, ಮಲಪ್ರಭಾ, ಘಟಪ್ರಭಾ, ಕೃಷ್ಣಾ, ವೇದಾವತಿ, ಮಹಾರಾಷ್ಟ್ರದ ನೀರಾ, ಯೆರಳ, ಚಂದನಾಡಿ, ಅಗ್ರಣಿ, ಚಿಕ್ಕಹಗರ ನದಿಗಳ ಮೂಲಕ ಹಾದು ಹೋಗಲಿದೆ. 6 ಸೇತುವೆ, 55 ಮೇಲ್ಸೇತುವೆಗಳು, 22 ಇಂಟರ್ಚೇಂಜ್ಗಳು, 14 ರಾಷ್ಟ್ರೀಯ, ರಾಜ್ಯ ಹೆದ್ದಾರಿ ಕ್ರಾಸಿಂಗ್ ಪಾಯಿಂಟ್ಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
ರಾಷ್ಟ್ರೀಯ ಹೆದ್ದಾರಿ 4ರ ಮೂಲಕ ಇದೀಗ ಬೆಂಗಳೂರಿನಿಂದ ಪುಣೆಗೆ ಚತುಷ್ಪಥ ಸಂಪರ್ಕ ರಸ್ತೆ ಇದೆ. ಸುದೀರ್ಘ 15 ಗಂಟೆಗಳ ಪ್ರಯಾಣ ಇದೆ. ಇದನ್ನು ಅಗಲಗೊಳಿಸುವುದು ಇದೀಗ ಅನಿವಾರ್ಯವಾಗಿದ್ದು, ಆದರೆ ಇದರ ಬದಲು ಹೊಸ ಹೆದ್ದಾರಿ ನಿರ್ಮಾಣವೇ ಸೂಕ್ತ ಎಂದು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೇಳಿದರು.
ಪುಣೆ-ಬೆಂಗಳೂರು ಗ್ರೀನ್ಫೀಲ್ಡ್ ಯೋಜನೆಗೆ ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ. 12 ಲೈನ್ ಹೆದ್ದಾರಿ ಪೈಕಿ ಸದ್ಯ 8 ಲೇನ್ಗಳನ್ನು ನಿರ್ಮಾಣ ಮಾಡಲಾಗುವುದು. 700 ಕಿಲೋ ಮೀಟರ್ ರಸ್ತೆಯನ್ನು 7 ಗಂಟೆಗಳಲ್ಲಿ ತಲುಪಬಹುದು. ಕೊರಟಗೆರೆ ತಾಲೂಕು ಸಹಿತ ಕೆಲವೆಡೆ ಭೂಸ್ವಾಧೀನಕ್ಕೆ ರೈತರಿಂದ ವಿರೋಧ ವ್ಯಕ್ತವಾಗಿದ್ದು, ಮನವೊಲಿಕೆ ಮಾಡಲಾಗುತ್ತಿದೆ. ಹೊಸ ಸರ್ಕಾರ ರಚನೆ ಆಗುತ್ತಿದ್ದಂತೆ ಕಾಮಗಾರಿಗೆ ಚಾಲನೆ ಸಿಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications