ಬೆಂಗಳೂರು; ರಸ್ತೆ ಗುಂಡಿ ತಪ್ಪಿಸುವಾಗ ಅಪಘಾತ, ಶಿಕ್ಷಕಿ ಸಾವು
ಬೆಂಗಳೂರು, ಜನವರಿ 31; ಬೆಂಗಳೂರು ನಗರದಲ್ಲಿನ ರಸ್ತೆ ಗುಂಡಿ ಮತ್ತೊಂದು ಬಲಿ ಪಡೆದಿದೆ. ಬೈಕ್ ಸವಾರ ರಸ್ತೆ ಗುಂಡಿ ತಪ್ಪಿಸಲು ಪ್ರಯತ್ನಿಸಿದಾಗ ಹಿಂಬಂದಿ ಕುಳಿತಿದ್ದ ಮಹಿಳೆ ಕೆಳಗೆ ಬಿದ್ದಿದ್ದು, ಆಕೆಯ ಮೇಲೆ ವಾಹನ ಹರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮೃತಪಟ್ಟ ಮಹಿಳೆಯನ್ನು ಕೊಟ್ಟಿಗೆಪಾಳ್ಯದ ಶರ್ಮಿಳಾ (38) ಎಂದು ಗುರುತಿಸಲಾಗಿದೆ. ಶಾಲಾ ಶಿಕ್ಷಕಿಯಾಗಿದ್ದ ಶರ್ಮಳಾ ಬೈಕ್ ಸವಾರ ರಸ್ತೆ ಗುಂಡಿ ತಪ್ಪಿಸಲು ಪ್ರಯತ್ನಿಸಿದಾಗ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ.
ಬೈಕ್ನಲ್ಲಿ ಹಿಂಬದಿ ಕುಳಿತಿದ್ದ ಶರ್ಮಿಳಾ ತಾವರೆಕೆರೆ ಕಡೆಗೆ ಹೋಗುತ್ತಿದ್ದರು. ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಯ್ಯಪ್ಪ ಸ್ವಾಮಿ ದೇವಾಲಯದ ಸಮೀಪ ಬೈಕ್ ಸವಾರ ರಸ್ತೆ ಗುಂಡಿ ತಪ್ಪಿಲು ಪ್ರಯತ್ನಿಸಿದಾಗ ಶರ್ಮಿಳಾ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ.

ಆಗ ಹಿಂಬಂದಿ ಬರುತ್ತಿದ್ದ ಬೊಲೆರೋ ವಾಹನ ಅವರ ಮೇಲೆ ಹರಿದಿದ್ದು ಶರ್ಮಿಳಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೈಕ್ ಸವಾರ ಪಾಣಾಪಾಯದಿಂದ ಪಾರಾಗಿದ್ದಾನೆ. ಬೊಲೆರೋ ವಾಹನ ಚಾಲಕ ಮಾದೇಶನನ್ನು ಪೊಲೀಸರು ಬಂಧಿಸಿದ್ದಾರೆ. ಬ್ಯಾಡರಹಳ್ಳಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕಾವೇರಿ ಪೈಪ್ ಲೈನ್ ಆಳವಡಿಕೆಗಾಗಿ ಮಾಗಡಿ ಮುಖ್ಯ ರಸ್ತೆಯ ಅಂಜನಾ ನಗರದಿಂದ ದೊಡ್ಡ ಗೊಲ್ಲಹಟ್ಟಿ ತನಕ ರಸ್ತೆಯನ್ನು ಅಗೆಯಲಾಗಿದೆ. ಇದೇ ಕಾರಣದಿಂದಾಗಿ ರಸ್ತೆಯ ತುಂಬಾ ಗುಂಡಿಗಳು ಉಂಟಾಗಿವೆ.
ಅಪಘಾತ ನಡೆದ ತಕ್ಷಣ ಸ್ಥಳೀಯರು ಪ್ರತಿಭಟನೆ ನಡೆಸಿದರು. ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಕೆಲಕಾಲ ರಸ್ತೆ ತಡೆದು ಬಿಬಿಬಿಎಂಪಿ ವಿರುದ್ಧ ಆಕ್ರೋಶ ಹೊರ ಹಾಕಿದರು.
ಎಎಪಿಯಿಂದ ಪ್ರತಿಭಟನೆ; ಬ್ಯಾಡರಹಳ್ಳಿ ಮುಖ್ಯರಸ್ತೆಯಲ್ಲಿದ್ದ ಗುಂಡಿಯಿಂದ ಸಂಭವಿಸಿದ ಅಪಘಾತದಲ್ಲಿ ಶಿಕ್ಷಕಿ ಶರ್ಮಿಳಾ ಮೃತಪಟ್ಟಿರುವುದನ್ನು ಖಂಡಿಸಿ ಆಮ್ ಆದ್ಮಿ ಪಕ್ಷದ ನಾಯಕರು, ಕಾರ್ಯಕರ್ತರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು. ಬಿಬಿಎಂಪಿ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Recommended Video
ಅಪಘಾತ ನಡೆದ ಸ್ಥಳದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಎಎಪಿ ರಾಜ್ಯಾಧ್ಯಕ್ಷರಾದ ಪೃಥ್ವಿ ರೆಡ್ಡಿ, "ರಸ್ತೆ ಗುಂಡಿಗಳಿಗೆ ವಾಹನ ಸವಾರರು ಬಲಿಯಾಗುತ್ತಿರುವುದು ಇದೇ ಮೊದಲೇನಲ್ಲ. ನಾವೆಲ್ಲ ಸುಮ್ಮನಿದ್ದರೆ ಇಂತಹ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ. ರಾಜ್ಯ ಸರ್ಕಾರ, ಸ್ಥಳೀಯ ಶಾಸಕರು, ಬಿಬಿಎಂಪಿ, ಜಲಮಂಡಳಿ ಅಪಘಾತದ ಜವಾಬ್ದಾರಿ ಹೊರಬೇಕು" ಎಂದು ಹೇಳಿದರು.
ಎಎಪಿಯ ಹಿರಿಯ ಮುಖಂಡ ಹಾಗೂ ಮಾಜಿ ಶಾಸಕರಾದ ಎಚ್. ಡಿ. ಬಸವರಾಜು ಮಾತನಾಡಿ, "ನಾಗರಿಕರ ಜೀವವನ್ನು ರಕ್ಷಿಸುವುದರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಫಲರಾಗಿದ್ದಾರೆ. ರಸ್ತೆ ದುರಸ್ತಿಗೆ ಬಿಡುಗಡೆಯಾದ ಹಣವನ್ನು ಜೇಬಿಗೆ ಇಳಿಸಿಕೊಂಡು, ವಾಹನ ಸವಾರರ ಹೆಣದ ಮೇಲೆ ಆಡಳಿತ ನಡೆಸಲಾಗುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಎಪಿ ಮುಖಂಡರ ಬಂಧನ; ರಸ್ತೆ ಗುಂಡಿಗೆ ಶಿಕ್ಷಕಿ ಶರ್ಮಿಳಾ ಬಲಿಯಾಗಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಎಎಪಿ ಮುಖಂಡರನ್ನು ಪೊಲೀಸರು ಬಂಧಿಸಿ, ಮೊಕದ್ದಮೆ ದಾಖಲಿಸಿದರು. ಪೊಲೀಸ್ ಇಲಾಖೆಯ ಜಂಟಿ ಆಯುಕ್ತರು ಠಾಣೆಗೆ ಆಗಮಿಸಿ ಮುಖಂಡರ ಜೊತೆಗೆ ಮಾತುಕತೆ ನಡೆಸಿದರು. ಪಕ್ಷ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಎಚ್. ಡಿ. ಬಸವರಾಜು, ಮೋಹನ್ ದಾಸರಿ, ಜಗದೀಶ್. ವಿ ಸದಂ ಇನ್ನಿತರ ಮುಖಂಡರನ್ನು ಬಂಧಿಸಲಾಯಿತು.
ಶಾಸಕ ಎಸ್. ಟಿ. ಸೋಮಶೇಖರ್, ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ಬಿಡಬ್ಲ್ಯುಎಸ್ಎಸ್ಬಿ ಎಂಡಿಯ ವಿರುದ್ಧ ಆಮ್ ಆದ್ಮಿ ಪಾರ್ಟಿಯು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ನಿರ್ಲಕ್ಷ್ಯದಿಂದಾಗಿ ಜನರ ಸಾವಿಗೆ ಕಾರಣವಾದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ.












Click it and Unblock the Notifications