ರಸ್ತೆಗುಂಡಿ ಸಮಸ್ಯೆ: ನ.19ಕ್ಕೆ ಎಎಪಿಯಿಂದ ಧರಣಿ, ವಿಧಾನಸೌಧ ಮುತ್ತಿಗೆ
ಬೆಂಗಳೂರು, ನವೆಂಬರ್ 18: ಬೆಂಗಳೂರು ರಸ್ತೆಗಳಲ್ಲಿನ ಗುಂಡಿಗಳಿಂದಾಗಿ ಜನಸಾಮಾನ್ಯರು ಜೀವ ಹೋಗುತ್ತಿದ್ದರು ನಿರ್ಲಕ್ಷ್ಯ ವಹಿಸಿರುವ ಬಿಜೆಪಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಆಮ್ ಆದ್ಮಿ ಪಾರ್ಟಿ (ಎಎಪಿ) ನ.19ರಂದು ಪ್ರತಿಭಟನೆ ಹಮ್ಮಿಕೊಂಡಿದೆ. ಧರಣಿ ಬಳಿಕ ವಿಧಾನಸೌಧಕ್ಕೆ ಮುತ್ತಿಗೆ ಮುಖಂಡರು, ಕಾರ್ಯಕರ್ತರು ಮುತ್ತಿಗೆ ಹಾಕಲಿದ್ದಾರೆ.
ಶನಿವಾರದ ಪ್ರತಿಭಟನೆ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ, ಎಎಪಿ ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ, ರಾಜ್ಯ ಸರ್ಕಾರದ ವಿರುದ್ಧ ಶನಿವಾರ ಬೆಳಗ್ಗೆ ಪಕ್ಷದ ನೂರಾರು ಕಾರ್ಯಕರ್ತರು, ಮುಖಂಡರು ಮೊದಲು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ನಂತರ ಅಲ್ಲಿಂದ ನೇರವಾಗಿ ವಿಧಾನಸೌಧಕ್ಕೆ ತೆರಳಿ ಮುತ್ತಿಗೆ ಹಾಕಲಾಗುವುದು ಎಂದರು.
ನಗರದಲ್ಲಿ ರಸ್ತೆ ಗುಂಡಿಗಳಿಗೆ ವಾಹನ ಸವಾರರು ಬಲಿಯಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ರಸ್ತೆ ಅಪಘಾತ, ಗಾಯ, ಸಾವುನೋವು ಸಾಮಾನ್ಯ ಎಂಬಂತಾಗಿದೆ. ಸರ್ಕಾರದ ನಿರ್ಲಕ್ಷ್ಯ ಹಾಗೂ ಭ್ರಷ್ಟಾಚಾರದಿಂದಾಗಿ ಅಮಾಯಕ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆಗುಂಡಿಗಳಿಗೆ ಕಾರಣರಾದವರ ವಿರುದ್ಧ ಕ್ರಮಕೈಗೊಳ್ಳುವ ತಾಕತ್ತು ಈ ಸರ್ಕಾರಕ್ಕೆ ಇಲ್ಲ. ಹೀಗಾಗಿ ಈ ಜನ ವಿರೋಧಿ ಭ್ರಷ್ಟ ಲಜ್ಜೆಗೇಡಿ ಸರ್ಕಾರಕ್ಕೆ ಆಮ್ ಆದ್ಮಿ ಪಾರ್ಟಿಯು ಬಿಸಿ ಮುಟ್ಟಿಸಲಿದೆ ಎಂದು ಹೇಳಿದರು.

ವಿಶೇಷವೆಂದರೆ ಈ ಪ್ರತಿಭಟನೆಯಲ್ಲಿ ರಸ್ತೆಗುಂಡಿಗೆ ಪ್ರಾಣಬಿಟ್ಟವರ ಕುಟುಂಬದ ಕೆಲವು ಸದಸ್ಯರು ಭಾಗವಹಿಸಲಿದ್ದಾರೆ. ನ್ಯಾಯಕ್ಕಾಗಿ ಸರ್ಕಾರವನ್ನು ಆಗ್ರಹಿಸಲಿದ್ದಾರೆ. ಸಾಮಾಜಿಕ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಹಾಗೂ ನಾಗರಿಕ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ನಮ್ಮ ಜನಪರ ಹೋರಾಟಕ್ಕೆ ಕೈಜೋಡಿಸಬೇಕು. ಉತ್ತಮ ರಸ್ತೆ ಪಡೆಯುವುದು ಎಲ್ಲರ ಹಕ್ಕು, ಈ ಸಂಬಂಧ ನಾವೆಲ್ಲರೂ ಒಂದಾಗಿ ಹೋರಾಡಬೇಕಿದೆ. ಬೆಂಗಳೂರಿನ ಎಲ್ಲರೂ ಅದರಲ್ಲೂ ವಾಹನ ಸವಾರರು, ಯುವ ಸಮೂಹ ಹೋರಾಟದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.
ಬೆಂಗಳೂರು ನಗರ ಎಎಪಿ ಸಂಘಟನಾ ಕಾರ್ಯದರ್ಶಿ ಸುರೇಶ್ ರಾಥೋಡ್ ಮಾತನಾಡಿ, ರಸ್ತೆಗುಂಡಿಗಳನ್ನು ಸೂಕ್ತ ರೀತಿಯಲ್ಲಿ ಮುಚ್ಚಬೇಕಿತ್ತು. ಅದು ಆಗಿಲ್ಲ. ಕನಿಷ್ಠಪಕ್ಷ ರಸ್ತೆ ಗುಂಡಿಗಳಿಂದ ಗಾಯವಾದವರಿಗೆ, ಜೀವ ಬಿಟ್ಟವರ ಕುಟುಂಬದವರಿಗೆ ಪರಿಹಾರ ನೀಡಲೂ ಬಿಜೆಪಿ ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂದರು.
ಬೆಂಗಳೂರಿಗರಿಗೆ ಪದೇ ಪದೆ ಸರ್ಕಾರ, ಬಿಬಿಎಂಪಿ ವಂಚನೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರು, ಶಾಸಕರು, ಅಧಿಕಾರಿಗಳು ಯಾರೂ ಕೂಡ ಸಂತ್ರಸ್ತರನ್ನು ಭೇಟಿಯಾಗಿ ಸಾಂತ್ವನ ಹೇಳುವ ಸೌಜನ್ಯ ತೋರುತ್ತಿಲ್ಲ. ರಾಜ್ಯ ಹೈಕೋರ್ಟ್ ಪದೇಪದೇ ಛೀಮಾರಿ ಹಾಕಿದರೂ ತಲೆಕೆಡಿಸಿಕೊಳ್ಳದಷ್ಟು ಈ ಬಿಜೆಪಿ ಸರ್ಕಾರ ಹಾಗೂ ಬಿಬಿಎಂಪಿ ಭಂಡತನ ಮೆರೆಯುತ್ತಿದೆ. ಪದೇ ಪದೆ ಗುಡುವು ಮುಂದಕ್ಕೆ ಹಾಕುವ ಮೂಲಕ ಬೆಂಗಳೂರಿಗರನ್ನು ವಂಚಿಸಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಮಂಗಳವಾರವಷ್ಟೇ ರಾಜಾಜಿನಗರ ಸಮೀಪದ ಸುಬ್ರಹ್ಮಣ್ಯ ನಗರದ 2ನೇ ಮುಖ್ಯರಸ್ತೆಯಲ್ಲಿ 55 ವರ್ಷದ ವ್ಯಕ್ತಿ ಕುಮಾರ್ ಎಂಬುವವರು ಸಾವಿಗೀಡಾದರು. ಓವರ್ಟೇಕ್ ವೇಳೆ ಮೃತ ಬೈಕ್ ಸ್ಕಿಡ್ ಆಗಿದ್ದರಿಂದ ಈ ಘಟನೆಯ ಹೊಣೆಯನ್ನು ಬಿಬಿಎಂಪಿ ಹೊರಲು ಸಿದ್ಧರಿರಲಿಲ್ಲ. ಅಂಕಿ ಅಂಶಗಳ ಪ್ರಕಾರ ಒಂದು ವರ್ಷದಲ್ಲಿ ರಸ್ತೆಗುಂಡಿಯಿಂದ 9ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications